ಸೋಮವಾರಪೇಟೆ, ಜ. ೯: ಕಸ್ತೂರಿ ರಂಗನ್ ವರದಿ ಅನುಷ್ಠಾನ, ಸಿ ಮತ್ತು ಡಿ ಜಾಗ ಸಮಸ್ಯೆಯ ಬಗ್ಗೆ ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ತಟದಲ್ಲಿರುವ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಆವರಣದಲ್ಲಿ ಗ್ರಾಮಸ್ಥರು, ಜನಪ್ರತಿನಿಧಿಗಳು, ಕಂದಾಯ ಹಾಗೂ ಅರಣ್ಯ ಇಲಾಖಾಧಿಕಾರಿಗಳನ್ನು ಒಳಗೊಂಡAತೆ ಸಭೆ ಜರುಗಿ, ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆಗಳು ನಡೆದವು.ಕುಮಾರಳ್ಳಿ ಗ್ರಾಮಸ್ಥರ ಒಕ್ಕೂಟದ ವತಿಯಿಂದ ಹೆಗ್ಗಡಮನೆ ಶಾಂತಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ, ಅರಣ್ಯದಂಚಿನ ಗ್ರಾಮಗಳ ನಿವಾಸಿಗಳಿಗೆ ಮಾರಕವಾಗಿರುವ ಕಸ್ತೂರಿರಂಗನ್ ವರದಿಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸದಂತೆ ಕುಮಾರಳ್ಳಿ, ಕೊತ್ನಳ್ಳಿ ವ್ಯಾಪ್ತಿಯ ಗ್ರಾಮಸ್ಥರು ಒತ್ತಾಯಿಸಿದರು.ಜಿಲ್ಲೆಯ ಜನವಸತಿ ಪ್ರದೇಶದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಯಾವದೇ ಕಾರಣಕ್ಕೂ ಅನುಷ್ಠಾನಗೊಳಿಸಲು ಆಸ್ಪದ ನೀಡುವದಿಲ್ಲ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಯ ನೀಡಿದರೆ, ಅರಣ್ಯದಂಚಿನ ಜನರಿಗೆ ಮೂಲಭೂತ ಸೌಕರ್ಯ, ಸರ್ಕಾರದ ಸವಲತ್ತುಗಳನ್ನು ಒದಗಿಸುವದು ನಮ್ಮೆಲ್ಲರ ಕರ್ತವ್ಯ ಎಂದು ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ರವಿಕುಶಾಲಪ್ಪ ತಿಳಿಸಿದರು. ಇದರೊಂದಿಗೆ ಅರಣ್ಯ ಇಲಾಖಾ ಸುಪರ್ದಿಯಲ್ಲಿರುವ ೨೭೩೭ ಏಕರೆ ಸಿ ಮತ್ತು ಡಿ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಸ್ ನೀಡಲು ಕ್ರಮ ವಹಿಸಲಾಗುವದು ಎಂದು ಎಸಿಸಿಫ್ ನೆಹರು ಭರವಸೆ ನೀಡಿದ್ದರಿಂದ ಈ ವ್ಯಾಪ್ತಿಯ ಸಾರ್ವಜನಿಕರಲ್ಲಿ ಸದ್ಯಕ್ಕೆ ನೆಮ್ಮದಿಯ ಭಾವ ಮೂಡುವಂತಾಯಿತು.

ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಹಲವಷ್ಟು ವಿಚಾರಗಳು ಚರ್ಚೆಗೆ ಬಂದವು. ಪುಷ್ಪಗಿರಿ ಅರಣ್ಯ ಸುತ್ತಮುತ್ತಲಿನ ಗ್ರಾಮಗಳ ಕೃಷಿಕರು ೫ ಎಕರೆ ಭೂಮಿ ಹೊಂದಿದ್ದರೆ, ಒಂದು ಎಕರೆಗೆ ಮಾತ್ರ ದಾಖಲಾತಿ ಇರುತ್ತದೆ. ಈ ಕಾರಣದಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬೇಕಾಗಿದೆ. ಆರ್.ಟಿ.ಸಿಯಲ್ಲಿ ಅರಣ್ಯ ಎಂಬುದನ್ನು ಸರ್ಕಾರ ತೆಗೆಯಬೇಕು. ಪೈಸಾರಿ ಎಂದು ನಮೂದಾಗಬೇಕು ಅಲ್ಲಿಯವರೆಗೆ ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಅಭಿಪ್ರಾಯಿಸಿದರು.

ಕಸ್ತೂರಿರಂಗನ್ ವರದಿಯ ಅನುಷ್ಠಾನದ ಆತಂಕ ಪುಷ್ಪಗಿರಿ ತಪ್ಪಲಿನ ಗ್ರಾಮಗಳನ್ನು ಕಾಡುತ್ತಿದೆ. ಈಗಾಗಲೇ ಕುಮಾರಳ್ಳಿ, ಕೊತ್ನಳ್ಳಿ, ಗ್ರಾಮದ ನಿವಾಸಿಗಳ ಆರ್.ಟಿ.ಸಿ.ಯಲ್ಲಿ ಸಿ ಮತ್ತು ಡಿ ಎಂಬುದನ್ನು ತೆಗೆದು ಅರಣ್ಯ ಎಂಬುದಾಗಿ ಬರುತ್ತಿದೆ. ಆಸ್ತಿಯನ್ನು ಕಳೆದುಕೊಳ್ಳುವ ಭಯ ಕಾಡುತ್ತಿದೆ ಎಂದು ಬಿ.ಪಿ.ಅನಿಲ್ ಕುಮಾರ್ ಹೇಳಿದರು.

ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿ ಮತ್ತು ಡಿ ಭೂಮಿಯನ್ನು ಕಂದಾಯ ಇಲಾಖೆಗೆ ಸೇರ್ಪಡೆಗೊಳಿಸಿದೆ. ಆದರೆ ಕೊತ್ನಳ್ಳಿ, ಮತ್ತು ಕುಮಾರಳ್ಳಿ ಗ್ರಾಮಗಳು ಈ ಸೌಲಭ್ಯಗಳಿಂದ ವಂಚಿತವಾಗಿವೆ ಎಂದು ಆ ಭಾಗದ ಗ್ರಾಮಸ್ಥರು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಅವಕಾಶ ಕೊಡುವುದಿಲ್ಲ. ವರದಿ ಅನುಷ್ಠಾನ ಮಾಡದಂತೆ ಈಗಾಗಲೇ ರಾಜ್ಯ

(ಮೊದಲ ಪುಟದಿಂದ) ಸರ್ಕಾರ ತೀರ್ಮಾನ ಕೈಗೊಂಡಿದೆ. ಪಶ್ಚಿಮಘಟ್ಟ ಅರಣ್ಯದ ಗಡಿಯನ್ನೇ ಸೂಕ್ಷö್ಮಪರಿಸರ ವಲಯ ಎಂದು ಗುರುತಿಸಬೇಕು. ಯಾವುದೇ ಕಾರಣಕ್ಕೂ ಸ್ಥಳೀಯ ಗ್ರಾಮಸ್ಥರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಲಾಗುವುದು. ಅರಣ್ಯ ಇಲಾಖೆಯವರು ಗ್ರಾಮಸ್ಥರಿಗೆ ಕಿರುಕುಳ ನೀಡಬಾರದು. ಮೀಸಲು ಅರಣ್ಯ ಗಡಿಯ ಹೊರಗೆ ಕೃಷಿ ಚಟುವಟಿಕೆ ಕೈಗೊಳ್ಳಲು ತೊಂದರೆ ನೀಡಬಾರದು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸಂಬAಧಿತ ಅಧಿಕಾರಿಗಳಿಗೆ ಸೂಚಿಸಿದರು.

ಅರಣ್ಯದಂಚಿನ ಗ್ರಾಮದ ನಿವಾಸಿಗಳಿಗೆ ಸೌಲಭ್ಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅರಣ್ಯ ಇಲಾಖೆಯವರು ಮಾನವೀಯತೆಯಿಂದ ಕೆಲಸ ಮಾಡಬೇಕು. ಸರ್ಕಾರದ ಕಾನೂನಿನ ಒಳಗಡೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನೇಕ ಮಾರ್ಗಗಳಿವೆ. ಅಧಿಕಾರಿ ಕೊಟ್ಟ ಭರವಸೆಗಳನ್ನು ಈಡೇರಿಸಬೇಕು. ಎರಡು ತಿಂಗಳಲ್ಲಿ ಮತ್ತೊಂದು ಸಭೆಯನ್ನು ಕರೆದು ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗುವುದು ಎಂದು ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ರವಿಕುಶಾಲಪ್ಪ ತಿಳಿಸಿದರು.

ಕುಮಾರಳ್ಳಿ ಗ್ರಾಮದ ಸ.ನಂ.೧/೯ಪಿ೯೯ ರ ವಿಸ್ತೀರ್ಣ ೧೧೪೯೪ ಎಕರೆ ಭೂಪ್ರದೇಶವು ೨೦೧೯ರ ವರೆಗೆ ಕಂದಾಯ ಇಲಾಖೆಯಲ್ಲಿದ್ದು, ೨೦೨೦ರಲ್ಲಿ ಈ ಭೂಭಾಗವು ಅಧಿಕೃತ ಆದೇಶವಿಲ್ಲದೆ ಏಕಾಏಕಿ ಪುಷ್ಪಗಿರಿ ವನ್ಯಧಾಮಕ್ಕೆ ಸೇರ್ಪಡೆಯಾಗಿರುತ್ತದೆ. ಈ ಭೂಭಾಗಕ್ಕೆ ನಕಾಶೆಯಾಗಲಿ, ನಿರ್ಧಿಷ್ಟ ಗಡಿರೇಖೆ ಇರುವುದಿಲ್ಲ. ಈಗ ಆರ್.ಟಿ.ಸಿಯಲ್ಲಿ ಅರಣ್ಯ ಎಂಬುದಾಗಿ ಬರುತ್ತಿದೆ. ತಕ್ಷಣವೇ ಗಡಿಯನ್ನು ಗುರುತಿಸಬೇಕು. ಜನವಸತಿ ಹಾಗು ವನ್ಯಜೀವಿ ಘಟಕಕ್ಕೆ ಸೇರಿದ ಭೂಭಾಗವನ್ನು ಬೇರ್ಪಡಿಸಬೇಕು ಎಂದು ಕೊತ್ನಳ್ಳಿ ಗ್ರಾಮದ ಅರುಣ್ ಮತ್ತು ಕಿರಣ್ ಸೇರಿದಂತೆ ಇತರರು ಒತ್ತಾಯಿಸಿದರು.

ವನ್ಯಧಾಮದಲ್ಲಿ ಸೇರ್ಪಡೆಗೊಂಡಿರುವ ಜಾಗ ಕಂದಾಯ ಇಲಾಖೆಗೆ ಬಂದರೆ, ಆರ್.ಟಿ.ಸಿಯಲ್ಲಿ ಅರಣ್ಯದ ಬದಲಾಗಿ ಪೈಸಾರಿ ಎಂದು ಬರುತ್ತದೆ. ಹೀಗಾದರೆ ಈ ಭಾಗದ ಮಂದಿ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಬಗೆಹರಿದಂತಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅಭಿಪ್ರಾಯಿಸಿದರು.

ಈ ಹಿಂದೆ ಪುಷ್ಪಗಿರಿ ವನ್ಯಜೀವಿಧಾಮದ ಜಾಗ ೮,೭೫೬ ಎಕರೆ ಇದ್ದು, ಪ್ರಸ್ತುತ ೧೧,೪೯೪ ಎಕರೆ ವನ್ಯಧಾಮದ ವ್ಯಾಪ್ತಿಯಲ್ಲಿದೆ. ಹೆಚ್ವುವರಿ ೨೭೩೭ ಎಕರೆ ಜಾಗವನ್ನು ನಿಯಮಾನುಸಾರವಾಗಿ ಕಂದಾಯ ಇಲಾಖೆಗೆ ಬಿಟ್ಟುಕೊಡಲು ಕ್ರಮ ವಹಿಸಲಾಗುವದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಅವರು ಗ್ರಾಮಸ್ಥರಿಗೆ ಭರವಸೆ ನೀಡಿದ ಹಿನ್ನೆಲೆ, ಗ್ರಾಮಸ್ಥರಲ್ಲಿ ಕೊಂಚ ಸಮಾಧಾನ ಮೂಡಿತು.

ಅರಣ್ಯ ಇಲಾಖೆ ನೀಡುವ ೨೭೩೭ ಎಕರೆ ಜಾಗವನ್ನು ಕಂದಾಯ ಇಲಾಖೆಗೆ ಪಡೆದುಕೊಳ್ಳಲು ಕ್ರಮಕೈಗೊಳ್ಳಲಾಗುವುದು. ನಂತರ ಸರ್ಕಾರದ ಮಾರ್ಗಸೂಚಿಯಂತೆ ಈ ಜಾಗದ ಬಗ್ಗೆ ಕಂದಾಯ ಇಲಾಖೆ ಕ್ರಮವಹಿಸಲಿದೆ ಎಂದು ತಹಶೀಲ್ದಾರ್ ಗೋವಿಂದರಾಜು ಹೇಳಿದರು. ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫಾರಂ ನಂ.೫೭ರಲ್ಲಿ ೩೪೦ ಅರ್ಜಿಗಳು ಹಾಗು ೯೪/ಸಿಯಲ್ಲಿ ೨೬೦ ಅರ್ಜಿಗಳು ಸ್ವೀಕೃತವಾಗಿದ್ದು, ಮುಂದಿನ ದಿನಗಳಲ್ಲಿ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ಹೆಗ್ಗಡಮನೆ, ಸುಬ್ರಮಣ್ಯ ರಸ್ತೆ ನಿರ್ಮಾಣವಾದರೆ, ಪ್ರವಾಸೋಧ್ಯಮ ಬೆಳೆವಣಿಗೆ ಸಾಧ್ಯವಾಗಲಿದೆ. ಶೀಘ್ರ ಹಕ್ಕುಪತ್ರ ವಿತರಿಸಬೇಕು. ಬೆಳೆ ರಕ್ಷಣೆಗೆ ಕೋವಿ ಪರವಾನಗಿ ನಿಯಮ ಸರಳೀಕರಿಸಿ ನೀಡಬೇಕು. ಮಲ್ಲಳ್ಳಿ ಗ್ರಾಮದ ರಸ್ತೆ ಡಾಮರೀಕರಣಗೊಳ್ಳಬೇಕು. ಮಲ್ಲಳ್ಳಿ ಜಲಪಾತದಲ್ಲಿ ಕೇಬಲ್ ಕಾರು ಯೋಜನೆ ರೂಪಿಸಬೇಕು ಎಂದು ಗ್ರಾಮಸ್ಥರು ಹಲವು ಬೇಡಿಕೆಗಳನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿ ದೇವಾಲಯ ಸಮಿತಿ ಅಧ್ಯಕ್ಷರಾದ ಟಿ.ಪಿ.ಚಂಗಪ್ಪ, ಜಿಪಂ. ಸದಸ್ಯ ಬಿ.ಜೆ.ದೀಪಕ್, ತಾಪಂ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್, ಸದಸ್ಯ ಬಿ.ಎ.ಧರ್ಮಪ್ಪ, ಉದ್ಯಮಿ ಹರಪಳ್ಳಿ ರವೀಂದ್ರ ಉಪಸ್ಥಿತರಿದ್ದರು.