ಶ್ರೀಮಂಗಲ, ಡಿ. 11: ದಕ್ಷಿಣ ಕೊಡಗಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಗೇರಿ ಗ್ರಾಮಕ್ಕೆ ಕೋವಿಡ್-19 ಲಾಕ್‍ಡೌನ್ ನಂತರ ಗ್ರಾಮಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‍ಗಳು ಸ್ಥಗಿತವಾಗಿದ್ದು, ಜಿಲ್ಲಾಧಿಕಾರಿಯವರು ಕೂಡಲೇ ಈ ಗ್ರಾಮಕ್ಕೆ ಬರುತ್ತಿದ್ದ ಬಸ್‍ಗಳನ್ನು ಪುನರಾರಂಭಿಸಬೇಕೆಂದು ಜಿಲ್ಲಾ ಸಾರ್ವಜನಿಕ ಹಿತರಕ್ಷಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ಅವರು ಒತ್ತಾಯಿಸಿದ್ದಾರೆ.

ಪಿರಿಯಾಪಟ್ಟಣ ಹಾಗೂ ಮೈಸೂರು ಡಿಪೋಗೆ ಸೇರಿದ ಸಾರಿಗೆ ಸಂಸ್ಥೆಯ ಬಸ್‍ಗಳು ಕೊಟ್ಟಗೇರಿ ಗ್ರಾಮಕ್ಕೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಬಂದು ಹೋಗುತ್ತಿತ್ತು, ಇದರಿಂದ ಗ್ರಾಮಸ್ಥರಿಗೆ ತುಂಬಾ ಪ್ರಯೋಜನವಾಗುತ್ತಿತ್ತು. ಇದೀಗ ಬಸ್ ಸ್ಥಗಿತವಾಗಿರುವುದರಿಂದ ಗ್ರಾಮಸ್ಥರಿಗೆ, ಕಾರ್ಮಿಕರಿಗೆ, ವಾಹನ ರಹಿತರಿಗೆ ಮತ್ತು ರೈತವರ್ಗ ಮತ್ತು ಉದ್ಯೋಗಕ್ಕೆ ತೆರಳುವವರಿಗೆ ತೊಂದರೆಯಾಗಿದೆ. ಆದ್ದರಿಂದ ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.