ಪೆÇನ್ನಂಪೇಟೆ, ಡಿ.6: ಚುನಾವಣೆ ಸಂದರ್ಭದಲ್ಲಿ ಲೈಸೆನ್ಸುದಾರರು ಹೊಂದಿರುವ ತಮ್ಮ ಅಧಿಕೃತ ಶಸ್ತ್ರಾಸ್ತ್ರಗಳನ್ನು ಪೆÇಲೀಸ್ ಠಾಣೆಯಲ್ಲಿ ಠೇವಣಿ ಇರಿಸಬೇಕೆಂಬ ಆದೇಶ ಅವೈಜ್ಞಾನಿಕ ವಾಗಿದೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಲೈಸೆನ್ಸ್ದಾರರಿಗೆ ಇದು ತೀವ್ರ ಸಮಸ್ಯೆಯಾಗುತ್ತಿದೆ ಎಂದು ಹೇಳಿರುವ ಜಿಲ್ಲಾ ಕಾಂಗ್ರೆಸ್ ವಕ್ತಾರ ಆಪಟ್ಟೀರ ಎಸ್. ಟಾಟು ಮೊಣ್ಣಪ್ಪ ಅವರು, ಜಿಲ್ಲಾಧಿಕಾರಿಗಳು ತಮ್ಮ ಆದೇಶವನ್ನು ಕೂಡಲೇ ಪರಿಷ್ಕರಿಸದಿದ್ದಲ್ಲಿ ಶೀಘ್ರದಲ್ಲೆ ನ್ಯಾಯಾಂಗ (ಮೊದಲ ಪುಟದಿಂದ) ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಚುನಾವಣೆ ಸಂದರ್ಭದಲ್ಲಿ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಬೇಕೆಂದು ಚುನಾವಣಾ ಆಯೋಗ ಆದೇಶಿಸುತ್ತದೆ. ಇದನ್ನೇ ನೆಪವಾಗಿಸುವ ಮತ್ತು ಇದಕ್ಕೆ ತನ್ನದೇ ಆದ ಅರ್ಥ ಕಲ್ಪಿಸುವ ಜಿಲ್ಲಾಡಳಿತ ಎಲ್ಲಾ ಲೈಸೆನ್ಸುದಾರರು ತಮ್ಮ ಶಸ್ತ್ರಾಸ್ತ್ರಗಳನ್ನು ಠೇವಣಿಯಿರಿಸಬೇಕೆಂದು ತಪ್ಪು ಆದೇಶ ಜಾರಿ ಮಾಡುತ್ತದೆ. ಆದರೆ ಇದರ ಸಾಧಕ-ಬಾಧಕಗಳ ಬಗ್ಗೆ ಜಿಲ್ಲಾಡಳಿತ ಗಮನವೇ ಹರಿಸುವುದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂದಿನ ಚುನಾವಣೆಗಳಲ್ಲಿ ತಮ್ಮ ಶಸ್ತ್ರಾಸ್ತ್ರಗಳನ್ನು ದುರುಪಯೋಗಪಡಿಸಿಕೊಂಡವರು, ಕೊಲೆ-ಸುಲಿಗೆ-ದರೋಡೆ ಇತ್ಯಾದಿ ಪ್ರಕರಣಗಳಲ್ಲಿ ಅಪರಾಧಿಗಳಾದವರು, ಕೋಮು ಗೂಂಡಾಗಳು, ರೌಡಿ ಪಟ್ಟಿಯಲ್ಲಿ ಇರುವವರು, ಹೀಗೆ ಕ್ರಿಮಿನಲ್ ಹಿನ್ನೆಲೆ ಉಳ್ಳವರು ಲೈಸೆನ್ಸ್ ಮೂಲಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ ಅಂಥವುಗಳನ್ನು ಮಾತ್ರ ಚುನಾವಣೆ ಸಂದರ್ಭದಲ್ಲಿ ಠೇವಣಿ ಇರಿಸಬೇಕು ಎಂಬುದು ಚುನಾವಣಾ ಆಯೋಗದ ಉದ್ದೇಶವಾಗಿದೆ. ಆದರೆ ಕೊಡಗು ಸೇರಿದಂತೆ ಕರ್ನಾಟಕದಲ್ಲಿ ಲೈಸೆನ್ಸ್ ಹೊಂದಿರುವ ಪ್ರತಿಯೊಬ್ಬರು ತಮ್ಮ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಬೇಕಾಗಿದೆ. ಇದು ಸಮಾಜದ ಪ್ರತಿಯೊಬ್ಬರನ್ನು ಅಪರಾಧಿಗಳಂತೆ ಕಾಣುವ ಅಧಿಕಾರಿಗಳ ಮನೋಪ್ರವೃತ್ತಿಯಾಗಿದೆ ಎಂದು ಹೇಳಿರುವ ಟಾಟು ಮೊಣ್ಣಪ್ಪ ಅವರು, ಕೊಡಗಿನ ಎಲ್ಲಾ ಲೈಸೆನ್ಸುದಾರರು ತಮ್ಮ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಬೇಕೆಂಬ ಜಿಲ್ಲಾಧಿಕಾರಿಗಳ ಆದೇಶ ಸರಿಯಲ್ಲ. ಈ ರೀತಿಯ ಕುರುಡು ಆದೇಶವನ್ನು ಕರ್ನಾಟಕದಲ್ಲಿ ಮಾತ್ರ ಜಾರಿ ಮಾಡಲಾಗುತ್ತಿದೆ ಎಂಬ ಮಾಹಿತಿಯಿರುವುದಾಗಿ ಹೇಳಿದರು.
ಕೊಡಗಿನಲ್ಲಿ ಇದೀಗ ಕಾಫಿ ಕುಯಿಲಿನ ಸಮಯ ಸಮೀಪಿಸುತ್ತಿದೆ. ಅಲ್ಲದೆ ಕರಿಮೆಣಸಿನ ಫಸಲು ಕುಯ್ಲಿಗೆ ಸಿದ್ಧವಾಗುತ್ತಿದೆ. ಈ ಸಮಯದಲ್ಲಿ ಬೆಳೆಯ ರಕ್ಷಣೆಗಾಗಿ ಹೊಂದಿರುವ ಬಂದೂಕುಗಳನ್ನು ಠೇವಣಿ ಇರಿಸುವುದು ಎಷ್ಟು ಸರಿ? ಕೊಡಗಿನಲ್ಲಿ ಕಾಡಾನೆ ಮತ್ತು ಹುಲಿ ಸೇರಿದಂತೆ ವನ್ಯಜೀವಿಗಳ ಹಾವಳಿ ನಿರಂತರವಾಗಿದ್ದು, ದಿನೇ ದಿನೇ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ಅವುಗಳಿಂದ ಕೃಷಿಕರು ತಮ್ಮ ಬೆಳೆಗಳನ್ನು ರಕ್ಷಿಸುವುದು ಹೇಗೆ? ಕೃಷಿಕರಿಗೆ ಕಾಫಿ ಮತ್ತು ಕರಿಮೆಣಸು ಕುಯಿಲಿನ ಸಮಯದಲ್ಲಿ ಶಸ್ತ್ರಾಸ್ತ್ರಗಳು ತೀರಾ ಅಗತ್ಯವಿರುತ್ತದೆ. ಜಿಲ್ಲೆಯ ಹಲವಾರು ಕುಗ್ರಾಮಗಳಲ್ಲಿ ಸಾಕಷ್ಟು ಒಂಟಿ ಮನೆಗಳಿದ್ದು, ಅಲ್ಲಿ ಸಮಾಜಘಾತಕರಿಂದ ಕಳ್ಳತನದ ಭಯವಿದೆ. ಅಲ್ಲದೆ ಜಿಲ್ಲೆಯ ಕೆಲ ಗಡಿಪ್ರದೇಶಗಳಲ್ಲಿ ಹಿಂದೆ ನಕ್ಸಲರು ಕಾಣಿಸಿಕೊಂಡ ನಿದರ್ಶನಗಳಿದೆ. ಕೃಷಿಕರು ಮತ್ತು ಆತ್ಮ ರಕ್ಷಣೆಗಾಗಿ ಬಂದೂಕು ಹೊಂದಿರುವವರಿಗೆ ಅದು ಸದಾ ಕಾಲ ಅವರ ಬಳಿ ಇರಬೇಕಾಗುತ್ತದೆ ಎಂದು ವಿವರಣೆ ನೀಡಿರುವ ಟಾಟು ಮೊಣ್ಣಪ್ಪ ಅವರು, ಒಂದು ವೇಳೆ ಈ ಕುರಿತು ಜಿಲ್ಲೆಯಲ್ಲಿ ಯಾವುದೇ ಅನಾಹುತ ನಡೆದರೂ ಅದರ ನೇರ ಹೊಣೆಯನ್ನು ಜಿಲ್ಲಾಡಳಿತ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಗೋಷ್ಠಿಯಲ್ಲಿ ತಿತಿಮತಿಯ ವಿ.ಎಸ್. ಸತೀಶ್ ಉಪಸ್ಥಿತರಿದ್ದರು.