ಸೋಮವಾರಪೇಟೆ,ನ.20: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ನೂತನವಾಗಿ ಕೈಗೊಳ್ಳಲಾಗುವ ರೂ. 21.68 ಲಕ್ಷ ವೆಚ್ಚದ ವಿವಿಧ ರಸ್ತೆ, ತಡೆಗೋಡೆ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಚಾಲನೆ ನೀಡಿದರು.

ವಿಧಾನ ಪರಿಷತ್ ಸದಸ್ಯರ ಅನುದಾನದಡಿ ರೂ. 5 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಬಜೆಗುಂಡಿ ಗ್ರಾಮದ ಮಲ್ಲಮ್ಮನವರ ಮನೆ ಪಕ್ಕದ ರಸ್ತೆಗೆ ತಡೆಗೋಡೆ ನಿರ್ಮಾಣ, ಅಣ್ಣಪ್ಪ ಮನೆಯಿಂದ ತಿಮ್ಮಪ್ಪ ಮನೆವರೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣ (5 ಲಕ್ಷ), ಗಂಗಾಧರ ಮನೆಯಿಂದ ಸರೋಜ ಮನೆವರೆಗೆ ಕಾಂಕ್ರಿಟ್ ರಸ್ತೆ (5 ಲಕ್ಷ) ಕಾಮಗಾರಿಗೆ ವೀಣಾ ಅಚ್ಚಯ್ಯ ಅವರು ಭೂಮಿ ಪೂಜೆ ನೆರವೇರಿಸಿದರು.

ಇದರೊಂದಿಗೆ ಸಮಾಜ ಕಲ್ಯಾಣ ಇಲಾಖೆ ಮೂಲಕ ಕೈಗೊಳ್ಳಲಾಗುವ ರೂ. 5ಲಕ್ಷ ವೆಚ್ಚದ ಕೃಷ್ಣಪ್ಪ ಮನೆವರೆಗೆ ಕಾಂಕ್ರಿಟ್ ರಸ್ತೆ, ತಾಲೂಕು ಪಂಚಾಯಿತಿ ಸದಸ್ಯ ಬಿ.ಬಿ. ಸತೀಶ್ ಅವರು ನೀಡಿದ 1.68 ಲಕ್ಷ ಅನುದಾನದಡಿ ನಿರ್ಮಾಣವಾಗುವ ಹೊನ್ನಮ್ಮ ಅವರ ಮನೆ ವರೆಗೆ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭ ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಗ್ರಾ.ಪಂ. ಮಾಜೀ ಸದಸ್ಯರುಗಳಾದ ಕೆ.ಎ ಯಾಕೂಬ್, ಭಾಗ್ಯ ಮಂಜುನಾಥ್, ವೀಣಾ, ಕವಿತ, ಬಿ.ಎನ್. ಬಸವರಾಜು, ಪ.ಪಂ. ಸದಸ್ಯ ಉದಯಶಂಕರ್, ಕಾಂಗ್ರೆಸ್ ಮುಖಂಡರಾದ ಸುನಿಲ್, ಹೆಚ್.ವಿ. ಮಿಥುನ್, ಬಿ.ಈ. ಜಯೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.