ಮಡಿಕೇರಿ, ನ. 19: ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ 131ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ನೆಹರು ಅವರು ಪ್ರಧಾನಿಯಾಗಿ ಆಡಳಿತ ನಡೆಸಿ ದೇಶವನ್ನು ನೂರು ವರ್ಷಗಳ ಮುಂದಕ್ಕೆ ಕೊಂಡೊಯ್ದರೆ, ಬಿ.ಜೆ.ಪಿ. ಇಪ್ಪತ್ತು ವರ್ಷ ಹಿಂದಕ್ಕೆ ತಳ್ಳಿದೆ ಎಂದರು. ಕೆಪಿಸಿಸಿ ಹಿರಿಯ ಮುಖಂಡ ಟಿ. ಪಿ. ರಮೇಶ್ ಮಾತನಾಡಿ, ನೆಹರೂ ಅವರ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಯುವ ಅನಿವಾರ್ಯತೆ ಇದೆ ಎಂದರು. ಕೆಪಿಸಿಸಿ ಕಾರ್ಯದರ್ಶಿ ಟಿ. ಎಂ. ಶಹೀದ್, ಜಿ.ಪಂ. ಮಾಜಿ ಸದಸ್ಯ ಕೊಕ್ಕಲೆರ ಸುಜುತಿಮ್ಮಯ್ಯ ಮಾತನಾಡಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಕೆ.ಇ. ಮ್ಯಾಥ್ಯು, ಮಾಜಿ ಮೂಡಾ ಅಧ್ಯಕ್ಷ ಬಿ.ಕೆ. ಕೃಷ್ಣ, ನಗರ ಸಭೆ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಉದಯ್‍ಕುಮಾರ್, ಯತೀಶ್‍ಕುಮಾರ್, ತಜಸ್ಸುಂ, ಸೇವಾದಳ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಯುವಕಾಂಗ್ರೆಸ್ ನಗರಾಧ್ಯಕ್ಷ ಸದಾ ಮುದ್ದಪ್ಪ, ಡಿಸಿಸಿ ಸದಸ್ಯೆ ಗೀತಾ ಧರ್ಮಪ್ಪ, ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ನಾಪಂಡ ರವಿ, ಬ್ಲಾಕ್ ಅಲ್ಪಸಂಖ್ಯಾತ ಅಧ್ಯಕ್ಷ ಕಲೀಲ್ ಬಾಷ, ನಗರ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮೊದಲಾದವರು ಭಾಗವಹಿಸಿದ್ದರು.