ಕುಶಾಲನಗರ, ನ. 19: ಕಳೆದ ಕೆಲವು ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರ ಹೊಸ ತಾಲೂಕು ರಚನೆ ಪ್ರಕ್ರಿಯೆಗೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ್ದು, ನೂತನ ತಾಲೂಕಿನ ಗಡಿ ಗುರುತು ಮತ್ತು ಗ್ರಾಮಗಳ ವಿವರಗಳ ಪ್ರಕಟಣೆಯ ಘೋಷಣೆ ಹೊರಡಿಸಿದೆ. ಕೊಡಗು ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದಿಂದ ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಇದೀಗ ಅಧಿಕೃತ ಸೂಚನೆಯಂತೆ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳ ವೃತ್ತಗಳನ್ನು ಗುರುತು ಮಾಡಿ ಅವುಗಳಿಗೆ ಸೇರುವ ಗ್ರಾಮಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಅಧಿಸೂಚನೆಯಲ್ಲಿ ಕುಶಾಲನಗರ ತಾಲೂಕಿಗೆ ಸೇರ್ಪಡೆಗೊಳ್ಳುವ ಹೋಬಳಿ ಮತ್ತು ಗ್ರಾಮಗಳ ವಿವರಗಳನ್ನು ಹಾಗೂ ಮೂಲ ತಾಲೂಕಿನಲ್ಲಿ ಉಳಿಯುವ ಹೋಬಳಿ ಮತ್ತು ಗ್ರಾಮಗಳ ವಿವರಗಳನ್ನು ನೀಡಲಾಗಿದೆ.

ಪ್ರಸಕ್ತ ಕುಶಾಲನಗರ, ಸುಂಟಿಕೊಪ್ಪ ಹೋಬಳಿಗಳಿಗೆ ಗ್ರಾಮಗಳನ್ನು ವಿಂಗಡಿಸಲಾಗಿದ್ದು ಮುಳ್ಳುಸೋಗೆ, ಬಸವನಹಳ್ಳಿ, ಬೈಚನಹಳ್ಳಿ ಗ್ರಾಮಗಳನ್ನು ಮುಳ್ಳುಸೋಗೆ ಗ್ರಾಮ ಲೆಕ್ಕಿಗರ ವ್ಯಾಪ್ತಿಗೆ ಒಳಪಡಿಸಿದರೆ ಕೂಡಿಗೆ ವ್ಯಾಪ್ತಿಯ ಕೂಡಿಗೆ, ಕೂಡುಮಂಗಳೂರು ಗ್ರಾ.ಪಂ.ನ ಹಳ್ಳಿಗಳನ್ನು, ನಂಜರಾಯಪಟ್ಟಣ, ರಂಗಸಮುದ್ರ, ವಾಲ್ನೂರು ತ್ಯಾಗತ್ತೂರು, ರಸೂಲ್‍ಪುರ, ಅಭ್ಯತ್‍ಮಂಗಲ ವ್ಯಾಪ್ತಿಗೆ ಅಭ್ಯತ್‍ಮಂಗಲ, ಕೂಡ್ಲೂರು ಚೆಟ್ಟಳ್ಳಿ, ನೆಲ್ಲಿಹುದಿಕೇರಿ, ಹೆಬ್ಬಾಲೆ ವ್ಯಾಪ್ತಿಗೆ ಹೆಬ್ಬಾಲೆ, ಮರೂರು, ಹುಲುಸೆ, ಶಿರಂಗಾಲ ಗ್ರಾಮ ವ್ಯಾಪ್ತಿಗೆ ಶಿರಂಗಾಲ, ಮಣಜೂರು, ತೊರೆನೂರು ವೃತ್ತದ

(ಮೊದಲ ಪುಟದಿಂದ) ವ್ಯಾಪ್ತಿಯ ತೊರೆನೂರು, ಚಿಕ್ಕಅಳುವಾರ, ದೊಡ್ಡಅಳುವಾರ, ಅರಿಸಿನಗುಪ್ಪೆ, ಅಳಿಲುಗುಪ್ಪೆ, ಬಸರಿಗುಪ್ಪೆ, ಅಂದಾನಿಪುರ, ಗದ್ದೆಹೊಸಳ್ಳಿ ಸೇರಿದ್ದು ಸುಂಟಿಕೊಪ್ಪ ಹೋಬಳಿಯ ಉಲುಗುಲಿ ವ್ಯಾಪ್ತಿಗೆ ಉಲುಗುಲಿಯ ನಾರ್ಗಣೆ, ಸುಂಟಿಕೊಪ್ಪ ಪಟ್ಟಣ, ಕೆದಕಲ್ ವೃತ್ತಕ್ಕೆ ಕೆದಕಲ್, ಹಾಲೇರಿ, ಹೊರೂರು, ಮೋದೂರು, ಕೊಡಗರಹಳ್ಳಿ ವ್ಯಾಪ್ತಿಗೆ ಅಂದಗೋವೆ, ಕೊಡಗರಹಳ್ಳಿ, ಕಾನ್‍ಬೈಲ್, ಬೈಚನಹಳ್ಳಿ, ಹೇರೂರು, ಹಾದ್ರೆ, ಮುಳ್ಳೂರು, ಕಂಬಿಬಾಣೆ ಗ್ರಾಮದ ವೃತ್ತಕ್ಕೆ 7ನೇ ಹೊಸಕೋಟೆ, ಅತ್ತೂರು ನಲ್ಲೂರು, ನಾಕೂರು ಶಿರಂಗಾಲ ವ್ಯಾಪ್ತಿಯ ಪ್ರದೇಶಗಳು ಹಾಗೂ ಚೇರಳ ಶಿರಂಗಾಲ ವ್ಯಾಪ್ತಿಗೆ ಚೇರಳ ಶಿರಂಗಾಲ ಸೇರಿದಂತೆ ಚೇರಳ, ಶ್ರೀಮಂಗಲ, ಈರಳವಳಮುಡಿ ಕಾಂಡನಕೊಲ್ಲಿ ವ್ಯಾಪ್ತಿಯ ಕಾಂಡನಕೊಲ್ಲಿ, ಕೊಪ್ಪತ್ತೂರು, ಕಡಗದಾಳು ಸೇರಿದಂತೆ 29 ಕೇಂದ್ರಗಳ ವ್ಯಾಪ್ತಿಗಳು ಕುಶಾಲನಗರ ತಾಲೂಕಿಗೆ ಸೇರ್ಪಡೆಗೊಳ್ಳಲಿವೆ. ನೂತನ ತಾಲೂಕು ಗಡಿ ಭಾಗಗಳಾಗಿ ಪೂರ್ವಕ್ಕೆ ಮೈಸೂರು ಜಿಲ್ಲೆಯ ಗಡಿಭಾಗ, ಪಶ್ಚಿಮಕ್ಕೆ ಮಡಿಕೇರಿ ತಾಲೂಕು, ಉತ್ತರಕ್ಕೆ ಸೋಮವಾರಪೇಟೆ ತಾಲೂಕು ಹಾಗೂ ದಕ್ಷಿಣಕ್ಕೆ ವೀರಾಜಪೇಟೆ ತಾಲೂಕು ಗಡಿ ರೇಖೆಗಳಾಗಿ ಗುರುತಿಸಿ ಅಧಿಕೃತ ಪ್ರಕಟಣೆಯನ್ನು ಸರಕಾರ ಹೊರಡಿಸಿದೆ.

ಆಕ್ಷೇಪಣೆಗೆ ಅವಕಾಶ

ನೂತನ ತಾಲೂಕು ರಚನೆ ಆದೇಶದ ಸಂಬಂಧ ಗಡಿ ಗ್ರಾಮಗಳ ಗುರುತು ಪ್ರಕ್ರಿಯೆ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ನಿಗದಿತ ಅವಧಿಯೊಳಗೆ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಬಹುದಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. -ವರದಿ: ಚಂದ್ರಮೋಹನ್