ಪೆÇನ್ನಂಪೇಟೆ, ಅ. 30: ವೀರಾಜಪೇಟೆಯಲ್ಲಿರುವ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ನಿಯಮಿತ ಇದೀಗ ಕಳೆದ ಕೆಲ ದಿನಗಳಿಂದ ಮುಚ್ಚಲ್ಪಟ್ಟಿದ್ದು, ಸಂಘದ ಸದಸ್ಯರಿಗೆ ಮತ್ತು ಗ್ರಾಹಕರಿಗೆ ತೀವ್ರ ಆತಂಕ ಮೂಡಿಸಿದೆ. ಬ್ಯಾಂಕ್ ದಿವಾಳಿತನದಿಂದ ಠೇವಣಿದಾರರು ಮತ್ತು ಗ್ರಾಹಕರು ಗೊಂದಲದಲ್ಲಿದ್ದಾರೆ ಎಂದು ಹೇಳಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.), ಕಷ್ಟಪಟ್ಟು ದುಡಿದ ಬೆವರಿನ ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಿರಿಸಿರುವ ಠೇವಣಿದಾರರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದು. ಜೊತೆಗೆ ಬ್ಯಾಂಕಿನಿಂದ ಸಾಲ ಪಡೆದ ಸಾಲಗಾರರ ಹಣ ವಸೂಲಾತಿಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು, ಈ ಸಹಕಾರ ಸಂಘ ಕಳೆದ 10 ವರ್ಷಗಳಿಂದಲೇ ಹಳಿತಪ್ಪಿದೆ ಎಂಬುದು ಇದೀಗ ತಿಳಿದು ಬರುತ್ತಿರುವ ಸಂಗತಿಯಾಗಿದೆ. ಆದರೂ ಕಳೆದ 2019-20 ನೇ ಸಾಲಿನ ಮಹಾಸಭೆಯವರೆಗೂ ಈ ಸಹಕಾರ ಸಂಘ ನಿವ್ವಳ ಲಾಭಗಳಿಸಿದೆ ಎಂಬ ಲೆಕ್ಕ ಪತ್ರ ನೀಡಿರುವುದು ಸಂಪೂರ್ಣವಾಗಿ ಸುಳ್ಳಾಗಿರುತ್ತದೆ. ಇದು ಬ್ಯಾಂಕಿನ ಸದಸ್ಯರಿಗೆ ಮಾಡಿದ ಮೋಸ ಎಂದು ಆರೋಪಿಸಿದರು. ಠೇವಣಿದಾರರು ಕಾನೂನು ಹೋರಾಟಕ್ಕೆ ಮುಂದಾಗುವ ಮೊದಲೇ ಅವರ ಹಣವನ್ನು ಹಿಂದಿರುಗಿಸಿ ಕನಿಷ್ಟ ವಿಶ್ವಾಸವಾದರೂ ಉಳಿಸಿಕೊಳ್ಳಬೇಕು. ಇದಕ್ಕೆ ಇನ್ನೂ ಕಾಲ ಮಿಂಚಿಲ್ಲ ಎಂದು ಅವರು ಹೇಳಿದರು.

ಮೂಲವೊಂದರ ಮಾಹಿತಿಯಂತೆ ಈ ಸಹಕಾರಿ ಸಂಘ ರೂ. 9.11 ಕೋಟಿ ಹಣವನ್ನು ವಿವಿಧ ಬಾಪ್ತುಗಳಲ್ಲಿ ಪಾವತಿಸಲು ಬಾಕಿ ಇದೆ. ರೂ 3 ಕೋಟಿ ಹಣ ಸಾಲಗಾರರಿಂದ ಸಂಘಕ್ಕೆ ಪಾವತಿಯಾಗಲು ಬಾಕಿ ಇದೆ. ಈ ಸಹಕಾರ ಸಂಘದ ಇಂದಿನ ಸ್ಥಿತಿಗೆ ಅದರ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾಧಿಕಾರಿಗಳೇ (ಕಾರ್ಯದರ್ಶಿ) ನೇರ ಹೊಣೆಗಾರರಾಗಿದ್ದಾರೆ. ಇದುವರೆಗೂ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಕತ್ತಲೆಯಲ್ಲಿಟ್ಟು ಸುಳ್ಳು ಲೆಕ್ಕ ಪತ್ರ ನೀಡಿ ಸದಸ್ಯರನ್ನು ಮತ್ತು ಗ್ರಾಹಕರನ್ನು ವಂಚಿಸಿದಂತೆ ಇವರಿಗೂ ಮೋಸ ಮಾಡಲಾಗಿದೆ. ಈ ಸಹಕಾರ ಸಂಘದ ಪ್ರತಿ ಸಾಮಾನ್ಯ ಸಭೆಯಲ್ಲಿ ನಕಲಿ ಲೆಕ್ಕಪತ್ರವನ್ನು ಪದಾಧಿಕಾರಿಗಳಿಗೆ ನೀಡಲಾಗಿದೆ. ಮಹಾಸಭೆಯಲ್ಲಿಯೂ ನಷ್ಟದ ವಿವರವನ್ನು ನೀಡದೆ ನಕಲಿ ಲೆಕ್ಕಪತ್ರ ನೀಡಿರುವುದು ಅಪರಾಧವಾಗಿರುತ್ತದೆ. ಈ ಮೋಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸಂಘದ ಆಡಿಟರ್ ಇವರೊಂದಿಗೆ ಶಾಮೀಲಾಗಿರುವ ಶಂಕೆ ಇದೆ ಎಂದು ಆಪಾದಿಸಿರುವ ಸೂಫಿ ಹಾಜಿ ಅವರು, ಉತ್ತಮವಾಗಿ ನಡೆಯುತ್ತಿದ್ದ ಗೋಣಿಕೊಪ್ಪಲು ಶಾಖೆಯಿಂದ ರೂ.1.5 ಕೋಟಿ ಹಣವನ್ನು ವೀರಾಜಪೇಟೆಗೆ ವರ್ಗಾವಣೆ ಮಾಡಿರುವ ಮಾಹಿತಿ ಇದೆ. ಇದು ನಿಜವಾಗಿದ್ದಲ್ಲಿ ಇದೊಂದು ಕಾನೂನುಬಾಹಿರ ಕ್ರಮ ಎಂದು ದೂರಿದರು.

ಬ್ಯಾಂಕಿನಲ್ಲಿ ಕೋಟ್ಯಂತರ ಹಣ ದುರುಪಯೋಗವಾಗಿದೆ ಎಂಬ ವಿಷಯ ಇತ್ತೀಚಿಗೆ ಬಹಿರಂಗಗೊಳ್ಳುತ್ತಿದ್ದಂತೆ ಕಳೆದ 3 ತಿಂಗಳ ಹಿಂದೆಯೇ ಬ್ಯಾಂಕಿನ ಕೆಲ ನಿರ್ದೇಶಕರು ಮಡಿಕೇರಿಯಲ್ಲಿರುವ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಇವರು ಕೇವಲ ವಿಚಾರಣಾಧಿಕಾರಿಯೊಬ್ಬರನ್ನು ನೇಮಿಸಿ ಕೈತೊಳೆದುಕೊಂಡಿದ್ದಾರೆ. ಆದ್ದರಿಂದ ಇವರ ನಡೆಯ ಬಗ್ಗೆಯೂ ಜನ ವಲಯದಲ್ಲಿ ಸಂಶಯ ಮೂಡುತ್ತಿದ್ದು, ಕೂಡಲೇ ಸಾರ್ವಜನಿಕರಿಗೆ ಈ ಕುರಿತ ನೈಜಾಂಶವನ್ನು ಬಹಿರಂಗಪಡಿಸುವ ಹೊಣೆಗಾರಿಕೆ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ಇದೆ ಎಂದರು.

ವೀರಾಜಪೇಟೆಯ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘ ನಿಯಮಿತದ ಎಲ್ಲಾ ವ್ಯವಹಾರಗಳನ್ನು ಕೂಡಲೇ ಸಮಗ್ರವಾದ ತನಿಖೆಗೆ ಒಳಪಡಿಸಬೇಕು. ಹಣ ದುರುಪಯೋಗವಾದ ಪ್ರಮುಖ ಮೂಲವನ್ನು ಸೂಕ್ತ ತನಿಖೆಯ ಮೂಲಕ ಪತ್ತೆ ಹಚ್ಚಬೇಕು. ಅದಕ್ಕಾಗಿ ಮೊದಲು ಲೆಕ್ಕಪತ್ರವನ್ನು ಸಮಗ್ರವಾಗಿ ಸರಕಾರಿ ಆಡಿಟ್‍ಗೆ ಒಳಪಡಿಸಬೇಕು. ಅಧಿಕ ಬಡ್ಡಿಯ ಆಮಿಷವೊಡ್ಡಿ ಠೇವಣಿ ತರಿಸಿರುವ ಬಗ್ಗೆಯೂ ತನಿಖೆಯಾಗಬೇಕು. ಸಂಘದ ಲೆಕ್ಕಪತ್ರ ನಿರ್ವಹಿಸುವಲ್ಲಿ ಲೋಪವೆಸಗಿದ ಸಂಘದ ಆಡಿಟರ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ತನಿಖೆಯಿಂದ ಸ್ಪಷ್ಟವಾಗುವ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ ದುರುಪಯೋಗವಾಗಿರುವ ಹಣವನ್ನು ಅವರಿಂದಲೇ ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಇದು ಸಾಧ್ಯವಾಗದಿದ್ದಲ್ಲಿ ಸಹಕಾರ ಸಂಘಗಳ ಕಾಯ್ದೆಯಂತೆ ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಗೋಷ್ಠಿಯಲ್ಲಿ ಕೆ.ಎಂ.ಎ. ಹಿರಿಯ ಉಪಾಧ್ಯಕ್ಷ ಆಲೀರ ಎ. ಅಹಮದ್ ಹಾಜಿ, ನಿರ್ದೇಶಕರಾದ ಚಿಮ್ಮಿಚೀರ ಕೆ.ಇಬ್ರಾಹಿಂ (ಉಮಣಿ), ಮೀತಲತಂಡ ಎಂ. ಇಸ್ಮಾಯಿಲ್, ಸಹಕಾರ್ಯದರ್ಶಿ ಮಂಡೇಡ ಎ. ಮೊಯಿದು ಅವರು ಉಪಸ್ಥಿತರಿದ್ದರು.