ಮಡಿಕೇರಿ, ಅ. 26: ನಗರದ ವೇದಾಂತ ಸಂಘದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ನವರಾತ್ರಿ ಪ್ರಯುಕ್ತ, ಪ್ರತಿವರ್ಷದಂತೆ ವಿಶೇಷ ಪೂಜೆಯು ಒಂಭತ್ತು ದಿವಸ ನೆರವೇರುವದರೊಂದಿಗೆ, ಇಂದು ದೇವಿ ಪಾರಾಯಣ ಸಹಿತ ಸಮಾಪ್ತಿಗೊಂಡಿತು.

ವೇದಾಂತ ಸಂಘದ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರ ನೇತೃತ್ವದಲ್ಲಿ ನವದುರ್ಗಾ ಪರಮೇಶ್ವರಿಯ ಆರಾಧನೆಯೊಂದಿಗೆ, ಮಾತೆಯರು ದೇವಿಸ್ತುತಿ ಪಠಿಸಿದರು. ವಿಪ್ರ ಕುಮಾರ್ ನೇತೃತ್ವದಲ್ಲಿ ಪೂಜಾ ಕೈಂಕರ್ಯದೊಂದಿಗೆ ವಿಧಿವಿಧಾನಗಳು ನಡೆಯಿತು.

ಈ ಸಂದರ್ಭ ಮಾತನಾಡಿದ ಕೆ.ಎಸ್. ದೇವಯ್ಯ ಅವರು, ಕೊರೊನಾ ಸಂಕಟವನ್ನು ಶಕ್ತಿ ದೇವತೆಯು ನಿರ್ಮೂಲನೆಗೊಳಿಸಿ ಮನುಕುಲದೊಂದಿಗೆ, ಜೀವ ಸಂಕುಲ ಹಾಗೂ ಲೋಕಕ್ಕೆ ಕಲ್ಯಾಣವನ್ನುಂಟು ಮಾಡಲಿ ಎಂದು ಪ್ರಾರ್ಥಿಸಿದರು. ಸಂಸ್ಥೆಯ ಬಾಲಾಜಿ ಕಶ್ಯಪ್, ಕೆ.ಎಸ್. ಪ್ರಕಾಶ್, ಗೌರು ಗಣಪತಿ, ಸುಮತಿ, ಗೌರು ಮಾದಮ್ಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.