ಸೋಮವಾರಪೇಟೆ, ಅ. 26: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸಮೀಪವಿರುವ ಕಲ್ಲುಗಣಿಗಾರಿಕೆಗೆ ಮತ್ತೊಮ್ಮೆ ಪರವಾನಗಿ ನೀಡಬಾರದೆಂದು ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರು ಆಗ್ರಹಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರೌಢಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಪದ್ಮಾವತಿ, ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ಲುಮಕ್ಕಿ ಕಾಡನೂರು ಗ್ರಾಮದಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ಶಾಲಾ ಮಕ್ಕಳ ಹಿತದೃಷ್ಟಿಯಿಂದ ಮೂರು ವರ್ಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿಗಳು ರದ್ದುಗೊಳಿಸಿದ್ದರು. ಈಗ ಬೇನಾಮಿ ಹೆಸರಿನಲ್ಲಿ ಗಣಿಗಾರಿಕೆಯನ್ನು ಪ್ರಾರಂಭಿಸಲು ತಯಾರಿ ನಡೆಯುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆ ಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭ ಶಾಲೆಯ ಗೋಡೆಗಳು ಹಾಗೂ ಗ್ರಾಮದ ಕೆಲ ನಿವಾಸಿಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದವು. ಧೂಳಿನಿಂದ ವಾತಾವರಣ ಕಲುಷಿತಗೊಂಡಿತ್ತು. ಇದೀಗ ವಾತಾವರಣ ತಿಳಿಯಾಗಿದ್ದು, ಮತ್ತೊಮ್ಮೆ ಗಣಿಗಾರಿಕೆಗೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಿಸಿದರು.

ಗಣಿಯಲ್ಲಿನ ಯಂತ್ರಗಳ ಶಬ್ಧದಿಂದ ವಿದ್ಯಾರ್ಥಿಗಳು ಆತಂಕ ಗೊಂಡಿದ್ದರು. ಮತ್ತೊಮ್ಮೆ ಗಣಿಗಾರಿಕೆ ಪ್ರಾರಂಭಗೊಂಡರೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ನೇರುಗಳಲೆಯಲ್ಲಿ ರುವುದು ಒಂದೇ ಸರ್ಕಾರಿ ಶಾಲೆ. ಒಟ್ಟು 170 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಿದ್ದಾರೆ. ಕಿರಿದಾದ ರಸ್ತೆಯಲ್ಲಿ ಗಣಿಗಾರಿಕೆ ಲಾರಿಗಳು ಸಂಚರಿಸಬೇಕು. ಅದೇ ರಸ್ತೆಯಲ್ಲಿ ಮಕ್ಕಳು ನಡೆಯಬೇಕು. ಇದರೊಂದಿಗೆ ಪರಿಸರವೂ ಹಾಳಾಗಲಿದ್ದು, ಅನಾಹುತಕ್ಕೆ ಜಿಲ್ಲಾಡಳಿತ ಅನುವು ಮಾಡಿಕೊಡ ಬಾರದು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಪಿ. ಸುರೇಶ್, ಸಮಿತಿಯ ಸದಸ್ಯರಾದ ಎಸ್.ಎಸ್. ಶೈಲಾ, ಟಿ.ಕೆ. ಲೋಕಾನಂದ, ಗ್ರಾಮಸ್ಥ ಷಂಶುದ್ಧೀನ್ ಉಪಸ್ಥಿತರಿದ್ದರು.