ಸೋಮವಾರಪೇಟೆ, ಅ. 24: ತಾಲೂಕಿನ ಗ್ರಾಮೀಣ ಪ್ರದೇಶದ ಹಲವಷ್ಟು ರಸ್ತೆಗಳ ಸ್ಥಿತಿ ದೇವರಿಗೇ ಪ್ರೀತಿ ಎಂಬಂತಿದೆ. ಕೆಲವೆಡೆ ರಸ್ತೆಗಳಲ್ಲಿ ದೊಡ್ಡ ಕೆರೆಗಳು ನಿರ್ಮಾಣವಾಗಿದ್ದರೆ, ಹಲವು ರಸ್ತೆಗಳಲ್ಲಿ ಡಾಂಬರನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕರ್ಕಳ್ಳಿ ರಸ್ತೆಯನ್ನು ಹೊರತುಪಡಿಸಿದರೆ ಉಳಿದ ರಸ್ತೆಗಳು ಸಂಚಾರಕ್ಕೆ ಒಂದಿಷ್ಟು ಯೋಗ್ಯವಾಗಿದ್ದರೆ, ಗ್ರಾಮೀಣ ಪ್ರದೇಶದ ರಸ್ತೆಗಳ ಸ್ಥಿತಿ ಅಧೋಗತಿಯತ್ತ ಸಾಗಿದೆ.

ಪಟ್ಟಣದಿಂದ ಜೂನಿಯರ್ ಕಾಲೇಜು ಮಾರ್ಗವಾಗಿ ಚೌಡ್ಲು ಕೆರೆ ಏರಿ ರಸ್ತೆ, ಬಸವೇಶ್ವರ ದೇವಾಲಯದಿಂದ ಗಾಂಧಿನಗರ ಸಂಪರ್ಕ ರಸ್ತೆ, ಗಾಂಧಿನಗರ ದೊಡ್ಡಮಾರಿಯಮ್ಮ ದೇವಾಲಯ ಪಕ್ಕದ ರಸ್ತೆ, ಆಲೇಕಟ್ಟೆ ಪದ್ಮಕ್ಯಾಂಟೀನ್‍ನಿಂದ ಕಾನ್ವೆಂಟ್‍ಬಾಣೆ ಸಂಪರ್ಕಿಸುವ ರಸ್ತೆಗಳು ದುಸ್ಥಿತಿಗೆ ತಲುಪಿವೆ.

ಇನ್ನು 7ನೇ ಹೊಸಕೋಟೆಯಿಂದ ಭೂದಾನ ಪೈಸಾರಿ, ಕೊಡಗರಹಳ್ಳಿಯ ರಸ್ತೆ ಅಧೋಗತಿಯತ್ತ ಸಾಗಿ ದಶಕಗಳು ಕಳೆದಿವೆ. ರಸ್ತೆಯ ನಡುವೆ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು, ಸಣ್ಣಪುಟ್ಟ ವಾಹನಗಳ ಸಂಚಾರಕ್ಕೆ ಸರ್ಕಸ್ ಮಾಡಬೇಕಾಗಿದೆ.

ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿಮರೂರು-ಉಂಜಿಗನಹಳ್ಳಿ-ಮುಳ್ಳೂರು ಸಂಪರ್ಕದ ರಸ್ತೆಯಲ್ಲಿ ಸಾವಿರಾರು ಹೊಂಡಗಳು ನಿರ್ಮಾಣವಾಗಿವೆ. ಇಲ್ಲಿ 1 ಕಿ.ಮೀ. ರಸ್ತೆ ನಿರ್ಮಾಣವಾಗಿದ್ದನ್ನು ಹೊರತುಪಡಿಸಿದರೆ ಊರೊಳಗಿನ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿವೆ. ರಸ್ತೆಯ ತುಂಬೆಲ್ಲಾ ಗುಂಡಿಗಳೇ ಇರುವದರಿಂದ ಡಾಂಬರು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ರಸ್ತೆಗಳು ಅನುದಾನದ ಕೊರತೆಯಿಂದ ನಲುಗಿ ಹೋಗಿವೆ. ಇನ್ನು ಜಿ.ಪಂ. ವ್ಯಾಪ್ತಿಯ ರಸ್ತೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ಬಾಣಾವರ-ಹೆಬ್ಬಾಲೆ ರಾಜ್ಯ ಹೆದ್ದಾರಿಯ ಚಿಕ್ಕಅಳುವಾರ ಜಂಕ್ಷನ್‍ನಿಂದ ಶಿರಂಗಾಲಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ದುಸ್ಥಿತಿಗೆ ತಲುಪಿ ದಶಕಗಳೇ ಕಳೆದಿವೆ. ನಿರ್ಮಾಣದ ಸಂದರ್ಭ ಡಾಂಬರು ಹಾಕಿದ್ದನ್ನು ಹೊರತುಪಡಿಸಿದರೆ ಈವರೆಗೆ ದುರಸ್ತಿ ಕಾರ್ಯ ನಡೆದಿಲ್ಲ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವ ನೂರಾರು ವಾಹನಗಳ ಸವಾರರು ಸರ್ಕಸ್ ಮಾಡುವಂತಾಗಿದೆ.

ಅಳುವಾರ, ಚಿಕ್ಕಅಳುವಾರ, ಸಿದ್ದಲಿಂಗಪುರ, ಅರಸಿನಕುಪ್ಪೆ, ಅರೆಗಲ್ಲು, ಹೆಬ್ಬಾಲೆ, ತೊರೆನೂರು ವ್ಯಾಪ್ತಿಯ ಕೃಷಿಕರು ತಮ್ಮ ಹೊಲಗದ್ದೆಗಳಿಗೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದ್ದು, ಹೊಂಡಾ ಗುಂಡಿಗಳ ರಸ್ತೆಯಲ್ಲಿ ತೆರಳುವ ಸಂದರ್ಭ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವದು ಮಾಮೂಲಿಯಂತಾಗಿದೆ.

ಉಳಿದಂತೆ ಗೌಡಳ್ಳಿ, ಹಾನಗಲ್ಲು, ಬೇಳೂರು, ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ, ನೇರುಗಳಲೆ, ಶಿರಂಗಾಲ, ತೊರೆನೂರು, ಹೆಬ್ಬಾಲೆ ಸೇರಿದಂತೆ ಇತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಳರಸ್ತೆಗಳು ದುಸ್ಥಿತಿಗೆ ತಲುಪಿದ್ದು, ಕಾಮಗಾರಿಗಾಗಿ ಎದುರು ನೋಡುತ್ತಿವೆ.

- ವಿಜಯ್ ಹಾನಗಲ್