ಕುಶಾಲನಗರ, ಸೆ. 30: ಗಾಂಧೀಜಿಯ 150ನೇ ಜಯಂತಿ ಅಂಗವಾಗಿ ಕುಶಾಲನಗರದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತೆ ಮತ್ತು ಗಿಡಮರಗಳ ನಿರ್ವಹಣೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕಾವೇರಿ ನದಿ ಸ್ವಚ್ಛತಾ ಆಂದೋಲನ, ಅರಣ್ಯ ಇಲಾಖೆ, ಪಟ್ಟಣ ಪಂಚಾಯ್ತಿ ಕುಶಾಲನಗರ ಮತ್ತು ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ 3 ದಿನಗಳ ಕಾಲ ಹಮ್ಮಿಕೊಂಡಿರುವ ಸ್ವಚ್ಛತಾ ಕಾರ್ಯಕ್ಕೆ ಸ್ಥಳೀಯ ಜಿಎಂಪಿ ಶಾಲಾ ಆವರಣದಲ್ಲಿ ಅರಣ್ಯ ಇಲಾಖೆಯ ಸಹಾಯಕ ವಲಯ ಅರಣ್ಯಾಧಿಕಾರಿ ಮಹದೇವ್ ನಾಯಕ್ ಚಾಲನೆ ನೀಡಿದರು. ಶಾಲಾ ಆವರಣದಲ್ಲಿ ನೆಟ್ಟು ಬೆಳೆಸಿರುವ ಮರ, ಗಿಡಗಳ ನಿರ್ವಹಣೆ ಕಾರ್ಯವನ್ನು ಅರಣ್ಯ ಸಿಬ್ಬಂದಿಗಳು ನಡೆಸಿದರು.

ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್, ವಿನೋದ್, ಅರಣ್ಯ ರಕ್ಷಕ ಸಚಿನ್ ಇದ್ದರು. ತಾ. 2 ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸಂತೆ ವ್ಯಾಪಾರಿಗಳ ಸಂಘದ ಸದಸ್ಯರು ಮತ್ತು ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರ ಸಹಯೋಗದೊಂದಿಗೆ ಮಾರುಕಟ್ಟೆ ಆವರಣ ಸ್ವಚ್ಛತೆ ಮತ್ತು ಗಿಡಮರಗಳ ನಿರ್ವಹಣೆ ಕಾರ್ಯಕ್ರಮ ನಡೆಯಲಿದೆ.