ಮಡಿಕೇರಿ, ಸೆ. 22: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ತ್ಯಾಜ್ಯ ಉತ್ಪಾದನೆ; ಅವುಗಳ ಸಂಗ್ರಹಣೆ ಹಾಗೂ ವಿಂಗಡಣೆಗೆ ಸಂಬಂಧಿಸಿದಂತೆ ವಿಧಾನಪರಿಷತ್ ಕಲಾಪದಲ್ಲಿ ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಪ್ರಶ್ನೆಗೆ ಉತ್ತರಿಸಿದ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಡಾ. ನಾರಾಯಣಗೌಡ ಅವರು ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿದಿನ 20 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಸುಮಾರು 18 ಟನ್ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಕರ್ಣಂಗೇರಿ ಗ್ರಾಮದ ಸರ್ವೇ ನಂ.471/1 ಪಿ16 ರಲ್ಲಿ 6 ಎಕರೆ ಜಾಗದಲ್ಲಿ, 9 ಟನ್ ಹಸಿ ತ್ಯಾಜ್ಯವನ್ನು ಕಂಪೆÇೀಸ್ಟ್ ಪಿಟ್‍ಗಳಲ್ಲೇ ಸಂಸ್ಕರಿಸಿ, ಟ್ರಾಮಲ್ ಸ್ಕ್ರೀನ್ ಮೂಲಕ ಬೇರ್ಪಡಿಸಿ ನಂತರ ಗೊಬ್ಬರವನ್ನು ನಗರಸಭೆ ಉದ್ಯಾನವನ ಹಾಗೂ ಸುತ್ತಮುತ್ತಲಿನ ಎಸ್ಟೇಟ್‍ಗಳಿಗೆ ನೀಡಲಾಗುತ್ತಿದೆ ಎಂದರು.

ಅಂದಾಜು 10-11 ಟನ್ ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿರಿಸಿ ಭಾಗಶಃ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಣ್ಣ ಪ್ರಮಾಣದಲ್ಲಿ ಬೇಲುಂಗ್ ಯಂತ್ರದ ಮೂಲಕ ಬೇಲ್ ಮಾಡಿ ಸಂಸ್ಕರಣೆ ಘಟಕದಲ್ಲಿ ಸಂಗ್ರಹಿಸಲಾಗಿರುತ್ತದೆ. ಉಳಿಕೆ ತ್ಯಾಜ್ಯವನ್ನು ತೆರೆದ ಪ್ರದೇಶದಲ್ಲಿ ವಿಲೇ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ 8,969 ಮನೆಗಳಿದ್ದು, ಘನ ತ್ಯಾಜ್ಯವನ್ನು 6 ಆಟೋ ಟಿಪ್ಪರ್ ಹಾಗೂ 5 ಟ್ರ್ಯಾಕ್ಟರ್‍ಗಳ ಮೂಲಕ ಸಂಗ್ರಹಿಸಲಾಗುತ್ತಿದೆ.

ನಗರಸಭೆಯ 23 ವಾರ್ಡ್‍ಗಳಲ್ಲಿ 17 ವಾರ್ಡ್‍ಗಳಿಂದ ಮೂಲದಲ್ಲಿಯೇ ಕಸವನ್ನು ವಿಂಗಡಿಸಿ ನೀಡಲಾಗುತ್ತಿದೆ. ಇನ್ನುಳಿದ 6 ವಾರ್ಡ್‍ಗಳಲ್ಲಿ ಸಾರ್ವಜನಿಕರಿಗೆ ಕಸವನ್ನು ವಿಂಗಡಿಸಿ ನೀಡುವಂತೆ ಸೂಚಿಸಲಾಗಿದೆ ಹಾಗೂ ಈ ಬಗ್ಗೆ ಎನ್.ಜಿ.ಒ.ಗಳ ಮೂಲಕ ಐ.ಇ.ಸಿ. ಚಟುವಟಿಕೆಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ.

ಸಂಸ್ಕರಣೆ ಘಟಕದ ಸುತ್ತಲೂ ಕಾಂಪೌಂಡ್ ವಾಲ್ ನಿರ್ಮಿಸಿದ್ದು, ಮರ ಗಿಡಗಳನ್ನು ಬೆಳೆಸಲಾಗಿದೆ. ಯಾವುದೇ ರೀತಿಯ ಕ್ರಿಮಿ ಕೀಟಗಳು ಉತ್ಪತ್ತಿಯಾಗದಂತೆ ಕೀಟನಾಶಕ ಸಿಂಪಡಿಸಿ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಸಚಿವರು ನುಡಿದರು.

ಘನ ತಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ, ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಉಂಟಾಗದಂತೆ ಕ್ರಮವಹಿಸಲಾಗುತ್ತಿದೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ಅಧಿಕಾರಿಗಳ ತಂಡವನ್ನು ತ್ಯಾಜ್ಯ ನಿರ್ವಹಣಾ ಘಟಕದ ತಪಾಸಣೆಗೆ ನಿಯೋಜಿಸಲಾಗಿದೆ. ಈ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಅಂದಾಜು 30 ಸಾವಿರದಿಂದ 40 ಸಾವಿರ ಟನ್‍ಗಳಷ್ಟು ಹಳೆಯ ತ್ಯಾಜ್ಯವು ಶೇಖರಣೆಯಾಗಿದ್ದು, ಆ ತ್ಯಾಜ್ಯವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳ ಅನುಸಾರ ಹೊರತೆಗೆದು ಬಯೋರೆಮೆಡಿಯೇಷನ್ ಪದ್ಧತಿಯ ಮೂಲಕ ಸಂಸ್ಕರಿಸಿ ವಿಲೇ ಮಾಡಬೇಕಾಗಿದೆ ಎಂದು ಅಭಿಪ್ರಾಯಿಸಲಾಗಿದೆ. ತ್ಯಾಜ್ಯ ನಿರ್ವಹಣೆಗಾಗಿ ವಿಸ್ಕøತ ಯೋಜನಾ ವರದಿಯನ್ನು ಸಿದ್ದಪಡಿಸಲು ಸೂಕ್ಷ್ಮ ಏಜೆನ್ಸಿಯನ್ನು ನಿಯಮಾನುಸಾರ ಆಯ್ಕೆ ಮಾಡಿ ಸದರಿಯವರ ಶಿಫಾರಸ್ಸಿನಂತೆ ಅಲ್ಪಾವಧಿ ಹಾಗೂ ದೀರ್ಘಾವಧಿ ಕ್ರಮಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಈಗಾಗಲೇ ಸಂಗ್ರಹವಾಗಿರುವ ಒಣ ತ್ಯಾಜ್ಯವನ್ನು ಸಮಯದ ಪರಿಹಾರ ಭಾಗವಾಗಿ (ಒನ್ ಟೈಮ್ ರೆಮೆಡಿಯೇಷನ್) ನಿರ್ವಹಿಸಲು ಅಗತ್ಯ ಕ್ರಮವಹಿಸಲಾಗುವುದು.

ನಗರಸಭೆಯು ನಗರ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಎಲ್ಲಾ ತ್ಯಾಜ್ಯವನ್ನು ಕೇಂದ್ರೀಕೃತ ಘಟಕಕ್ಕೆ ಸಾಗಿಸುವ ಬದಲಾಗಿ ನಗರದಲ್ಲಿಯೂ ವಿಕೇಂದ್ರೀಕೃತ ತ್ಯಾಜ್ಯ ಸಂಸ್ಕರಣಾ ಘಟಕ, ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳನ್ನು ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಲಾಗುವುದು. ಸ್ವಚ್ಛ ಭಾರತ ಮಿಷನ್ ಅಡಿಯಲ್ಲೇ ನಗರಸಭೆಗೆ ಬಿಡುಗಡೆಯಾಗಿರುವ ಮೊತ್ತದಿಂದ ಸ್ಯಾನಿಟರಿ ಬ್ಯಾಂಡ್‍ಫಿಲ್ ಸೌಲಭ್ಯ ಹಾಗೂ ಇತರೆ ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗುವುದು ಎಂದು ಡಾ.ನಾರಾಯಣ ಗೌಡ ಹೇಳಿದರು.