ಮಡಿಕೇರಿ, ಸೆ.22 : ಬೆಂಗಳೂರಿನಲ್ಲಿ ಆರಂಭಗೊಂಡಿರುವ ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯೆ ವೀಣಾ ಅಚ್ಚಯ್ಯ 2019-20 ಹಾಗೂ 2020-21ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಉಂಟಾದ ಜೀವಹಾನಿಯ ಪ್ರಕರಣಗಳ ಬಗ್ಗೆ ಮಾಹಿತಿ ಕೇಳಿದ ಹಿನ್ನೆಲೆಯಲ್ಲಿ ಇದಕ್ಕೆ ಉತ್ತರಿಸಿದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವÀ ಆನಂದ್ಸಿಂಗ್ ಅವರು 2019-20ನೇ ಸಾಲಿನಲ್ಲಿ ಮಡಿಕೇರಿ ವನ್ಯಜೀವಿ ವಿಭಾಗದಲ್ಲ್ಲಿ 2019 ರ ಮೇ 3 ರಂದು ವೀಸರಾಜಪೇಟೆ ತಾಲೂಕಿನ ಕಾಯಿಮನೆ ಗ್ರಾಮದ ಸುಧಾ ಕುಟ್ಟಪ್ಪ, 2019 ರ ನವೆಂಬರ್ 21 ರಂದು ವೀರಾಜಪೇಟೆ ತಾಲೂಕಿನ ಕುಟ್ಟ ಗ್ರಾಮದ ಕರಿಯ, ವೀರಾಜಪೇಟೆ ವಿಭಾಗದಲ್ಲಿ 2019 ರ ಆಗಸ್ಟ್ 8 ರಂದು ತಿತಿಮತಿ ವಲಯದ ಚೆನ್ನಯ್ಯನ ಕೋಟೆ ಗ್ರಾಮದ ಮುರುಡಯ್ಯ, 2020 ರ ಮಾರ್ಚ್ 28 ರಂದು ಪೊನ್ನಂಪೇಟೆ ವಲಯ ಕುಮಟೂರು ಗ್ರಾಮದ ರಾಜು, ಮಡಿಕೇರಿ ವಿಭಾಗದಲ್ಲಿ 2019 ರ ಸೆಪ್ಟ್ಟೆಂಬರ್ 6 ರಂದು ಕಡಗದಾಳು ಗ್ರಾಮದ ಚೆನ್ನಕೇಶವ ಮತ್ತು 2020 ರ ಫೆಬ್ರವರಿ 7 ರಂದು ಕುಶಾಲನಗರ ವಲಯದ ಕರಡಿಗೋಡು ಗ್ರಾಮದ ಪೆಮ್ಮಯ್ಯ ಇವರುಗಳ ಜೀವಹಾನಿಯಾಗಿದೆ.
2020-21 ನೇ ಸಾಲಿನಲ್ಲಿ ಆಗಸ್ಟ್ ಅಂತ್ಯದವರೆಗೆ ಮಡಿಕೇರಿ ವಿಭಾಗದಲ್ಲಿ 2020 ರ ಏಪ್ರಿಲ್ 11 ರಂದು ಸೋಮವಾರಪೇಟೆ ತಾಲೂಕಿನ ರಂಗಸಮುದ್ರ ಗ್ರಾಮದ ಎಂ.ಸಿ.ಲೋಕೇಶ್, 2020ರ ಜೂನ್ 15 ರಂದು ಮಡಿಕೇರಿಯ ಯವಕಪಾಡಿ ಗ್ರಾಮ ಕುಡಿಯರ ಚಿಣ್ಣಪ್ಪ, 2020 ರ ಆಗಸ್ಟ್ 15 ರಂದು ಸೋಮವಾರಪೇಟೆ ಮೊದೂರು ಗ್ರಾಮದ ನೀನಾ ಮುತ್ತಣ್ಣ, ವೀರಾಜಪೇಟೆ ವಿಭಾಗದಲ್ಲಿ 2020 ರ ಜುಲೈ 04 ರಂದು ವೀರಾಜಪೇಟೆ ಬೈಗೋಡು ಕೋಳಿತೋಡುವಿನ ಮಾದ, 2020 ರ ಮೇ 25 ರಂದು ನಾಗರಹೊಳೆ ವಿಭಾಗದ ನೇರಳೆ ಕುಪ್ಪೆ ಹಾಡಿಯ ಜಗದೀಶ್ ಎಂಬವರುಗಳು ಕಾಡು ಪ್ರಾಣಿಗಳ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದರು.
ಈ ಪ್ರಕರಣಗಳಲ್ಲಿ ಮೃತರಾದ ವ್ಯಕ್ತಿಯ ಅವಲಂಬಿತರಿಗೆ ಸರ್ಕಾರದಿಂದ ದೊರೆತಿರುವ ಪರಿಹಾರಗಳ ಬಗ್ಗೆ ವೀಣಾ ಅಚ್ಚಯ್ಯ ಪ್ರಶ್ನೆಗೆ ಉತ್ತರಿಸಿದ ಸಚಿವರು ವನ್ಯಪ್ರಾಣಿ ದಾಳಿಯಿಂದ ಉಂಟಾಗುವ ಮಾನವ-ಪ್ರಾಣ ಹಾನಿ ಪ್ರಕರಣಗಳಲ್ಲಿ ಸರ್ಕಾರದ ಆದೇಶದ ಅನ್ವಯ 5 ಲಕ್ಷ ರೂ.ಗಳನ್ನು ವಾರಸುದಾರರಿಗೆ ಒದಗಿಸಲಾಗುತ್ತದೆ. ಅಲ್ಲದೆ ಸರ್ಕಾರದ ಆದೇಶದನ್ವಯ 2020 ರ ಜನವರಿ 7 ರನ್ವಯ ವನ್ಯಪ್ರಾಣಿಗಳಿಂದ ಮೃತಪಟ್ಟಿರುವ ವ್ಯಕ್ತಿಯ ವಾರಸುದಾರರಿಗೆ ಈಗಾಗಲೇ ಪಾವತಿಸಲಾಗುತ್ತಿದ್ದ ರೂ. 5 ಲಕ್ಷಗಳ ದಯಾತ್ಮಕ ಧನವನ್ನು 7,50,000 ರೂ.ಗಳಿಗೆ ಹೆಚ್ಚಿಸಲಾಗಿದ್ದು, ಅದರಂತೆ ನಿಯಮಾನುಸಾರ ಪರಿಶೀಲಿಸಿ ವಿತರಿಸಲಾಗುತ್ತದೆ. ಅಲ್ಲದೆ ಸರ್ಕಾರದ ಆದೇಶದನ್ವಯ ಮೃತರ ಕುಟುಂಬದ ವಾರಸುದಾರರಿಗೆ 5 ವರ್ಷಗಳವರೆಗೆ 2 ಸಾವಿರ ರೂ.ಗಳ ಮಾಸಾಶನವನ್ನು ಸಹ ನೀಡಲಾಗುತ್ತಿದೆ ಎಂದು ಸಚಿವರು ಉತ್ತರಿಸಿದರು. ನಂತರ ಪರಿಹಾರ ವಿಳಂಬದ ಕುರಿತು ಮಾಹಿತಿಯಿತ್ತ ಸಚಿವರು ವೀರಾಜಪೇಟೆ ವಿಭಾಗದ ಪೊನ್ನಂಪೇಟೆ ವಲಯ ಕುಮಟೂರು ಗ್ರಾಮದ ರಾಜು ಎಂಬವರು 2020ರ ಮಾರ್ಚ್ 28 ರಂದು ಕಾಡೆಮ್ಮೆ ದಾಳಿಯಿಂದ ಮೃತಪಟ್ಟಿರುವ ಪ್ರಕರಣದಲ್ಲಿ ಮೃತ ವ್ಯಕ್ತಿಯ ವಾರಸುದಾರರಿಗೆ ದಯಾತ್ಮಕ ಧನ ಪಾವತಿಸುವ ಬಗ್ಗೆ ಗೊಂದಲವಿರುವ ಕಾರಣ ಕೆಲವೊಂದು ದಾಖಲಾತಿಗಳನ್ನು ಒದಗಿಸುವಂತೆ ಕೋರಿದ್ದು, ದಾಖಲಾತಿಗಳು ಸ್ವೀಕೃತವಾದ ಕೂಡಲೇ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಇದರೊಂದಿಗೆ ವೀರಾಜಪೇಟೆ ವಿಭಾಗದ ವೀರಾಜಪೇಟೆ ವಲಯ ಕೊಳತ್ತೋಡು ಬೈಗೋಡು ಗ್ರಾಮದ ಮಾದ ಅವರು 2020 ರ ಜುಲೈ 04 ರಂದು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು, ಮೃತರ ವಾರಸುದಾರರಿಗೆ ನಿಯಮಾನುಸಾರ ದಯಾತ್ಮಕ ಧನವನ್ನು ಖಜಾನೆ-2 ತಂತ್ರಾಂಶದ ಮೂಲಕ ಬಿಲ್ ತಯಾರಿಸಿ ಬ್ಯಾಂಕ್ ಖಾತೆಗೆ ಪಾವತಿಸಬೇಕಾಗಿರುತ್ತದೆ. ಆದರೆ ಈ ಪ್ರಕರಣದಲ್ಲಿ ಮೃತ ವ್ಯಕ್ತಿಯ ಕುಟುಂಬಸ್ಥರು ಕೂಲಿ ಕಾರ್ಮಿಕರಾಗಿದ್ದು ಇವರಿಗೆ ಆಧಾರ್ ಕಾರ್ಡ್ ಹಾಗೂ ಯಾವುದೇ ಬ್ಯಾಂಕ್ ಖಾತೆ ಇಲ್ಲದ ಕಾರಣ ಪ್ರಸ್ತುತ ದಯಾತ್ಮಕ ಧನ ಪಾವತಿಸಲು ಬಾಕಿ ಇದೆ. ಈ ಎರಡು ಪ್ರಕರಣಗಳನ್ನು ಹೊರತುಪಡಿಸಿ ಇನ್ನಿತರ ಪ್ರಕರಣಗಳಲ್ಲಿ ಕೂಡಲೇ ಪರಿಹಾರ ಪಾವತಿ ಮಾಡಲಾಗಿರುತ್ತದೆ ಎಂದರು.
2019-2020ನೇ ಸಾಲಿಗೆ ಕೊಡಗು ಜಿಲ್ಲೆಗೆ ರೂ.28.549 ಕೋಟಿ ಅನುದಾನ ಒದಗಿಸಲಾಗಿದೆ. ಅರಣ್ಯ ಇಲಾಖೆಯಿಂದ ಪ್ರಮುಖವಾಗಿ ಅರಣ್ಯೀಕರಣ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗುತ್ತಿದ್ದು, ಭುಕುಸಿತ ತಡೆಯುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಯಾವುದೇ ಕಾಮಗಾರಿ ಕೈಗೊಳ್ಳಲಾಗಿರುವುದಿಲ್ಲ ಎಂದರು.