*ಗೋಣಿಕೊಪ್ಪಲು, ಸೆ. 15 : ಮತ್ತಿಗೋಡು ಸಾಕಾನೆ ಶಿಬಿರದ ಬಲಾಢ್ಯ ಆನೆಯಾದ ಅಭಿಮನ್ಯು ಈಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿ ಹೊರಲು ಸಿದ್ಧವಾಗಿದೆ. 5500 ಕಿಲೋ ತೂಕದ ಅಭಿಮನ್ಯು 750 ಕಿಲೋ ತೂಕದ ಚಿನ್ನದ ಅಂಬಾರಿ ಹೊರಲಿದ್ದಾನೆ.

ಹಿಂದೆ ಅಂಬಾರಿ ಹೊರುತ್ತಿದ್ದ ಅರ್ಜುನನಿಗೆÀ 65 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಂಬಾರಿ ಹೊರಲು 54 ರ ಹರೆಯದ ಅಭಿಮನ್ಯುವನ್ನು ಆಯ್ಕೆಮಾಡಲಾಗಿದೆ ಎಂದು ದಸರಾ ಅಂಬಾರಿ ಆನೆ ಜವಾಬ್ದಾರಿ ಹೊತ್ತಿರುವ ಮೈಸೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಲೆಗ್ಸಾಂಡರ್ ತಿಳಿಸಿದ್ದಾರೆ. ಅಭಿಮನ್ಯು ಜತೆಗೆ ದಸರಾದಲ್ಲಿ ಪಾಲ್ಗೊಳ್ಳಲು ಕುಶಾಲನಗರ ದುಬಾರೆ ಸಾಕಾನೆ ಶಿಬಿರದ ವಿಕ್ರಂ (58), ವಿಜಯ (53),ಕಾವೇರಿ (50), ಗೋಪಿ ಆನೆಗಳನ್ನು ಆಯ್ಕೆಮಾಡಲಾಗಿದೆ. ಈ ಆನೆಗಳು ಅ.2ರಂದು ಸಂಪ್ರದಾಯ ದಂತೆ ಹುಣಸೂರು ತಾಲೂಕಿನ ವೀರನಹೊಸಳ್ಳಿಗೆ ಪ್ರಯಾಣ ಬೆಳೆಸಿ ಬಳಿಕ ಮೈಸೂರಿಗೆ ತೆರಳಲಿವೆ.

ಮತ್ತಿಗೋಡು ಶಿಬಿರದಿಂದ ಅಂಬಾರಿ ಹೊರುವ ಎರಡನೇ ಆನೆ ಅಭಿಮನ್ಯು ಆಗಿದೆ. ಹಿಂದೆ ಇದೇ ಶಿಬಿರದಲ್ಲಿದ್ದ ಬಲರಾಮ ಆನೆ ಕೂಡ ಅಂಬಾರಿ ಹೊರುತ್ತಿತ್ತು. ಅದರ ನಿವೃತ್ತಿಯ ಬಳಿಕ ಈ ಜವಾಬ್ದಾರಿ ಅರ್ಜುನನ ಹೆಗಲೇರಿತ್ತು. ಅಭಿಮನ್ಯುವನ್ನು ಮಾವುತ ವಸಂತ, ಕಾವಾಡಿ ಜೆ.ಕೆ.ರಾಜು ಮುನ್ನಡೆಸಲಿದ್ದಾರೆ.

-ಎನ್.ಎನ್.ದಿನೇಶ್