ಮಡಿಕೇರಿ, ಆ. 26: ಜಿಲ್ಲೆಯಲ್ಲಿ ಈತನಕ ಹತ್ತು - ಹಲವಾರು ಅನಾಹುತಗಳನ್ನು ಸೃಷ್ಟಿಸಿದ್ದ 2020ರ ವರ್ಷದ ಮಳೆಗಾಲ ಇದೀಗ ಕೆಲವು ದಿನಗಳಿಂದ ಮರೆಯಾಗಿದೆ.

ಕೆಲವು ದಿನಗಳಿಂದ ಮಳೆಯ ಸನ್ನಿವೇಶ ಮರೆಯಾಗಿದ್ದು, ಬಿಸಿಲಿನ ದರ್ಶನವಾಗುತ್ತಿದೆ. ಇದರೊಂದಿಗೆ ಜಿಲ್ಲೆಯ ಬಹುತೇಕ ರಸ್ತೆಗಳಲ್ಲಿ ಅದೂ ಜಿಲ್ಲಾ ಕೇಂದ್ರದಿಂದ ಹಿಡಿದು ಬಹುಶಃ ಎಲ್ಲೆಡೆ ಭಾರೀ ಹೊಂಡ- ಗುಂಡಿಗಳು ಉಂಟಾಗಿವೆ. ಈತನಕ ಈ ಗುಂಡಿಗಳಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ಗುಂಡಿಗಳ ಉದ್ದಗಲ ಅರಿವಾಗುತ್ತಿರಲಿಲ್ಲ. ಇದೀಗ ನೀರು ತುಂಬಿದ್ದ ಸ್ಥಳಗಳು ಒಣಗಿದ್ದು, ಭಾರೀ ಗುಂಡಿಗಳು ಗೋಚರಿಸುತ್ತಿವೆ. ಒಂದೊಂದಾಗಿ ಎದ್ದು ಬರುತ್ತಿರುವ ಈ ಗುಂಡಿಗಳನ್ನು ತ್ವರಿತಗತಿಯಲ್ಲಿ ಸರಿಪಡಿಸಲು ಜಿಲ್ಲಾಡಳಿತ, ಜನಪ್ರತಿನಿಧಿಗಳು, ಸಂಬಂಧಿಸಿದ ಇಲಾಖೆ ಕಾರ್ಯೋನ್ಮುಖ ವಾಗಬೇಕಿದೆ.