ಮಡಿಕೇರಿ, ಆ.14: ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಈವರೆಗೂ ಸುಮಾರು 10 ಜಾನುವಾರುಗಳು ಸಾವನ್ನಪ್ಪಿದ್ದು, 1.97 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ತಮ್ಮಯ್ಯ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. 3 ಆಡು ಮತ್ತು 7 ದನಗಳು ಸೇರಿ ಒಟ್ಟು 10 ಜಾನುವಾರುಗಳು ಸಾವನ್ನಪ್ಪಿದೆ ಎಂದು ಅವರು ಮಾಹಿತಿ ನೀಡಿದರು.

ಅಲ್ಲಲ್ಲಿ ಜಾನುವಾರುಗಳ ಕಳೇ ಬರಹಗಳು ದೊರೆಯುತ್ತಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ 9 ಜಾನುವಾರುಗಳು ಕಾಣೆಯಾದ ಬಗ್ಗೆ ವರದಿಯಾಗಿದೆ. 2 ಜಾನುವಾರುಗಳ ಕಳೇ ಬರ ದೊರೆತಿದೆ. ಜಿಲ್ಲೆಯಲ್ಲಿ ಈವರೆಗೂ ಸಹ 22 ಕೊಟ್ಟಿಗೆಗಳು ಹಾನಿಗೀಡಾಗಿದೆ. ಸೋಮವಾರಪೇಟೆ ಮತ್ತು ವೀರಾಜಪೇಟೆಯಲ್ಲಿ ತಲಾ 10 ಮತ್ತು ಮಡಿಕೇರಿಯಲ್ಲಿ 2 ಕೊಟ್ಟಿಗೆಗಳಿಗೆ ಹಾನಿಯಾಗಿದೆ ಎಂದು ಅವರು ತಿಳಿಸಿದರು.

ಪ್ರವಾಹಕ್ಕೀಡಾಗಿ ಜಾನುವಾರುಗಳು ಮರಣ ಪಟ್ಟಿದ್ದರೆ, ಅಂತಹ ಜಾನುವಾರುಗಳ ಮಾಲೀಕರು ಪರಿಹಾರ ಪಡೆದುಕೊಳ್ಳಲು ಅರ್ಹರಿರುತ್ತಾರೆ. ಆದ್ದರಿಂದ ಪರಿಹಾರ ಪಡೆದುಕೊಳ್ಳಲು ಮೃತಪಟ್ಟ ಜಾನುವಾರುಗಳ ಮೃತ ದೇಹ ಕಂಡುಬಂದಲ್ಲಿ ಈ ಜಾನುವಾರುಗಳ ಮಾಲೀಕರು ಹತ್ತಿರದ ಪಶುವೈದ್ಯ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಹಾಗೂ ತಮ್ಮ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರಗಳ ಪ್ರತಿಯನ್ನು ಸಂಬಂಧಿಸಿದ ಪಶು ವೈದ್ಯಕೀಯ ಸಂಸ್ಥೆಗೆ ಒದಗಿಸುವಂತೆ ಕೋರಿದ್ದಾರೆ.

ಜಾನುವಾರುಗಳಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಇರುವುದರಿಂದ ಜಾನುವಾರು ಮಾಲೀಕರು ತಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳಿಂದ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಲಸಿಕೆಗಳನ್ನು ಜಾನುವಾರುಗಳಿಗೆ ಹಾಕಿಸುವಂತೆ ಅವರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಮತ್ತು ತಾಲೂಕಿನ ಉಪ ನಿರ್ದೇಶಕರ ಕಚೇರಿ ಪಶುಪಾಲನಾ ಇಲಾಖೆ ಮಡಿಕೇರಿ 08272 229449. ಸಹಾಯಕ ನಿರ್ದೇಶಕರ ಕಚೇರಿ ಪಶು ಆಸ್ಪತ್ರೆ ಮಡಿಕೇರಿ 08272 228805. ಸಹಾಯಕ ನಿರ್ದೇಶಕರ ಕಚೇರಿ ಪಶು ಆಸ್ಪತ್ರೆ ಸೋಮವಾರಪೇಟೆ 08276 282127. ಸಹಾಯಕ ನಿರ್ದೇಶಕರ ಕಚೇರಿ ಪಶು ಆಸ್ಪತ್ರೆ ವೀರಾಜಪೇಟೆ 08274 257228 ಈ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಡಾ.ತಮ್ಮಯ್ಯ ತಿಳಿಸಿದ್ದಾರೆ.