ಇಂದು ವಿಶ್ವ ಜೈವಿಕ ಇಂಧನ ದಿನ
ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಚ್ಚಾತೈಲಗಳ ಬೇಡಿಕೆಗಳಿಂದ ತೈಲ ನಿಕ್ಷೇಪಗಳು ಇಂದು ಬರಿದಾಗುತ್ತಿವೆ. ಭಾರತ ದೇಶವು ಶೇ. 85 ರಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಇದರ ಪರಿಣಾಮವಾಗಿ ಪರಾವಲಂಬನೆ, ಪರಿಸರ ಮಾಲಿನ್ಯ, ವಿದೇಶಿ ವಿನಿಮಯಗಳ ಹೊರೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದ ಮಿಲಿಯನ್ ವರ್ಷಗಳಿಂದ ಶೇಖರಣೆಗೊಂಡ ಖನಿಜ ತೈಲಗಳನ್ನು ಇನ್ನು ಕೆಲವೇ ದಶಕಗಳಲ್ಲಿ ಬರಿದು ಮಾಡುವತ್ತ ದಾಪುಗಾಲು ಹಾಕಿದ್ದೇವೆ.
ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲಾ ಕಚ್ಚಾತೈಲ ನಿಕ್ಷೇಪಗಳು ಖಾಲಿಯಾಗುವ ಬಗ್ಗೆ ನಮ್ಮ ವಿಜ್ಞಾನಿಗಳು ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆ. ಅಷ್ಟೇ ಅಲ್ಲ, ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆಯಂತಹ ಖನಿಜ ತೈಲಗಳನ್ನು ಇಂಜಿನುಗಳಲ್ಲಿ ಹಾಕಿ ಸುಡುವಾಗ ಹೊರ ಬರುವ ಇಂಗಾಲಾಮ್ಲಗಳು, ಗಂಧಕದ ಆಮ್ಲಗಳು, ಇಂಗಾಲದ ಸೂಕ್ಷ್ಮ ಕಣಗಳು ವಾತಾವರಣದ ಮಾಲಿನ್ಯವನ್ನು ಹೆಚ್ಚಿಸಿವೆ.
ಇದರಿಂದ ನಾವು ಬರಿದಾಗುತ್ತಿರುವ ಕಚ್ಚಾತೈಲಗಳಿಗೆ ಬದಲೀ ಇಂಧನ ಮೂಲವನ್ನು ತ್ವರಿತವಾಗಿ ಕಂಡುಕೊಳ್ಳಬೇಕಾಗಿದೆ. ಬದಲಿ ಇಂಧನ ಮೂಲಗಳು ನಮಗೆ ನಿರಂತರವಾಗಿ ಸಿಗುವಂತಾಗಬೇಕು. ಇವು ಪರಿಸರದಲ್ಲಿನ ಸಮತೋಲನ ಕಾಯ್ದುಕೊಳ್ಳಬೇಕು. ಜೊತೆಗೆ ಇವುಗಳು ನಮ್ಮ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರಬೇಕು. ಈ ದಿಸೆಯಲ್ಲಿ ನಮ್ಮ ಮುಂದಿರುವ ಈ ಎಲ್ಲಾ ಸವಾಲುಗಳಿಗೆ ಪರಿಹಾರವಾಗಬಲ್ಲ ಅಂಶವೆಂದರೆ ಅದು ಜೈವಿಕ ಇಂಧನ ಕಾರ್ಯಕ್ರಮ ಆಶಾದಾಯಕ ವಾತಾವರಣ ಸೃಷ್ಠಿಸುವಲ್ಲಿ ಯಶಸ್ವಿಯಾಗಿದೆ.
ಇಂದು ನಾವು ಪೆಟ್ರೋಲಿಯಂ ಮತ್ತು ವಿದ್ಯುಚ್ಛಕ್ತಿಗಳಲ್ಲದೆ ಇನ್ನೂ ಕೆಲವು ಬಗೆಯ ಇಂಧನ ಮೂಲಗಳಾದ ಅಣುಶಕ್ತಿ, ಸೌರಶಕ್ತಿ, ವಾಯು ಮತ್ತು ಜೈವಿಕ ಅನಿಲ ಶಕ್ತಿ ಇವುಗಳನ್ನು ಸಹ ಇಂಧನ ಶಕ್ತಿಯನ್ನಾಗಿ ಬಳಸುವುದು ಇಂದು ಅನಿವಾರ್ಯವಾಗಿದೆ. ಅದರಲ್ಲಿ ಜೈವಿಕ ಇಂಧನ ಶಕ್ತಿಯು ಪರಿಸರ ಸ್ನೇಹಿಯಾಗಿದೆ.
ಜೈವಿಕ ಇಂಧನ ಈಗ ಇಡೀ ವಿಶ್ವದಲ್ಲಿ ಚರ್ಚೆಗೆ ಗ್ರಾಸವಾದ ವಿಷಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದಲ್ಲಿಯೂ ಜೈವಿಕ ಇಂಧನದ ಉತ್ಪಾದನೆಗೆ ಸರ್ಕಾರ ಒತ್ತು ನೀಡುತ್ತಿದೆ. ಜೈವಿಕ ಇಂಧನದ ಮೂಲಗಳ ಬಗ್ಗೆ ಜನಜಾಗೃತಿ ಬೆಳೆಸುವುದು ಮತ್ತು ಈ ಇಂಧನ ಮೂಲಗಳನ್ನು ವೃದ್ಧಿಸುವ ದಿಸೆಯಲ್ಲಿ ಪ್ರತಿ ವರ್ಷ ಆಗಸ್ಟ್ 10 ರಂದು ವಿಶ್ವ ಜೈವಿಕ ಇಂಧನ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ನಮ್ಮ ರಾಜ್ಯದ ಮಟ್ಟಿಗೆ ಹೇಳುವುದಾದರೆ ಕರ್ನಾಟಕ ಸರ್ಕಾರವು ದಿನಾಂಕ 9ನೇ ಸೆಪ್ಟೆಂಬರ್ 2008 ರಂದು ಜೈವಿಕ ಇಂಧನ ಅಭಿವೃದ್ಧಿ ನೀತಿಯನ್ನು ಜಾರಿಗೊಳಿಸಿದೆ. ಸಸ್ಯ ಜನ್ಯ ಇಂಧನ ಮೂಲಗಳನ್ನು ಅಭಿವೃದ್ಧಿಪಡಿಸಿ ಕಚ್ಚಾತೈಲಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಮತ್ತು ಕೃಷಿ ವಲಯದ ಮೂಲಕ ಇಂಧನದ ಭದ್ರತೆಯನ್ನು ಬಲಪಡಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ. ಜೈವಿಕ ಇಂಧನ ಉತ್ಪಾದನೆಯ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಿದೆ.
ರಾಜ್ಯದಲ್ಲಿ ಜೈವಿಕ ಇಂಧನ ಚಟುವಟಿಕೆಗಳ ಅಭಿವೃದ್ಧಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯು ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾ ಪಂಚಾಯಿತಿಯ ಸಹಯೋಗದೊಂದಿಗೆ ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿಗಳನ್ನು ರಚಿಸಿದೆ. ಪ್ರತಿ ಜಿಲ್ಲೆಯಲ್ಲಿಯೂ ಜೈವಿಕ ಇಂಧನ ಕೃಷಿಯಲ್ಲಿ ತೊಡಗುವ ರೈತರು, ವಿದ್ಯಾರ್ಥಿಗಳು, ಕೈಗಾರಿಕೋದ್ಯಮಿಗಳು ಹಾಗೂ ಜನಸಾಮಾನ್ಯರ ಉಪಯೋಗಕ್ಕಾಗಿ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಸ್ಥಾಪಿಸಿದೆ. ಇಂತಹ ಕೇಂದ್ರವು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ಈ ಗಿಡಗಳಿಂದ ಸಿಗುವ ಬೀಜಗಳನ್ನು ಸಂಗ್ರಹಿಸಿ ನಂತರ ಸಂಸ್ಕರಿಸಿ ಡೀಸೆಲ್ ಉತ್ಪಾದಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ನಾವು ಅರಣ್ಯ ಪ್ರದೇಶ, ಹೊಲ-ಗದ್ದೆ, ತೋಟದ ಪ್ರದೇಶದ ಸುತ್ತಲಿನ ಸ್ಥಳ, ಸರ್ಕಾರಿ ಜಾಗ, ಶಾಲಾ-ಕಾಲೇಜು ಮತ್ತು ರಸ್ತೆಬದಿ, ಸಾರ್ವಜನಿಕ ಸ್ಥಳಗಳಲ್ಲಿ ಜೈವಿಕ ಇಂಧನ ಉತ್ಪಾದನೆಯ ಸಸ್ಯಜನ್ಯಗಳಾದ ಹೊಂಗೆ, ಬೇವು, ಸೀಮರೂಬ, ಹಿಪ್ಪೆ, ಅಮೂರ, ಜಟ್ರೋಫದಂತಹ ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸಿ ಜೈವಿಕ ಇಂಧನ ತಯಾರಿಸುವಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ.
- ಟಿ.ಜಿ. ಪ್ರೇಮಕುಮಾರ್, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಸೂರ್ಲಬ್ಬಿ.