(ವಿಜಯ್ ಹಾನಗಲ್)
ಸೋಮವಾರಪೇಟೆ, ಆ. 4: ಶನಿವಾರಸಂತೆಯಿಂದ ಸೋಮವಾರಪೇಟೆ ಪಟ್ಟಣಕ್ಕೆ ಪ್ರವೇಶ ಕಲ್ಪಿಸುವಲ್ಲಿ ದಶಕದ ಸ್ಮಾರಕದಂತಿರುವ ಶತಮಾನೋತ್ಸವ ಭವನ ಆಡಳಿತಗಾರರ ದಿವ್ಯ ಅನಾದರಕ್ಕೆ ಒಳಗಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಸಾಯುವ ಹಂತದಲ್ಲಿದೆ!
ಹಲವಷ್ಟು ಬಾರಿ ಶಾಸಕರು, ಅಧಿಕಾರಿಗಳ ಗಮನ ಸೆಳೆದರೂ ಸಹ ಶತಮಾನೋತ್ಸವ ಭವನಕ್ಕೆ ಹಿಡಿದ ಗ್ರಹಣ ಇಂದಿಗೂ ಬಿಟ್ಟಂತೆ ಕಾಣುತ್ತಿಲ್ಲ. ಶತಮಾನೋತ್ಸವ ಭವನ ಎರಡು ಗುಂಪುಗಳ ನಡುವಿನ ಪ್ರತಿಷ್ಠೆಗೆ ಬಲಿಯಾಗುತ್ತಿದ್ದು, ಪಾಳುಬಿದ್ದ ಗೋಪುರದಂತಾಗಿದೆ.
ಹಾಲಿ ಹಾಗೂ ಮಾಜಿ ಶಾಸಕರುಗಳ ನಡುವಿನ ಒಣಪ್ರತಿಷ್ಠೆಗೆ ಈಗಾಗಲೇ ಒಂದೂಕಾಲು ಕೋಟಿ ಹಣ ಹೋಮ ಮಾಡಿದಂತಾಗಿದ್ದು, ಜನಸಾಮಾನ್ಯರ ಉಪಯೋಗದ ಬದಲಿಗೆ ಜಾನುವಾರುಗಳ ಕೊಟ್ಟಿಗೆಯಾಗಿ ಬೃಹತ್ ಭವನ ಬಳಕೆಯಾಗುತ್ತಿದೆ.
ಕಳೆದ 2007 ರಲ್ಲಿ ಶಾಸಕರಾಗಿದ್ದ ಮಾಜೀ ಸಚಿವ ಬಿ.ಎ. ಜೀವಿಜಯ ಅವರ ಅಭಿಲಾಷೆಯಂತೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 100 ವರ್ಷಗಳು ತುಂಬಿದ ಸವಿನೆನಪಿಗಾಗಿ ಶತಮಾನೋತ್ಸವ ಭವನ ನಿರ್ಮಿಸಲು ಕಾರ್ಯಯೋಜನೆ ರೂಪಿಸಲಾಗಿತ್ತು. 2007ರಲ್ಲಿಯೇ ರೂ. 1.25 ಕೋಟಿ ವೆಚ್ಚದ ಭವನಕ್ಕೆ ಉತ್ಸಾಹದಿಂದ ಚಾಲನೆ ನೀಡಿದ ಜೀವಿಜಯ ಅವರು, ನಂತರದ ಚುನಾವಣೆಗಳಲ್ಲಿ ಸತತವಾಗಿ ಸೋಲು ಕಂಡಿದ್ದರಿಂದ, ಶತಮಾನೋತ್ಸವ ಭವನವೂ ಸಹ ಸೋಲು ಕಾಣುವಂತಾಯಿತು.
2007ರಲ್ಲಿ ಎಂಎಲ್ಎ ಆಗಿದ್ದ ಬಿ.ಎ.ಜೀವಿಜಯ ಅವರು ಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷರೂ ಆಗಿದ್ದರಿಂದ ತಮ್ಮ ಶಾಸಕರ ನಿಧಿಯಿಂದ ರೂ. 18 ಲಕ್ಷ, ಮಲೆನಾಡು ಅಭಿವೃದ್ದಿ ಮಂಡಳಿಯಿಂದ ವಿವಿಧ ಹಂತಗಳಲ್ಲಿ ರೂ. 15 ಲಕ್ಷ, ರಾಜ್ಯ ಸಭಾ ಸದಸ್ಯ ರೆಹಮಾನ್ಖಾನ್ರವರು ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ನೀಡಿದ ರೂ 4 ಲಕ್ಷ, ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ರೂ. 2.5 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮರವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ 3 ಲಕ್ಷ ಒದಗಿಸಿದ್ದರಿಂದ ಭವನ ನಿರ್ಮಾಣ ಶೇ.40ರಷ್ಟು ಪೂರ್ಣಗೊಂಡಿದೆ.
ಇದಾದ ನಂತರ ಜೀವಿಜಯ ಅವರು ಚುನಾವಣೆಯಲ್ಲಿ ಸೋತು ಅಪ್ಪಚ್ಚು ರಂಜನ್ ಅವರು ಶಾಸಕರಾಗಿ ಗೆಲುವು ಸಾಧಿಸಿದರು. ಈ ಸಂದರ್ಭ ರಾಜಕೀಯ ಪ್ರತಿಷ್ಠೆಯಿಂದಾಗಿ ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯ ಪದಾಧಿಕಾರಿಗಳು ಹಾಗೂ ಅಪ್ಪಚ್ಚುರಂಜನ್ ನಡುವೆ ಹೊಂದಾಣಿಕೆ ಇಲ್ಲದೇ ಹೋಗಿದ್ದರಿಂದ ಇಂದಿಗೂ ಭವನ ಶಿಥಿಲಾವಸ್ಥೆಯಲ್ಲಿಯೇ ಉಳಿಯುವಂತಾಗಿದೆ.
ಪ.ಪಂ.ನಿಂದ 1ಕೋಟಿ ಅನುದಾನಕ್ಕೆ ಕೊಕ್ಕೆ: 2013ರಲ್ಲಿ ಕೇಂದ್ರ ಸರ್ಕಾರ ಪುರಸ್ಕøತ ಯುಐಡಿಎಸ್ ಎಸ್ಎಂಟಿ ಯೋಜನೆಯಡಿ ಪ್ರತಿ ಪಟ್ಟಣ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು 20ಕೋಟಿ ರೂ. ಗಳ ಕ್ರೀಯಾಯೋಜನೆಯನ್ನು ರೂಪಿಸಲಾಗಿತ್ತು. ಅದರಲ್ಲಿ ಶತಮಾನೋತ್ಸವ ಭವನ ಕಾಮಗಾರಿ ಪೂರ್ಣಗೊಳಿಸಲು ಒಂದು ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು.
ಸಾಮಾನ್ಯ ಸಭೆಯಲ್ಲಿ ಕ್ಯಾತೆ: ಕಳೆದ 2013ರ ಅ.22ರಂದು ಪಟ್ಟಣ ಪಂಚಾಯಿತಿಯ ಅಂದಿನ ಅಧ್ಯಕ್ಷೆ ಲೀಲಾ ನಿರ್ವಾಣಿ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶತಮಾನೋತ್ಸವ ಭವನ ಕಾಮಗಾರಿಗೆ ಮೀಸಲಿಟ್ಟಿದ್ದ ಹಣವನ್ನು ಕುಡಿಯುವ ನೀರಿನ ಸರಬರಾಜಿಗೆ ಮೋಟಾರು ಖರೀದಿಸಲು ಮಾರ್ಪಾಡು ಮಾಡುವಂತೆ ಬಿಜೆಪಿಯ ಲೀಲಾ ನಿರ್ವಾಣಿ, ಕಾಂಗ್ರೆಸ್ನ ಶೀಲಾ ಡಿಸೋಜ, ಮೀನಾ ಕುಮಾರಿ ವಾದಿಸಿದರು.
ಇದಕ್ಕೆ ವಿಜಯಲಕ್ಷ್ಮಿ, ಬಿ.ಎಂ. ಸುರೇಶ್, ಬಿ.ಸಿ. ವೆಂಕಟೇಶ್, ವಿರೋಧ ವ್ಯಕ್ತಪಡಿಸಿ ಶತಮಾನೋತ್ಸವ ಭವನಕ್ಕೆ ಕ್ರೀಯಾಯೋಜನೆಯಲ್ಲಿ ಮೀಸಲಿಟ್ಟ ಹಣವನ್ನು ಬದಲಾವಣೆ ಮಾಡಬಾರದು ಎಂದು ಪಟ್ಟುಹಿಡಿದರು.
ಶತಮಾನೋತ್ಸವ ಭವನ ಕಾಮಗಾರಿ ಪೂರ್ಣಗೊಂಡರೆ, ಪಟ್ಟಣದ ಜನರಿಗೆ, ಸಂಘ-ಸಂಸ್ಥೆಗಳಿಗೆ ಉಪಯೋಗವಾಗುತ್ತದೆ. ಭವನ ಪಟ್ಟಣಕ್ಕೆ ಸಮೀಪದಲ್ಲಿದ್ದು, ಮುಂದೆ ಪಟ್ಟಣ ಪಂಚಾಯಿತಿ ವ್ಯಾಪ್ತಿ ವಿಸ್ತಾರವಾದರೆ ಉದ್ದೇಶಿತ ಭವನ ಪಟ್ಟಣಕ್ಕೆ ಸೇರ್ಪಡೆಯಾಗಲಿದೆ. ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಬೇಡ, ಕೇಂದ್ರ ಸರ್ಕಾರದ ಹಣವನ್ನು ಸದುದ್ದೇಶದ ಕಾಮಗಾರಿಗಳಿಗೆ ಉಪಯೋಗಿಸಲು ಯಾವದೇ ಅಡೆತಡೆಗಳಿಲ್ಲ ಎಂದು ವಾದಿಸಿದರು. ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವಲ್ಲಿ ಸಭೆ ವಿಫಲವಾಯಿತು. ರೂ. 1ಕೋಟಿ ಅನುದಾನಕ್ಕೂ ಕೊಕ್ಕೆ ಬಿತ್ತು.
ಮಾಜಿ ಸಚಿವ ಬಿ.ಎ.ಜೀವಿಜಯ ಪ್ರಾರಂಭ ಮಾಡಿದ, ಕಾಮಗಾರಿಯನ್ನು ಪೂರ್ಣಗೊಳಿಸಲು, ಇನ್ನೊಂದು ಪಕ್ಷದವರಿಗೆ ಇಷ್ಟವಿಲ್ಲ. ಈ ಕಾರಣದಿಂದ ಕಳೆದ 13 ವರ್ಷಗಳಿಂದ ಶತಮಾನೋತ್ಸವ ಭವನಕ್ಕೆ ಸರ್ಕಾರದಿಂದ ಹಣ ಒದಗಿಸಲು ಯಾರೂ ಮುಂದಾಗಿಲ್ಲವೆಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿದೆ.
ದಾಖಲೆ ನೀಡಿದರೆ ಕ್ರಮ: ಶತಮಾನೋತ್ಸವ ಭವನ ಸಂಬಂಧಿತ ಎಲ್ಲಾ ದಾಖಲೆಗಳು ಮಾಜೀ ಶಾಸಕ ಬಿ.ಎ. ಜೀವಿಜಯ ಅವರ ಬಳಿಯಿದ್ದು, ಯೋಜನೆಗೆ ಸಂಬಂಧಿಸಿದ ಯಾವದೇ ದಾಖಲೆಗಳು ತನ್ನ ಬಳಿಯಿಲ್ಲ. ಈ ಹಿಂದೆ ಅನೇಕ ಬಾರಿ ದಾಖಲೆಗಳನ್ನು ಒದಗಿಸುವಂತೆ ಕೇಳಿಕೊಂಡಿದ್ದರೂ ಹಸ್ತಾಂತರಿಸಿಲ್ಲ. ಶತಮಾನೋತ್ಸವ ಭವನದ ಕಾರ್ಯಾಧ್ಯಕ್ಷರೂ ಸಹ ಜೀವಿಜಯ ಅವರೇ ಆಗಿದ್ದು, ಅದಕ್ಕೆ ಸಂಬಂಧಿಸಿದ ಅನುದಾನದ ವಿವರ, ಕ್ರಿಯಾಯೋಜನೆ, ನೀಲನಕ್ಷೆ ಸೇರಿದಂತೆ ಇದುವರೆಗಿನ ಎಲ್ಲಾ ದಾಖಲೆ ನೀಡಿದರೆ ಶತಮಾನೋತ್ಸವ ಭವನವನ್ನು ಪೂರ್ಣಗೊಳಿ ಸಲಾಗುವದು ಎಂದು ಶಾಸಕ ಅಪ್ಪಚ್ಚುರಂಜನ್ ಹೇಳುತ್ತಿದ್ದು, ಈ ಬಗ್ಗೆ ವ್ಯವಹರಿಸಲು ಸಮಿತಿಯ ಪದಾಧಿಕಾರಿಗಳು ಮುಂದಾಗಿಲ್ಲ. ಪರಿಣಾಮ ಶತಮಾನೋತ್ಸವ ಭವನ ಪಾಳುಬಿದ್ದ ಕೊಂಪೆಯಾಗುತ್ತಿದೆ.
ಈಗಾಗಲೇ ಒಂದೂಕಾಲು ಕೋಟಿ ವೆಚ್ಚದಲ್ಲಿ ಜಾನುವಾರುಗಳಿಗೆ ಕೊಟ್ಟಿಗೆ ನಿರ್ಮಿಸಿದ ಕೀರ್ತಿ ಯಾರಿಗೆ ಸಲ್ಲಬೇಕು? ಎಂಬ ಪ್ರಶ್ನೆ ಸಹಜವಾಗಿ ಸಾರ್ವಜನಿಕರನ್ನು ಕಾಡುತ್ತಿದೆ. ನಮಗೆ ಕಟ್ಟಡವನ್ನು ವಹಿಸಿಕೊಟ್ಟರೆ ತಾಲೂಕು ಮಟ್ಟದ ಗುರುಭವನ ನಿರ್ಮಾಣ ಮಾಡುತ್ತೇವೆ. ಅನುದಾನವನ್ನು ನಾವೇ ತರುತ್ತೇವೆ ಎಂದು ಶಿಕ್ಷಕರ ಸಂಘದವರು ಮುಂದಿಟ್ಟಿದ್ದ ಪ್ರಸ್ತಾಪವನ್ನೂ ತಿರಸ್ಕರಿಸಿ ದನದ ಕೊಟ್ಟಿಗೆ ಮಾಡಿದ ಮಂದಿ ಮುಂದೇನು ಮಾಡುತ್ತಾರೆ ಎಂಬದನ್ನು ಕಾದುನೋಡಬೇಕಿದೆ!