*ಸಿದ್ದಾಪುರ, ಜು. 31: ನೆಲ್ಲಿಹುದಿಕೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಾಡಾನೆ ತಡೆ ಬೇಲಿ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದು, ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೆಲ್ಲಿಹುದಿಕೇರಿಯ ಬರಡಿ ಗ್ರಾಮದಿಂದ ವಾಲ್ನೂರು-ತ್ಯಾಗತ್ತೂರು ಪಂಚಾಯಿತಿ ವ್ಯಾಪ್ತಿಯ ಅಮ್ಮಂಗಲ ಗ್ರಾಮದವರೆಗೆ ಸುಮಾರು 7.50 ಕಿ.ಮೀ. ದೂರದವರೆಗೆ ರೈಲ್ವೆ ಕಂಬಿಗಳಿಂದ ಕಾಡಾನೆ ತಡೆ ಬೇಲಿ ನಿರ್ಮಿಸಲಾಗುತ್ತಿದೆ. ಕಾಮಗಾರಿ ಆರಂಭಗೊಂಡು ಒಂದು ವರ್ಷವೇ ಕಳೆದರೂ ಯೋಜನೆ ಪೂರ್ಣಗೊಂಡಿಲ್ಲ. ಗುಂಡ್ಲುಪೇಟೆಯ ಕಾಳಪ್ಪ ಎಂಬವರು ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಪ್ರತಿ ಕಿ.ಮೀ.ಗೆ 1.10 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಈ ಬೇಲಿ ನಿರ್ಮಾಣಕ್ಕಾಗಿ ಪರಿಕರಗಳನ್ನು ತೆಗೆದುಕೊಂಡು ಹೋಗಲು ಬೆಳೆಗಾರರಾದ ಮುಂಡ್ರಮನೆ ಬಿದ್ದಪ್ಪ, ಕುಶಾಲಪ್ಪ ಹಾಗೂ ಶಿವಕುಮಾರ್ ಅವರುಗಳು ತಮ್ಮ ಗದ್ದೆಯನ್ನೇ ಬಿಟ್ಟುಕೊಟ್ಟಿದ್ದರು. ಈಗ ರೂ. 7.70 ಕೋಟಿಯ ಕಾಮಗಾರಿ ನೆನೆಗುದಿಗೆ ಬಿದ್ದಿದೆ.

ಕಾಮಗಾರಿ ವಿಳಂಬದಿಂದಾಗಿ ಕಾಡಾನೆಗಳ ಹಿಂಡು ಇದೇ ಮಾರ್ಗವಾಗಿ ರಾಜಾರೋಷವಾಗಿ ಗ್ರಾಮಗಳನ್ನು ಪ್ರವೇಶಿಸುತ್ತಿದೆ. ಮಹಾಗುಂಡಿ ಪಾಲ ಎಂಬ ಪ್ರದೇಶವೇ ಕಾಡಾನೆಗಳ ಪ್ರವೇಶದ ಹೆಬ್ಬಾಗಿಲಾಗಿದೆÉ. ಆದರೆ ಇಲ್ಲಿ ಬೇಲಿ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಈ ಕ್ರಮ ಅವೈಜ್ಞಾನಿಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸದಿದ್ದಲ್ಲಿ ಅರಣ್ಯ ಅಧಿಕಾರಿಗಳಿಗೆ ದಿಗ್ಬಂಧನ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.