ಮಡಿಕೇರಿ ಜೂ.22 : ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿರುವ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಮತ್ತು ಇತರ ಸಿಬ್ಬಂದಿಗಳ ಸಂಘ (ಸಿಐಟಿಯು ಸಂಯೋಜಿತ) ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾ.26 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಆರ್.ಭರತ್ ಜಿಲ್ಲೆಯ ಮೂರು ತಾಲೂಕುಗಳಲ್ಲಿರುವ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ನಾನ್ ಕ್ಲೀನಿಂಗ್ ಮತ್ತು ಡಿ ಗ್ರೂಪ್ ನೌಕರರು, ಆಂಬ್ಯುಲೆನ್ಸ್ ಚಾಲಕರು, ಸೆಕ್ಯುರಿಟಿ ಗಾರ್ಡ್ ಹಾಗೂ ಇನ್ನಿತರ ರಂಗದಲ್ಲಿ ದುಡಿಯುತ್ತಿರುವ ನೌಕರರಿಗೆ ಈಗಾಗಲೇ ನೀಡುತ್ತಿರುವ ವೇತನ ಅತ್ಯಂತ ಕಡಿಮೆಯಾಗಿದ್ದು, ಹೆಚ್ಚು ಒತ್ತಡದಲ್ಲಿ ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಆದರೆ ಸರ್ಕಾರ ಇವರಿಗೆ ಸರಿಯಾದ ವೇತನ ನೀಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ತಮಗೆ ನೀಡಿರುವುದಕ್ಕಿಂತಲೂ ಅಧಿಕ ಸಮಯಗಳ ಕಾಲ ದುಡಿಯುತ್ತಿರುವ ನೌಕರರು ಲಾಕ್ ಡೌನ್ ನಡುವೆ ಬಸ್ಗಳಿಲ್ಲದೆ ಆಟೋ ಮತ್ತು ಕಾರುಗಳಿಗೆ ದುಬಾರಿ ಬಾಡಿಗೆ ನೀಡಿ ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ ಸರ್ಕಾರ ಕೊರೊನಾ ವಾರಿಯರ್ಸ್ ಎಂದು ಪ್ರಮಾಣ ಪತ್ರ ನೀಡಿ ಗೌರವ ನೀಡಿದೆ ಹೊರತು ಅವರ ಜೀವನ ನಿರ್ವಹಣೆಗೆ ಬೇಕಾದ ಯಾವುದೇ ಆದಾಯವನ್ನು ನೀಡಿಲ್ಲ ಎಂದು ಟೀಕಿಸಿದರು. ಕೂಡಲೇ ಈ ನೌಕರರಿಗೆ ಪಿಎಫ್ ಮತ್ತು ಇಎಸ್ಐ ಸೌಲಭ್ಯ ಒದಗಿಸಬೇಕು. ಕೊರೊನಾ ಕಾಲದಲ್ಲಿ ಹೆಚ್ಚುವರಿ ಕೆಲಸ ನಿರ್ವಹಿಸಿದ ಸಿಬ್ಬಂದಿಗಳಿಗೆ ಪ್ರಸಕ್ತ ವೇತನದ ಎರಡು ಪಟ್ಟು ವೇತನ ನೀಡಬೇಕು, ಕಾರ್ಮಿಕರಿಗೆ ವರ್ಷಕ್ಕೆ ನೀಡ ಬೇಕಿರುವ ಸಮವಸ್ತ್ರ, ಜರ್ಕಿನ್, ಗ್ಲೌಸ್ ಮುಂತಾದವುಗಳನ್ನು ಗುತ್ತಿಗೆದಾರರು ಸಮರ್ಪಕವಾಗಿ ನೀಡಬೇಕು, ಮಾಸಿಕ ರೂ.18 ಸಾವಿರ ವೇತನ ನೀಡುವಂತೆ ಪ್ರತಿಭಟನೆ ಸಂದರ್ಭ ಒತ್ತಾಯಿಸಲಾಗುವುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಹೆಚ್.ಜಾನಕಿ ಹಾಗೂ ಮಡಿಕೇರಿ ತಾಲೂಕು ಪದಾಧಿಕಾರಿ ಕೆ.ವಿ.ಬೇಬಿ ಉಪಸ್ಥಿತರಿದ್ದರು.