ಮಡಿಕೇರಿ, ಜೂ.5 : ರಾಜ್ಯ ಸರಕಾರ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ನೀಡುತ್ತಿರುವ ಕೋವಿಡ್-19ರ ಸಹಾಯಧನವನ್ನು ಇತರ ಚಾಲಕರಿಗೂ ವಿಸ್ತರಿಸಬೇಕು ಎಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಝೇಷನ್ನ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ವಿನ್ಸೆಂಟ್ ಬಾಬು ಅವರು, ಕೋವಿಡ್-19 ಲಾಕ್ಡೌನ್ ಕಾರಣದಿಂದಾಗಿ ಪ್ರತಿನಿತ್ಯ ಬಾಡಿಗೆ ನಡೆಸಿ ಜೀವನ ಸಾಗಿಸುತ್ತಿದ್ದ ಚಾಲಕರಿಗೆ ಆದಾಯವಿಲ್ಲದೆ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದರು.
ಪ್ರಸಕ್ತ ರಾಜ್ಯ ಸರಕಾರ ಘೋಷಿಸಿರುವ ಕೋವಿಡ್-19 ಸಹಾಯಧನ ಕೇವಲ ಆಟೋ ಮತ್ತು ಟ್ಯಾಕ್ಸಿ (3+1 ಮತ್ತು 4+1)ಚಾಲಕರಿಗೆ ಮಾತ್ರ ಅನ್ವಯವಾಗಿದ್ದು, ಇತರ ಚಾಲಕರುಗಳಾದ 7+1, 12+1 ಮಿನಿ ಬಸ್, ಟೆಂಪೋ ಟ್ರಾವೆಲರ್ ಹಾಗೂ ಬಸ್ ಚಾಲಕರು ಇದರಿಂದ ವಂಚಿತರಾಗಿದ್ದಾರೆ. ಸರಕಾರಕ್ಕೆ ತೆರಿಗೆ ಪಾವತಿಸಿ ನ್ಯಾಯಯುತವಾಗಿ ಬಾಡಿಗೆ ಮಾಡುತ್ತಿದ್ದ ಈ ಚಾಲಕರ ಕುಟುಂಬಗಳು ಕೂಡಾ ಕೋವಿಡ್-19ರಿಂದಾಗಿ ನಿರ್ಗತಿಕ ಸ್ಥಿತಿಗೆ ತಲುಪಿರುವುದರಿಂದ ಸರಕಾರ ಇತರ ಚಾಲಕರಿಗೂ ಇದರ ಪ್ರಯೋಜನ ವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಕೊರೊನಾ ಲಾಕ್ಡೌನ್ ನಿಂದಾಗಿ ಪ್ರವಾಸೋದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಇದರಿಂದಾಗಿ ಟ್ಯಾಕ್ಸಿ ಚಾಲಕ-ಮಾಲೀಕರಿಗೂ ಆದಾಯ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಪ್ರವಾಸೋದ್ಯಮದ ಪುನರಾರಂಭಕ್ಕೆ ಅನುವು ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
ತೆರಿಗೆ ನಷ್ಟ: ಕೊಡಗು-ಕೇರಳ ಭಾಗದಲ್ಲಿ ಕರ್ನಾಟಕದ ಸಾರಿಗೆ ಇಲಾಖೆಯ ಚೆಕ್ಪೋಸ್ಟ್ಗಳಲ್ಲಿ ರಾಜ್ಯ ಸರಕಾರಕ್ಕೆ ಕೋಟ್ಯಂತರ ರೂ. ತೆರಿಗೆ ನಷ್ಟವಾಗುತ್ತಿದ್ದು, ಈ ಬಗ್ಗೆ ಹಲವು ಬಾರಿ ಸರಕಾರದ ಗಮನಸೆಳೆದಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ವಿನ್ಸೆಂಟ್ ಬಾಬು ಅವರು, ಕರ್ನಾಟಕದ ವಾಹನಗಳು ಕೇರಳ ಪ್ರವೇಶಿಸ ಬೇಕಾದರೆ ನಿಗದಿತ ತೆರಿಗೆ ಪಾವತಿಸಿಯೇ ತೆರಳಬೇಕಾಗಿದೆ. ಆದರೆ ಕೇರಳದಿಂದ ಬರುವ ವಾಹನಗಳು ತೆರಿಗೆ ನೀಡದೆಯೇ ಕರ್ನಾಟಕ ಪ್ರವೇಶಿಸುತ್ತಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಎಂದು ತಿಳಿಸಿದರು.
ಕೊಡಗು ಸೇರಿದಂತೆ ರಾಜ್ಯದಲ್ಲಿ ವೈಟ್ಬೋರ್ಡ್ (ಬಿಳಿ ಫಲಕ) ಹೊಂದಿರುವವರು ಕೂಡಾ ಇಂದು ಪ್ರವಾಸಿಗರನ್ನು ಒಯ್ಯುತ್ತಿದ್ದು, ಇದರಿಂದ ಸರಕಾರಕ್ಕೆ ನ್ಯಾಯಯುತವಾಗಿ ತೆರಿಗೆ ಪಾವತಿಸಿ ಟ್ಯಾಕ್ಸಿ (ಎಲ್ಲೋ ಬೋರ್ಡ್) ಓಡಿಸುವವರು ನಷ್ಟ ಅನುಭವಿಸುವಂತಾಗಿದೆ. ವೈಟ್ ಬೋರ್ಡ್ನವರು ಕಡಿಮೆ ದರದಲ್ಲಿ ಪ್ರವಾಸಿಗರಿಗೆ ಸೇವೆ ನೀಡುವುದರಿಂದ ಟ್ಯಾಕ್ಸಿ ಚಾಲಕರು ಆದಾಯವಿಲ್ಲದೆ ದಿನ ಕಳೆಯುವ ಪರಿಸ್ಥಿತಿಯೂ ನಿರ್ಮಾಣವಾಗಿದೆ ಎಂದು ಅವರು ದೂರಿದರು.
ಕೊಡಗು ಜಿಲ್ಲೆಯಲ್ಲಿ ಖಾಯಂ ಸಾರಿಗೆ ಅಧಿಕಾರಿ ಇಲ್ಲದಿರುವುದರಿಂದ ಹಲವಾರು ಸಮಸ್ಯೆಗಳು ಎದುರಾಗಿದೆ ಎಂದು ತಿಳಿಸಿದ ಅವರು, ಈ ದಿಸೆಯಲ್ಲಿ ಜಿಲ್ಲೆಗೆ ಖಾಯಂ ಅಧಿಕಾರಿಯನ್ನು ನೇಮಕ ಮಾಡಬೇಕು. ಇದರೊಂದಿಗೆ ಕೊಡಗಿನ ಜಿಲ್ಲಾ ಕೇಂದ್ರದಲ್ಲಿ ಚಾಲಕರ ಅನುಕೂಲಕ್ಕಾಗಿ ಚಾಲಕರ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ರಕ್ಷಾಧಿಕಾರಿ ಎಂ.ಎ.ರಫೀಕ್, ಪ್ರಧಾನ ಕಾರ್ಯದರ್ಶಿ ಪಿ.ಎ.ರಕೀಬ್, ಸದಸ್ಯರುಗಳಾದ ರಘು ಮಡಿಕೇರಿ, ವಿನೋದ್ ಹಾಗೂ ಹರ್ಷ ಮಡಿಕೇರಿ ಉಪಸ್ಥಿತರಿದ್ದರು.