ಶನಿವಾರಸಂತೆ, ಮೇ 27: ಸಮೀಪದ ಕೊಡ್ಲಿಪೇಟೆ ಹೋಬಳಿಯ ನೀರುಗುಂದ ಗ್ರಾಮದಲ್ಲಿ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಮಳೆಗಾಗಿ ಮಳೆಮಲ್ಲೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.

ಗ್ರಾಮದ ಬೆಳೆಗಾರ ಚಂದ್ರಶೇಖರ ಅವರ ತೋಟದಲ್ಲಿ ಹಾಲು ಬರುವ ಹಲಸಿನ ಮರದ ಬುಡದಲ್ಲಿ ಕಲಶ ಪ್ರತಿಷ್ಠಾಪಿಸಿ, ವಿಶೇಷ ಅಲಂಕಾರ ಮಾಡಿದ್ದರು. ಗ್ರಾಮದ ಅವಿವಾಹಿತ ಶಿವದೀಕ್ಷೆ ಪಡೆದಿರುವ ಯುವಕ ಬೆಳಗ್ಗಿನಿಂದ ಉಪವಾಸವಿದ್ದು ಸ್ವಾಮೀಜಿಯವರ ಪಾದಪೂಜೆ ಮಾಡಿ ಪೂಜಾ ಕಾರ್ಯದಲ್ಲಿ ತೊಡಗಿದ್ದರು. ಜೊತೆಗೆ ಪುರೋಹಿತ ಸೋಮಶೇಖರ ಶಾಸ್ತ್ರೀ ಅವರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಅಲ್ಲಿಯೆ ಅಡುಗೆ ಮಾಡಿ ಗ್ರಾಮಸ್ಥರಿಗೆ ದಾಸೋಹವನ್ನು ಏರ್ಪಡಿಸಲಾಗಿತ್ತು. ಗ್ರಾಮದ ಪ್ರಮುಖರಾದ ಚಂದ್ರಶೇಖರ್, ಬಾಬು ರಾಜೇಂದ್ರ ಪ್ರಸಾದ್, ಅಪ್ಪಸ್ವಾಮಿ, ಅಶ್ವಥ್ ಕುಮಾರ್, ಧರ್ಮಪ್ಪ, ಲೋಕೇಶ್, ಗಣೇಶ್, ವಸಂತ್ ಇತರರು ಹಾಜರಿದ್ದರು.