ಸೋಮವಾರಪೇಟೆ, ಮೇ 27: ತಾಲೂಕಿನ ಅಬ್ಬೂರುಕಟ್ಟೆ ಸಮೀಪದ ಮೋರಿಕಲ್ಲು ಗ್ರಾಮದಲ್ಲಿರುವ ಕಲ್ಲುಕೋರೆಯೊಂದರಲ್ಲಿ ಹಿಟಾಚಿ ಯಂತ್ರ ಮಗುಚಿಬಿದ್ದು, ಕಾರ್ಮಿಕ ಯುವಕನೋರ್ವ ದುರ್ಮರಣಕ್ಕೀಡಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಜಾರ್ಖಂಡ್‍ನ ಹಜಾರಿಬಾದ್ ನಿವಾಸಿ ಅಜಯ್ ಯಾದವ್ (21) ಎಂಬಾತನೇ ಸಾವನ್ನಪ್ಪಿದವನಾಗಿದ್ದು, ಇಂದು ಬೆಳಿಗ್ಗೆ 9.30 ಗಂಟೆಗೆ ದುರ್ಘಟನೆ ಸಂಭವಿಸಿದೆ.

ಮೃತ ಅಜಯ್, ಹಿಟಾಚಿ ಚಾಲಕನಾಗಿರುವ ತನ್ನ ಬಾವ ಚಂದ್ರಕುಮಾರ್‍ನೊಂದಿಗೆ ಕಳೆದ 5 ತಿಂಗಳ ಹಿಂದೆ ಜಾರ್ಖಂಡ್‍ನಿಂದ ಬಂದು ಇದೇ ಕಲ್ಲುಕೋರೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಇಂದು ಬೆಳಿಗ್ಗೆ ಹಿಟಾಚಿ ಯಂತ್ರದ ಮೂಲಕ ಟಿಪ್ಪರ್ ವಾಹನಕ್ಕೆ ಕಲ್ಲುಗಳನ್ನು ಲೋಡ್ ಮಾಡುವ ಸಂದರ್ಭ, ಆಕಸ್ಮಿಕವಾಗಿ ಹಿಟಾಚಿ ಯಂತ್ರ ಮಗುಚಿಕೊಂಡಿದ್ದು, ಚಾಲಕ ಚಂದ್ರಕುಮಾರ್ ಯಂತ್ರದಿಂದ ಹೊರಹಾರಿದ್ದಾನೆ.

ಈ ಸಂದರ್ಭ ಕೆಳಭಾಗದಲ್ಲಿದ್ದ ಅಜಯ್‍ನ ಮೇಲೆ ಹಿಟಾಚಿ ಯಂತ್ರ ಬಿದ್ದಿದೆ. ತಕ್ಷಣ ಇತರರು ಸಹಾಯಕ್ಕೆ ಆಗಮಿಸಿ, ಮತ್ತೊಂದು ಹಿಟಾಚಿಯ ಮೂಲಕ ಮಗುಚಿ ಬಿದ್ದಿದ್ದ ಯಂತ್ರದ ಕ್ಯಾಬಿನ್ ಮೇಲೆತ್ತಿದ್ದು, ಅದರಡಿಯಲ್ಲಿ ಸಿಲುಕಿದ್ದ ಅಜಯ್‍ನನ್ನು ಹೊರ ತೆಗೆದಿದ್ದಾರೆ.

ತಕ್ಷಣ ಗಾಯಾಳುವನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಸಾವನ್ನಪ್ಪಿರುವ ಬಗ್ಗೆ ವೈದ್ಯರು ಖಚಿತಪಡಿಸಿದ್ದಾರೆ. ಪಟ್ಟಣದ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಜಾರ್ಖಂಡ್‍ಗೆ ತೆಗೆದುಕೊಂಡು ಹೋಗಲು ಕ್ರಮವಹಿಸಲಾಗಿದೆ.

ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಅವರುಗಳು ತೆರಳಿ ಪರಿಶೀಲನೆ ನಡೆಸಿದ್ದು, ಅಜಾಗರೂಕತೆಯ ಚಾಲನೆಗಾಗಿ ಹಿಟಾಚಿ ಯಂತ್ರದ ಚಾಲಕ ಚಂದ್ರಕುಮಾರ್ ಮೇಲೆ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.