ಮಡಿಕೇರಿ, ಏ. 22: ಮಳೆಗಾಲ ಸಮೀಪದಲ್ಲೇ ಇದ್ದು, ಕಳೆದ ಬಾರಿ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆ, ಸೇತುವೆ, ತಡೆಗೋಡೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುಖ್ಯ ಮಂತ್ರಿಗಳಲ್ಲಿ ಅನುಮತಿ ಕೋರಿ ಮನವಿ ಮಾಡಲಾಗಿತ್ತು. ನನ್ನ ಮನವಿಗೆ ತಕ್ಷಣ ಸ್ಪಂದಿಸಿ ಕಾಮಗಾರಿ ಪೂರ್ಣ ಗೊಳಿಸಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿರುತ್ತಾರೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ. ಕೊರೊನಾ ಲಾಕ್‍ಡೌನ್‍ನಿಂದಾಗಿ ವೀರಾಜಪೇಟೆ ಮೊರಾರ್ಜಿ ಶಾಲೆ, ಮಡಿಕೇರಿಯ ಬಿಸಿಎಂ ಹಾಸ್ಟೆಲ್‍ನಲ್ಲಿ ಆಶ್ರಯ ಪಡೆದಿರುವ ಹೊರ ಜಿಲ್ಲೆಯ ಕಾರ್ಮಿಕರು, ರೈತರು ಹಾಗೂ ಕೊಡಗಿಗೆ ಕಾಫಿ ಫಸಲು ಕೊಯ್ಲಿಗಾಗಿ ಬಂದಿದ್ದ ಹೊರಜಿಲ್ಲೆ ಕಾರ್ಮಿಕರನ್ನು, ರೈತರನ್ನು ವಾಪಸ್ ಕಳುಹಿಸಲು ಅನುಮತಿಗಾಗಿ ಮನವಿ ಮಾಡಲಾಗಿತ್ತು. ಇದಕ್ಕೂ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿಗಳು ಅನುಮತಿ ನೀಡಿರುವುದಾಗಿ ಶಾಸಕರು ತಿಳಿಸಿದ್ದಾರೆ.