ಮಡಿಕೇರಿ, ಏ. 22: ಜನ್ಧನ್ ಖಾತೆಗೆ ಬಂದಿರುವ ಹಣ ಖಾತೆಯಲ್ಲಿಯೇ ಇರಲಿದೆ. ಫಲಾನುಭವಿಗಳು ಆತಂಕ ಪಡಬೇಕಿಲ್ಲ. ಬ್ಯಾಂಕುಗಳಿಗೆ ಮುಗಿಬೀಳಬೇಕಿಲ್ಲ ಎಂದು ಲೀಡ್ ಬ್ಯಾಂಕ್ ಮುಖ್ಯಸ್ಥ ಬಾಲಚಂದ್ರ ತಿಳಿಸಿದ್ದಾರೆ.
ಕೊರೊನಾ ವೈರಸ್ ತಡೆಗಟ್ಟಲು ಸರ್ಕಾರ ಲಾಕ್ಡೌನ್ ಮಾಡಿದೆ. ಈ ವೇಳೆ ಮಹಿಳೆಯರಿಗಾಗಿ ತಿಂಗಳಿಗೆ ರೂ. 500 ನೀಡಲಾಗುತ್ತಿದೆ. ಆ ಹಣ ಪಡೆಯಲು ಜನ ಬ್ಯಾಂಕುಗಳಿಗೆ ಮುಗಿಬೀಳುತ್ತಿದ್ದಾರೆ. ಇದರಿಂದ ಸಮಸ್ಯೆ ಹೆಚ್ಚಾಗುತ್ತಿದೆ. ಕೊರೊನಾ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿ. ತುಂಬಾ ಅವಶ್ಯವಿದ್ದರೆ ಮಾತ್ರ ಬ್ಯಾಂಕಿಗೆ ಬನ್ನಿ. ಇಲ್ಲವಾದರೆ ಮನೆ ಬಾಗಿಲಿಗೆ ಬ್ಯಾಂಕ್ ಮಿತ್ರರು ಬಂದು ಹಣ ನೀಡುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಲಾಕ್ಡೌನ್ ಹಿನ್ನೆಲೆ ಜನ್ಧನ್ ಖಾತೆಯ ಮಹಿಳೆಯರಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಲ್ಲಿ ನೀಡಲಾಗುತ್ತಿರುವ ಹಣವನ್ನು ಯಾವುದೇ ಬ್ಯಾಂಕುಗಳು ವಾಪಾಸ್ ಕಳುಹಿಸುವುದಿಲ್ಲ. ಫಲಾನುಭವಿಗಳು ಆತಂಕವಿಲ್ಲದೇ ಸುರಕ್ಷತೆಗೆ ಆದ್ಯತೆ ನೀಡಿ ಎಂದು ಲೀಡ್ ಬ್ಯಾಂಕ್ ಮುಖ್ಯಸ್ಥರು ತಿಳಿಸಿದ್ದಾರೆ.
ಕೊರೊನಾದಿಂದ ಲಾಕ್ಡೌನ್ ಆದ ಹಿನ್ನೆಲೆ ಜನ್ಧನ್ ಮಹಿಳಾ ಖಾತೆದಾರರಿಗೆ ಪ್ರತಿ ತಿಂಗಳು ತಲಾ 500 ರೂ.ನಂತೆ ಮೂರು ತಿಂಗಳು ಹಣವನ್ನು ಖಾತೆಗಳಿಗೆ ಕೇಂದ್ರ ಸರಕಾರ ಜಮೆ ಮಾಡಲಿದೆ. ಬ್ಯಾಂಕುಗಳಿಗೆ ಜಮೆಯಾಗಿರುವ ಹಣವನ್ನು ತೆಗೆದುಕೊಳ್ಳದೇ ಹೋದರೆ ಕೇಂದ್ರ ಸರ್ಕಾರವೇ ಅದನ್ನು ವಾಪಾಸ್ ತೆಗೆದುಕೊಳ್ಳಲಿದೆ ಎಂಬುದು ಊಹಾಪೆÇೀಹವಾಗಿದ್ದು 500 ರೂ.ಗಳನ್ನು ತಿಂಗಳಿಗೆ ತೆಗೆದುಕೊಳ್ಳಬಹುದು. ಇಲ್ಲವೇ ಮೂರು ತಿಂಗಳು ಸೇರಿ 1,500 ರೂ.ಗಳನ್ನು ಮೂರು ತಿಂಗಳ ನಂತರವೂ ತೆಗೆದುಕೊಳ್ಳಬಹುದು, ಇಲ್ಲವೇ ಎಂದಾದರು ಬಿಡುವು ಮಾಡಿಕೊಂಡು ಹಣ ತೆಗೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.
ಮೂರು ತಿಂಗಳ ನಂತರವೂ ಕೂಡಾ ನಿಮ್ಮ ಹಣ ಖಾತೆಯಲ್ಲಿಯೇ ಇರಲಿದೆ. ಈಗಾಗಲೇ ಜನ ಜನ್ಧನ್ ಹಣ ವಾಪಾಸ್ ಹೋಗುತ್ತಿದೆ ಎಂದು ತಪ್ಪು ತಿಳಿದಿರುವುದರಿಂದ ಬ್ಯಾಂಕುಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಉಲ್ಲಂಘನೆಯಾಗುತ್ತಿದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯಸ್ಥ ಆರ್.ಕೆ. ಬಾಲಚಂದ್ರ ತಿಳಿಸಿದ್ದಾರೆ.