ಮಡಿಕೇರಿ, ಏ. 10:: ಕೊರೊನಾ ವೈರಸ್ ದೇಶದಾದ್ಯಂತ ವ್ಯಾಪಿಸುತ್ತಿರುವ ಹಿನ್ನೆಲೆ, ಲಾಕ್‍ಡೌನ್ ಜಾರಿಯಾಗಿದ್ದು, ಇದರಿಂದ ಹಲವು ಕುಟುಂಬಗಳು ಸಂಕಷ್ಟದಲ್ಲಿದ್ದಾರೆ. ಇದನ್ನು ಗಮನಿಸಿ ಬೈಲುಕೊಪ್ಪ ‘ಸೇರಾ ಜೆ’ ಶಾಲೆ ವತಿಯಿಂದ 300 ಸ್ಥಳೀಯ ಭಾರತೀಯ ಬಡ ಕುಟುಂಬಗಳಿಗೆ ಹಾಗೂ 40 ಬಡ ಟೆಬೇಟಿಯನ್ ಕುಟುಂಬಗಳಿಗೆ ಬೈಲುಕೊಪ್ಪ ಪೊಲೀಸ್ ಠಾಣೆ ಎದುರು ಆಹಾರ ಕಿಟ್‍ಗಳನ್ನು ವಿತರಿಸಲಾಯಿತು.

ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳ ನಿರಂತರ ಹೋರಾಟವನ್ನು ಸ್ಮರಿಸುತ್ತಾ ಈ ಹೋರಾಟಕ್ಕೆ ಪ್ರಧಾನಿಯ “ಪಿ.ಎಮ್. ಕೇರ್ಸ್ ಫಂಡ್” ಗೆ ರೂ. 1,50,000 ಹಾಗೂ ಕರ್ನಾಟಕ ಮುಖ್ಯಮಂತ್ರಿಗಳ “ಕೋವಿಡ್-19 ರಿಲೀಫ್ ಫಂಡ್” ಗೆ ರೂ. 1,00,000 ದೇಣಿಗೆಯನ್ನು “ಸೇರಾ ಜೆ” ಶಾಲೆಯಿಂದ ತಾ.13 ರಂದು ಹಸ್ತಾಂತರಿಸಲಾಗುವುದು.