ಶ್ರೀಮಂಗಲ, ಏ. 9: ದಕ್ಷಿಣ ಕೊಡಗಿನಲ್ಲಿ ಎರಡು ದಿನಗಳ ಹಿಂದೆಯಷ್ಟೆ ಹುಲಿ ಧಾಳಿಗೆ ಜಾನುವಾರುಗಳು ಬಲಿಯಾಗಿದ್ದು, ಇದೀಗ ಮತ್ತೊಮ್ಮೆ ಹುಲಿಯಿಂದ ಜಾನುವಾರುಗಳ ಮೇಲೆ ಧಾಳಿ ಮುಂದುವರೆದಿದೆ. ಬುಧವಾರ ರಾತ್ರಿ ಬೀರುಗ ಗ್ರಾಮದಲ್ಲಿ ರೈತರೋರ್ವರ ಗಬ್ಬದ ಹಸುವನ್ನು ಕೊಂದಿದೆ.

ಶ್ರೀಮಂಗಲ ಗಾ.ಪಂ. ವ್ಯಾಪ್ತಿಯ ಬೀರುಗ ಗ್ರಾಮದ ಅಜ್ಜಮಾಡ ಕಿಟ್ಟು ಉತ್ತಪ್ಪ ಅವರ ಗಬ್ಬದ ಹಸುವನ್ನು ಕೊಂದು ಹಾಕಿದ್ದು, ಸುಮಾರು 40 ಸಾವಿರ ಬೆಲೆ ಬಾಳುವ ಮಿಶ್ರ ತಳಿಯ ಹಸುವನ್ನು ಕೊಂದು ಪಕ್ಕದ ಕಟ್ಟೆರ ಮೇದಪ್ಪ ಅವರ ತೋಟಕ್ಕೆ ಎಳೆದುದೊಯ್ದು ಭಾಗಶಃ ತಿಂದಿದೆ.

ಸ್ಥಳಕ್ಕೆ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ಮರಿ ಬಸಣ್ಣವರ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಶ್ರೀಮಂಗಲ ಪಶುವೈದ್ಯಾಧಿಕಾರಿ ಡಾ.ಬಿ.ಜಿ. ಗಿರೀಶ್ ಹಸುವಿನ ಮರಣೋತ್ತರ ಪರೀಕ್ಷೆ ನಡೆಸಿದರು.