ಕರಿಕೆ, ಮಾ. 21: ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಆರು ಕೊರೊನಾ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳದಿಂದ ಕೊಡಗಿಗೆ ಹಾಗೂ ಕೊಡಗಿನಿಂದ ಕೇರಳ ಮುಖಾಂತರ ಕಾಸರಗೋಡು ಜಿಲ್ಲೆಗೆ ಎಲ್ಲಾ ವಾಹನ ಸಂಚಾರವನ್ನು ನಿರ್ಬಂಧಿಸಿ ಕೊಡಗು ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವು ದರಿಂದ ಗಡಿ ಭಾಗದ ಚೆಕ್ ಪೋಸ್ಟ್‍ನಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ವಾಹನಗಳನ್ನು ತಡೆದು ಮರಳಿ ಕೇರಳದತ್ತ ಕಳುಹಿಸಿದರು.

ಕೆಲವು ತುರ್ತು ಅಗತ್ಯತೆಗಳನ್ನು ಹೊರತು ಪಡೆಸಿ ಪದೇ ಪದೇ ಸಾರ್ವಜನಿಕರನ್ನು ಕರೆದೊಯ್ಯುವ ವಾಹನಗಳಿಗೆ ನಿರ್ಬಂಧ ಹೇರಲಾಯಿತು. ಗಡಿ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದ ಎರಡು ಬಾರ್ ಹಾಗೂ ಎರಡು ಮದ್ಯದಂಗಡಿಯನ್ನು ಬಂದ್ ಮಾಡಿದ್ದರಿಂದ ಮದ್ಯಪ್ರಿಯರು ಅಂಗಡಿ ಎದುರು ಅಲೆದಾಡುತ್ತಿದ್ದ ದೃಶ್ಯ ಗೋಚರಿಸಿತು.

ತಹಶೀಲ್ದಾರ್ ಭೇಟಿ: ಮಡಿಕೇರಿ ತಹಶೀಲ್ದಾರ್ ಮಹೇಶ್ ಇಂದು ಭೇಟಿ ನೀಡಿ ಚೆಕ್ ಪೋಸ್ಟ್‍ನಲ್ಲಿ ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು. -ಹೊದ್ದೆಟ್ಟಿ ಸುಧೀರ್