ವೀರಾಜಪೇಟೆ: ಮಾ.13: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದ ವಿನಾಯಕನಗರದ ವೇಗಾನಂದ (ಯೋಗೀಶ್-38) ಎಂಬಾತನನ್ನು ಪತ್ನಿ ಸುಫಾರಿ ನೀಡಿ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‍ಐಆರ್‍ನಲ್ಲಿ ನಮೂದಿಸಿ, ಆರೋಪ ಪಟ್ಟಿಯಲ್ಲಿ ತನಿಖಾಧಿಕಾರಿ ತೋರಿಸಿದ್ದ ಮೂವರು ಮಂದಿ ಆರೋಪಿಗಳ ಆರೋಪ ವಿಚಾರಣೆಯಲ್ಲಿ ಸಾಬೀತಾಗಿದ್ದರಿಂದ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ.ರಮಾ ಶಿಕ್ಷೆಯ ಪ್ರಮಾಣದ ತೀರ್ಪನ್ನು ತಾ.16ಕ್ಕೆ ಕಾಯ್ದಿರಿಸಿದ್ದಾರೆ. ಮಗ್ಗುಲ ಗ್ರಾಮದ ವೇಗಾನಂದ ಅವರ ಪತ್ನಿ ಶಶಿಕಲಾ (30) ಹಾಗೂ ಕೆದಮುಳ್ಳೂರು ಗ್ರಾಮದ ಗೋಪಾಲಕೃಷ್ಣ (36) ಅವರ ನಡುವಿನ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ತಾ:4-11-2012ರಂದು ಶಶಿಕಲಾ ಗೋಪಾಲಕೃಷ್ಣನಿಗೆ ವೇಗಾನಂದನನ್ನು ಕೊಲೆ ಮಾಡಿದರೆ ನಾವಿಬ್ಬರು ಜೊತೆಯಲ್ಲಿರಬಹುದೆಂದು ಭಾವಿಸಿ ಆತನನ್ನು (ಮೊದಲ ಪುಟದಿಂದ) ಕೊಲೆ ಮಾಡಲು ಗೋಪಾಲಕೃಷ್ಣನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಳು. ಗೋಪಾಲಕೃಷ್ಣ ಮಧ್ಯ ರಾತ್ರಿ ದೇವಣಗೇರಿಯ ಖಾಲಿ ಜಾಗದಲ್ಲಿದ್ದ ಶೆಡ್‍ನಲ್ಲಿ ಕತ್ತಿಯಿಂದ ಬರ್ಬರವಾಗಿ ಕತ್ತರಿಸಿ ರುಂಡ ಮುಂಡವನ್ನು ಬೇರ್ಪಡಿಸಿ ಗೋಣಿ ಚೀಲದಲ್ಲಿ ಕಟ್ಟಿದ್ದ ಮುಂಡವನ್ನು ಶ್ರೀರಂಗಪಟ್ಟಣದ ನಾಲೆಗೆ ಎಸೆದಿದ್ದ. ನಂತರ ಗೋಣಿ ಚೀಲದಲ್ಲಿ ಕಟ್ಟಿದ್ದ ರುಂಡವನ್ನು ಹುಣಸೂರಿನ ಲಕ್ಷ್ಮಣ ತೀರ್ಥ ನದಿಗೆ ಎಸೆದಿದ್ದ. ಎರಡು ದಿನಗಳ ನಂತರ ಮುಂಡವಿದ್ದ ಗೋಣಿಚೀಲ ನಾಲೆಯಲ್ಲಿ ತೇಲುತ್ತಿದ್ದುದನ್ನು ಕಂಡ ಗ್ರಾಮಸ್ತರು ಶ್ರೀರಂಗಪಟ್ಟಣದ ಪೊಲೀಸ್ ಠಾಣೆಗೆ ಸುಳಿವು ನೀಡಿದ ಮೇರೆ ಪೊಲೀಸರು ತನಿಖೆ ನಡೆಸಿ ನಾಪತ್ತೆಯಾಗಿದ್ದ ವೇಗಾನಂದನ ಮೃತದೇಹವೆಂದು ಗುರುತಿಸಿದ್ದರು.ಶಶಿಕಲಾ, ಪತಿ ವೇಗಾನಂದನ ಕೊಲೆಯನ್ನು ಮರೆಮಾಚಲು ತಾ:9-11-12 ರಂದು ವೀರಾಜಪೇಟೆ ನಗರ ಪೊಲೀಸ್ ಠಾಣೆಗೆ ಪತಿ ನಾಪತ್ತೆಯಾಗಿದ್ದಾನೆಂದು ದೂರು ನೀಡಿದ್ದಳು. ಶ್ರೀರಂಗಪಟ್ಟಣದ ನಾಲೆಯಲ್ಲಿ ದೊರೆತ ಮೃತದೇಹ ಹಾಗೂ ಶಶಿಕಲಾ ನೀಡಿದ ದೂರಿನ ತಾಳೆ ನೋಡಿದಾಗ ಇದು ವೇಗಾನಂದನ ಮೃತದೇಹವೆಂದು ದೃಢಪಟ್ಟ ನಂತರ ಮೊದಲು ಶ್ರೀರಂಗಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿದರು ಅನಂತರ ಮುಂದಿನ ಕ್ರಮ ಹಾಗೂ ತನಿಖೆಗಾಗಿ ವೀರಾಜಪೇಟೆ ನಗರ ಪೊಲೀಸರಿಗೆ ಪ್ರಕರಣವನ್ನು ಹಸ್ತಾಂತರಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಆಗಿನ ವೃತ್ತ ನಿರೀಕ್ಷಕರು ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿ ಕೊಲೆ ಪ್ರಕರಣದ ಆರೋಪದಡಿಯಲ್ಲಿ ವೇಗಾನಂದನ ಪತ್ನಿ ಶಶಿಕಲಾ, ಗೋಪಾಲಕೃಷ್ಣ. ಹಾಗೂ ಕೊಲೆಗೆ ಸಹಕರಿಸಿದ ಇಲ್ಲಿನ ಚಿನ್ನ ಬೆಳ್ಳಿ ಕೆಲಸಗಾರ ಮಧುಸೂದನ್ (28) ಈ ಮೂವರನ್ನು ಬಂಧಿಸಿದ್ದರು. ಈ ಮೂವರು ಕೆಲವು ತಿಂಗಳುಗಳ ಹಿಂದೆ ಜಾಮೀನಿನ ಮೇರೆ ಹೊರ ಬಂದಿದ್ದರು. ಪ್ರಕರಣದ ತನಿಖೆಯ ಸಮಯದಲ್ಲಿ ಹುಣಸೂರಿನ ¯ಕ್ಷ್ಮಣ ತೀರ್ಥ ನದಿಗೆ ಎಸೆದ ರುಂಡದ ಚೀಲ ಎಷ್ಟೇ ಹುಡುಕಾಡಿದರೂ ದೊರೆಯಲಿಲ್ಲವೆನ್ನಲಾಗಿದೆ.

ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೆಷನ್ಸ್ ನ್ಯಾಯಾಲಯದ ಮುಂದೆ ನಿನ್ನೆ ದಿನ ಹಾಜರಾದ ಮೂವರು ಆರೋಪಿಗಳನ್ನು ಶಿಕ್ಷೆಯ ಪ್ರಮಾಣ ಪ್ರಕಟಿಸುವವರೆಗೂ ಬಂಧನದಲ್ಲಿಡುವಂತೆ ಪೊಲೀಸರಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಕೊಲೆಯಾದ ವೇಗಾನಂದನಿಗೆ ಮಕ್ಕಳಿದ್ದು ಮಗ್ಗುಲ ಗ್ರಾಮದಲ್ಲಿ ಗದ್ದೆ ಮನೆ ಇದ್ದರೂ ಕಾಫಿ ಖರೀದಿ ಶೇಖರಣಾ ಕೇಂದ್ರದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದನು. ಆರೋಪಿ ಗೋಪಾಲಕೃಷ್ಣ ಮದುವೆಯಾಗಿದ್ದು ಮಡದಿ ಮಕ್ಕಳೊಂದಿಗೆ ಕೆದಮುಳ್ಳೂರು ಗ್ರಾಮದಲ್ಲಿ ವಾಸಿಸುತ್ತಿದ್ದ. ಈತನಿಗೂ ಗ್ರಾಮದಲ್ಲಿ ಗದ್ದೆ ಖಾಲಿ ಜಾಗವಿದ್ದು ಮನೆಯೂ ಇತ್ತೆಂದು ತನಿಖೆಯಿಂದ ಗೊತ್ತಾಗಿದೆ.ಈತ ಕೊಲೆಗೂ ಮುನ್ನ ಕೆಲವು ವರ್ಷಗಳಿಂದ ಆಟೋ ರಿಕ್ಷಾ ಚಾಲಕನಾಗಿದ್ದನೆಂದೂ ಹೇಳಲಾಗಿದೆ.