ಹೆಬ್ಬಾಲೆ, ಮಾ. 9: ಸಮೀಪದ ಶಿರಂಗಾಲ ಗ್ರಾಮದ ಕಾವೇರಿ ನದಿ ದಂಡೆಯ ಮೇಲೆ ನೆಲೆ ನಿಂತಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಸೋಮವಾರ ವಿಜೃಂಭಣೆಯೊಂದಿಗೆ ಶ್ರದ್ಧಾಭಕ್ತಿ ಯಿಂದ ನಡೆಯಿತು.

ಶ್ರೀ ಮಂಟಿಗಮ್ಮ ಹಾಗೂ ಉಮಾಮಹೇಶ್ವರ ಪ್ರಸನ್ನ ದೇವಾಲಯ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಮಸ್ಥರ ಸಹಕಾರದೊಂದಿಗೆ ವಾರ್ಷಿಕ ರಥೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಅರ್ಚಕ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು. ರಥೋತ್ಸವದ ಅಂಗವಾಗಿ ಉಮಾಮಹೇಶ್ವರ ವಿಗ್ರಹವನ್ನು ವಿವಿಧ ಪುಷ್ಪಗಳಿಂದ ಶೃಂಗರಿಸಲಾಗಿತ್ತು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮವನ್ನು ಹಸಿರು ತಳಿರು ತೋರಣಗಳಿಂದ ಶೃಂಗಾರಿಸಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ರಥದಲ್ಲಿ ಶ್ರೀ ಉಮಾಮಹೇಶ್ವರ, ಪಾರ್ವತಿ, ಗಣೇಶ, ನಂದಿ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.

ನಂತರ ಮಹಾ ಮಂಗಳಾರತಿ ಯೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥವನ್ನು ದೇವಾಲಯ ಬಳಿಯಿಂದ ಗ್ರಾಮದ ಪ್ರಮುಖ ಬೀದಿ ಮೂಲಕ ಸಂತೆಮಾಳದವರೆಗೂ ಎಳೆದರು. ರಥೋತ್ಸವದ ಮೆರವಣಿಗೆಯಲ್ಲಿ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು. ಮೆರವಣಿಗೆ ಸಂದರ್ಭ ಗ್ರಾಮಸ್ಥರು ಮಜ್ಜಿಗೆ,ಪಾನಕ ವಿತರಿಸಿದರು.

ಕಲಾವಿದ ಉದ್ದೂರು ಹೊಸಳ್ಳಿಯ ರವಿ ತಂಡದವರ ವೀರಗಾಸೆ ಕುಣಿತ ಮತ್ತು ಮಂಗಳವಾದ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಡಿಕೇರಿ ಇವರ ಪ್ರಯೋಜಕತ್ವದಲ್ಲಿ ಪೂಜಾ ಕುಣಿತ, ಡೊಳ್ಳು, ಕಂಸಾಳೆಯ ಕಲಾತಂಡಗಳ ಕಲಾ ಪ್ರದರ್ಶನ ಮೆರಗು ನೀಡಿತು.

ದೇವಾಲಯ ಸಮಿತಿ ಅಧ್ಯಕ್ಷ ರುದ್ರಪ್ಪ ಹಾಗೂ ಕಾರ್ಯದರ್ಶಿ ಎಸ್.ಎಸ್.ಮಹೇಶ್ ನೇತೃತ್ವದಲ್ಲಿ ವಿವಿಧ ಪೂಜಾಕೈಂಕರ್ಯಗಳು ಜರುಗಿದವು.

ಗ್ರಾಮದ ಕಾವೇರಿ ನದಿಯ ದಂಡೆಯಲ್ಲಿರುವ ಈ ದೇವಸ್ಥಾನವು ಚೋಳರ ಕಾಲದಲ್ಲಿ ನಿರ್ಮಾಣ ಗೊಂಡಿದ್ದು, ಪ್ರತಿ ಶಿವರಾತ್ರಿಯಂದು ವಿಶೇಷ ಪೂಜಾ ಕಾರ್ಯ ನಡೆಯುವುದರೊಂದಿಗೆ ಆ ದಿನದಂದು ಸೂರ್ಯೋದಯದ ಸೂರ್ಯನ ಕಿರಣಗಳು ನೇರವಾಗಿ ಉಮಾಮಹೇಶ್ವರ ದೇವಸ್ಥಾನದ ವಿಗ್ರಹದ ಮೇಲೆ ಬೀಳುತ್ತವೆ.ಇದು ಈ ದೇವಾಲಯದ ವೈಶಿಷ್ಟ್ಯವಾಗಿದೆ.

ಕಳೆದ ಮೂರುನಾಲ್ಕು ವರ್ಷಗಳ ಹಿಂದೆ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಮತ್ತು ಕರ್ನಾಟಕ ಸರ್ಕಾರ ಪ್ರಾಚ್ಯ ವಸ್ತು ಇಲಾಖೆ ಹಾಗೂ ಗ್ರಾಮದ ದೇವತಾ ಸಮಿತಿಯ ಆರ್ಥಿಕ ನೆರವಿನಿಂದ ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ಉಮಾಮಹೇಶ್ವರ ದೇವಸ್ಥಾನವನ್ನು ನವೀಕರಣಗೊಳಿಸಲಾಗಿದೆ ಎಂದು ಸಮಿತಿ ಕಾರ್ಯದರ್ಶಿ ಎಸ್.ಎಸ್. ಮಹೇಶ್ ತಿಳಿಸಿದರು.

ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಎಸ್.ವಿ. ನಂಜುಂಡಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಸಮಿತಿ ಉಪಾಧ್ಯಕ್ಷ ರಮೇಶ್, ಮಾಜಿ ಕಾರ್ಯದರ್ಶಿ ಸಿ.ಎನ್. ಲೋಕೇಶ್, ಮುಖಂಡರಾದ ಎಸ್.ವಿ. ಧರಣೇಂದ್ರ ಕುಮಾರ್, ಎಸ್.ಟಿ. ಅಶ್ವತ್ಥ ಕುಮಾರ್, ಬಿ.ಎಸ್. ಬಸವಣ್ಣ, ಎಸ್.ಪಿ. ರಾಜು, ಎಸ್.ಎಸ್. ಶ್ರೀನಿವಾಸ್, ಎಸ್.ಆರ್. ಕಾಳಿಂಗಪ್ಪ, ಎಸ್.ಬಿ. ಸೋಮಶೇಖರ್, ಎಸ್.ಸಿ. ರಾಜು, ಎಸ್. ಎ. ಯೋಗೇಶ್, ಎಸ್.ಕೆ. ಪ್ರಸನ್ನ, ಎಸ್.ಕೆ. ರಾಜು, ಎಸ್.ಸಿ. ನೇಮೇಶ್ ಹಾಜರಿದ್ದರು. ದಾನಿಗಳಾದ ಡಿ.ಆರ್. ಚಂದ್ರಿಕಾ ಕೃಷ್ಣಶೆಟ್ಟಿ ಅವರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಿದರು.