ಮಡಿಕೇರಿ, ಮಾ. 5: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ.ತಾ. 9.4.2019 ರಂದು ಚೇರಂಬಾಣೆಯಲ್ಲಿ ಪಿ. ಜೀವನ್ ಎಂಬವರ ಲೈನ್‍ಮನೆಯಲ್ಲಿ ವಾಸವಾಗಿದ್ದ ರಾಜು ಎಂಬವರ ಮನೆಗೆ ಆಗಮಿಸಿದ್ದ ಅವರ ತಂಗಿ ಮಗ ಸುರೇಶ್ ಎಂಬಾತ ರಾಜು ಅವರ ಪತ್ನಿ ಹಾಗೂ ಮಗನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ರಾಜುವನ್ನು ಕೊಲೆಗೈದಿದ್ದ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊಲೆಗೈದ ಕೃತ್ಯವಲ್ಲದೆ ರಾಜು ಅವರ ಪತ್ನಿ ಹಾಗೂ ಮಗನಿಗೂ ಬೆದರಿಕೆಯೊಡ್ಡಿದ್ದ ಕುರಿತು ದೂರು ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ಸುರೇಶ್‍ನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಕೊಲೆ ಆರೋಪಕ್ಕೆ ಜೀವಾವಧಿ ಶಿಕ್ಷೆ ಹಾಗೂ ಬೆದರಿಕೆ ಆರೋಪಕ್ಕೂ ಸಜೆ ಹಾಗೂ ರೂ. 25 ಸಾವಿರ ದಂಡವನ್ನು ವಿಧಿಸಿ ನ್ಯಾಯಾಧೀಶರಾದ ವಿವಿ. ಮಲ್ಲಾಪುರ ಅವರು ಆದೇಶಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಪ್ರಭಾರ ಸರಕಾರಿ ಅಭಿಯೋಜಕರಾದ ಎಂ. ಕೃಷ್ಣವೇಣಿ ಅವರು ನಡೆಸಿದ್ದು, ಪ್ರಭಾರ ಸರಕಾರಿ ಅಭಿಯೋಜಕ ಡಿ. ನಾರಾಯಣ ವಾದ ಮಂಡಿಸಿದ್ದರು.