ಗುಡ್ಡೆಹೊಸೂರು, ಮಾ. 5: ಇಲ್ಲಿಗೆ ಸಮೀಪದ ಆನೆಕಾಡು ಬಳಿ ಕಾರು (ಕೆ.ಎ.12 0234) ರಸ್ತೆ ಬದಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ನೆಟ್ಟಿದ್ದ ಕಲ್ಲುಗಳಿಗೆ ಡಿಕ್ಕಿಯಾಗಿ ಅರಣ್ಯದಂಚಿನ ಚರಂಡಿಗೆ ಉರುಳಿಬಿದ್ದಿದ್ದು ಕಾರು ಸಂಪೂರ್ಣ ಜಖಂ ಗೊಂಡಿರುವ ಘಟನೆ ನಡೆದಿದೆ.

ಚಾಲಕ ಮಹಮ್ಮದ್ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲ್ಪಟ್ಟಿದ್ದಾರೆ. ರಸ್ತೆಬದಿಯ 6 ಕಲ್ಲಿನ ಕಂಬಗಳು ತುಂಡಾಗಿ ಕಾರು ಪಲ್ಟಿಯಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಮಹಮ್ಮದ್ ಅವರ ಪುತ್ರ ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ.

ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಮ್ಮದ್ ಅವರ ಒಂದು ಕಾಲು ಮುರಿದಿದ್ದು, ತಲೆ ಹಾಗೂ ಕುತ್ತಿಗೆ ಭಾಗಕ್ಕೆ ತೀವ್ರ ರೀತಿಯ ಪೆಟ್ಟಾಗಿದೆ.