ವೀರಾಜಪೇಟೆ, ಮಾ. 1: ವೀರಾಜಪೇಟೆ ಪಟ್ಟಣದಲ್ಲಿ ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತಿದ್ದ ಅಮ್ಮತ್ತಿಯ ಮುಕ್ಕಾಟಿಕೊಪ್ಪದ ಮನು, ಪೊನ್ನಂಪೇಟೆ ಬಳಿಯ ಬೆಳ್ಳೂರು ಗ್ರಾಮದ ಎಂ.ಆರ್. ಸತೀಶ್, ಅಮ್ಮತ್ತಿಯ ಎಂ.ಆರ್. ಗಣೇಶ್, ಮಾಲ್ದಾರೆ ಗ್ರಾಮದ ಎ.ಎಂ. ಪೂಣಚ್ಚ, ವಿ.ಆರ್. ಹರೀಶ್ ಹಾಗೂ ಹುಣಸೂರಿನ ಧರ್ಮಪುರಿಯ ಚಂದ್ರು ಎಂಬ ಆರು ಮಂದಿಗೆ ಇಲ್ಲಿನ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಲಯದ ನ್ಯಾಯಾಧೀಶರು ದಂಡ ವಿಧಿಸಿದ್ದಾರೆ.

ವಿ.ಆರ್.ಹರೀಶ್ ಎಂಬವರಿಗೆ ರೂ.10,200, ಹುಣಸೂರು ಧರ್ಮಪುರಿಯ ಚಂದ್ರು ಎಂಬಾತನಿಗೆ ರೂ. 10,500 ದಂಡ ವಿಧಿಸಿದರೆ ಉಳಿದ ನಾಲ್ಕು ಮಂದಿಗೆ ತಲಾ ರೂ.10,000 ದಂಡ ವಿಧಿಸಿದ್ದಾರೆ.

ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಸಬ್‍ಇನ್ಸ್ ಪೆಕ್ಟರ್ ಮರಿಸ್ವಾಮಿ ಹಾಗೂ ಸಿಬ್ಬಂದಿ ವೀರಾಜಪೇಟೆ ಪಟ್ಟಣದಲ್ಲಿ ಇತ್ತೀಚೆಗೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಆರು ಮಂದಿ ಚಾಲಕರನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದರು.