ವೀರಾಜಪೇಟೆ, ಫೆ. 20: ಸರ್ಕಾರಿ ಶಾಲೆಗಳ ಕೀಳರಿಮೆ ಸಲ್ಲದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಅಪ್ಪಂಡೇರಂಡ ಭವ್ಯ ಹೇಳಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ಶಾಲಾಭಿವೃದ್ಧಿ ಸಮಿತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಬಿ. ಶೆಟ್ಟಿಗೇರಿ ಆಶ್ರಯದಲ್ಲಿ ಇಕೋ ಕ್ಲಬ್ ಹಾಗೂ ಕಲೋತ್ಸವ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಯನ್ನು ಕಡೆಗಣನೆ ಮಾಡಬಾರದು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೆಳಗಿ ಅವರು ಶಿಥಿಲಗೊಂಡ ಶಾಲಾ ಕಟ್ಟಡಕ್ಕೆ ಕಾಯಕಲ್ಪ ನೀಡಲು ದಾನಿಗಳು, ಜನಪ್ರತಿನಿಧಿಗಳು ಮುಂದಾಗಬೇಕು ಅದರೊಂದಿಗೆ ಇಲಾಖೆಯು ಸಹಕರಿಸುತ್ತದೆ ಎಂದು ಹೇಳಿದರು.

ಶಾಲಾಭಿವೃದ್ಧಿ ಸಮಿತಿ ಮತ್ತು ಸಲಹಾ ಸಮಿತಿಯ ಸದಸ್ಯ ತೀತಿಮಾಡ ಲಾಲಾ ಭೀಮಯ್ಯ ಅವರು ತಮ್ಮ ಪ್ರಸ್ತಾವಿಕ ನುಡಿಯಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಕೆ.ಸಿ. ನಳಿನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭವನ್ನು ಉದ್ದೇಶಿಸಿ ಕ್ಷೇತ್ರ ಸಮನ್ವಯ ಸಂಪನ್ಮೂಲ ಅಧಿಕಾರಿ ವನಜಾಕ್ಷಿ ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಹೆಚ್.ವೈ. ಸರಸು ಶಾಲೆಯ ವಾರ್ಷಿಕ ವರದಿಯನ್ನು ವಾಚಿಸಿದರು.

ಸಮಾರಂಭದ ವೇದಿಕೆಯಲ್ಲಿ ಪ್ರಸ್ತುತ ಶಾಲೆಯಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿದ ನಿವೃತ್ತ ಶಿಕ್ಷಕರಾದ ಬಲ್ಲಡಿಚಂಡ ಗಣಪತಿ, ಕಡೇಮಾಡ ಕಾರ್ಯಪ್ಪ, ಕಡೇಮಾಡ ಅಕ್ಕಮ್ಮ, ಅಣ್ಣೀರ ಭರತ್, ಕಡೇಮಾಡ ಜಿ. ಜಾಜಿ, ತಟ್ಟಂಡ ಪ್ರೇಮಾವತಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತರಾದ ಪೆಮ್ಮಂಡ ಮಾಯಮ್ಮ ಮತ್ತು ಸ್ಥಾಳ ದಾನಿಗಳಾದ ಚೊಟ್ಟೆಪಂಡ ಗಣಪತಿ ಮತ್ತು ನಾಮೇರ ಗಣಪತಿ ಅವರನ್ನು ಶಾಲಾಭಿವೃದ್ಧಿ ಸಮಿತಿ ಮತ್ತು ಹಿರಿಯ ವಿದ್ಯಾರ್ಥಿಗಳ ಸಂಘ ಸನ್ಮಾನಿಸಿತು.

ವಿದ್ಯಾರ್ಥಿಗಳಿಗೆ, ಸಾರ್ವಜನಿಕ ರಿಗೆ ಮತ್ತು ಶಿಕ್ಷಕರಿಗೆ ವಿವಿಧ ಬಗೆಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ರಾಜ್ಯ ಪ್ರಶಸ್ತಿ ವಿಜೇತರಾದ ಕುಡಿಯರ ಶಾರದ ಮತ್ತು ತಂಡದವರಿಂದ ಉರುಟಿಕೊಟ್ಟ್ ಆಟ್ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ರಾಜು. ವೈ.ಎಂ. ಶ್ರೀನಾರಾಯಣ ಆಶ್ರಮದ ಪರಮಾನಂದ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎಂ. ಸುನೀತ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾಂಜಲಿ, ಕಲ್ತೋಡು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವಿ.ಟಿ. ವೆಂಕಟೇಶ್, ಶಾಲಾಭಿವೃದ್ಧಿ ಸಮಿತಿ ಮತ್ತು ಸಲಹಾ ಸಮಿತಿ ಸದಸ್ಯರಾದ ನಾಮೇರ ದಾದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಮೇರ ದೀಪಕ್ ದೇವಯ್ಯ ಉಪಸ್ಥಿತರಿದ್ದರು. ಶಾಲೆಯ ಸಹಶಿಕ್ಷಕಿ ಸುಜ್ಯೋತಿ ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಸಲಹಾ ಸಮಿತಿಯ ಸದಸ್ಯ ನಾಳಿಯಮಂಡ ಉಮೇಶ್ ಕೇಚಮಯ್ಯ ನಿರೂಪಿಸಿ, ಸಹ ಶಿಕ್ಷಕಿ ಭಾವನಿ ವಂದಿಸಿದರು.