ಮಡಿಕೇರಿ, ಡಿ.31 : ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಮಟ್ಟದ ಅಂತರ ಶಾಲಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಹಾಗೂ ಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಪಂದ್ಯಾವಳಿ ತಾ.3 ರಿಂದ 5ರವರೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಸೋಸಿಯೇಷನ್ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಅವರು, ತಾ.3 ರಂದು ಜಿಲ್ಲೆಯ ಎಲ್ಲಾ ಸಿಬಿಎಸ್ಇ, ಐಸಿಎಸ್ಇ, ಸರಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ತಾ.4ಮತ್ತು 5ರಂದು ಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಪಂದ್ಯಾವಳಿ ಜರುಗಲಿದೆ. ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದ್ದು, ಆಸಕ್ತ ಶಾಲಾ ಮುಖ್ಯಸ್ಥರು, ಆಡಳಿತ ಮಂಡಳಿಯವರು ತಮ್ಮ ಶಾಲೆಗಳ ಆಸಕ್ತ ವಿದ್ಯಾರ್ಥಿಗಳು ಪಾಲ್ಗೊಳ್ಳು ವಂತೆ ಪ್ರೋತ್ಸಾಹಿಸ ಬೇಕೆಂದು ಮನವಿ ಮಾಡಿದರು.
10-13, 13-15, 15-17 ವರ್ಷದೊಳಗಿನವರ ಪಂದ್ಯಾಟವನ್ನು ಫೆದರ್ ಷಟಲ್ನಲ್ಲಿ ಮತ್ತು 19 ವರ್ಷದೊಳಗಿನವರ, ಮೇಲ್ಪಟ್ಟ ಮಹಿಳೆಯರ ಮತ್ತು ಪುರುಷರ ಪಂದ್ಯಾವಳಿಯನ್ನು ಮಾವಿಸ್-350 ಷಟಲ್ನಲ್ಲಿ ನಡೆಸಲಾಗುತ್ತಿದೆ. ಶಾಲಾ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ತರುವುದು ಕಡ್ಡಾಯವಾಗಿದೆ, ಚಾಂಪಿಯನ್ಶಿಪ್ನಲ್ಲಿ ವಿಜೇತ ಶಾಲಾ ತಂಡಗಳಿಗೆ ವಕೀಲರಾದ ಚೌರಿರ ಮೇದಪ್ಪ ಅವರ ಹೆಸರಿನಲ್ಲಿ ಅವರ ಪತ್ನಿ ಬೊಳ್ಳು ಮೇದಪ್ಪ ಅವರು ಪ್ರಾಯೋಜಿಸಿರುವ ಪರ್ಯಾಯ ಪಾರಿತೋಷಕವನ್ನು ವಿಜೇತ ಶಾಲೆಗಳಿಗೆ ನೀಡಲಾಗುವುದು. ಜ.3ರ ಪೂರ್ವಾಹ್ನ 10.30ಕ್ಕೆ ಪಂದ್ಯಾವಳಿ ಆರಂಭವಾಗಲಿದ್ದು, ಅಂದು ಸಂಜೆ 5 ಗಂಟೆಗೆ ಅಂತರ ಶಾಲಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ ಬಹುಮಾನವನ್ನು ವಿತರಿಸಲಾಗುವುದು ಎಂದು ಅವರು ನುಡಿದರು.
19 ವರ್ಷ ಮೇಲ್ಪಟ್ಟ ಪುರುಷರ ಮತ್ತು ಮಹಿಳೆಯ ಹಾಗೂ ವಯಸ್ಕರ ಪಂದ್ಯಾವಳಿಗಳು ತಾ.4ಮತ್ತು 5ರಂದು ನಡೆಯಲಿದ್ದು, ಬಾಲಕ, ಬಾಲಕಿಯರಿಗೆ, ಮಹಿಳೆಯರಿಗೆ, ಪುರುಷರಿಗೆ, 40, 50, ಹಾಗೂ 60 ವರ್ಷ ಮೇಲ್ಪಟ್ಟ ಪುರುಷರಿಗೆ ಸಿಂಗಲ್ ಮತ್ತು ಡಬಲ್ಸ್ ಹಾಗೂ ಓಪನ್ (ಮುಕ್ತ) ಮಿಕ್ಸೆಡ್ ಡಬಲ್ಸ್ ಪಂದ್ಯಾವಳಿಯನ್ನು ನಡೆಸಲಾಗುವುದು ಎಂದ ಅವರು, ಭಾಗವಹಿಸುವ ಆಟಗಾರರು ಜ.1ರ ಒಳಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿ ಕೊಳ್ಳುವಂತೆ ಮನವಿ ಮಾಡಿದರು.
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ 8792842853 (ಜ್ಯೋತಿ ಸೋಮಯ್ಯ), 6364229203 (ಅರುಣ್ ಪೆಮ್ಮಯ್ಯ) ಹಾಗೂ 7795956868 (ವಿನೋದ್ ಉತ್ತಪ್ಪ) ಅವರುಗಳನ್ನು ಸಂಪರ್ಕಿಸಬಹುದು ಎಂದು ಡಾ. ಮೋಹನ್ ಅಪ್ಪಾಜಿ ತಿಳಿಸಿದರು.
ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಹಯೋಗದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿ ಯನ್ನು ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ 2016ರಿಂದ ಆರಂಭಿಸಿದ್ದು, ಕಳೆದ ಸಾಲಿನಲ್ಲಿ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಪಂದ್ಯಾವಳಿಯನ್ನು ಕೈಬಿಡಲಾಗಿತ್ತು. ಜಿಲ್ಲೆಯಲ್ಲಿ ಆರ್ಥಿಕ ಮುಗ್ಗಟ್ಟಿನ ನಡುವೆಯೂ ಈ ಬಾರಿ ಪಂದ್ಯಾವಳಿ ಯನ್ನು ದಾನಿಗಳ ನೆರವಿನಿಂದ ಆಯೋಜಿಸಲಾಗುತ್ತಿದ್ದು, ವಿದೇಶದಲ್ಲಿ ರುವ ಕ್ರೀಡಾಭಿಮಾನಿಗಳೂ ಈ ಬಾರಿ ನೆರವು ನೀಡಲು ಮುಂದೆ ಬಂದಿದ್ದಾರೆ ಎಂದು ಮೋಹನ್ ಅಪ್ಪಾಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಜೀವನ್, ಕಾರ್ಯದರ್ಶಿ ಡಾ. ಎಂ.ಎ. ದೇವಯ್ಯ, ನಿರ್ದೇಶಕರಾದ ಶಮ್ಮಿ ಸುಬ್ಬಯ್ಯ, ಮಂಡೀರ ಹೇಮಾ ಹಾಗೂ ಜ್ಯೋತಿ ಸೋಮಯ್ಯ ಉಪಸ್ಥಿತರಿದ್ದರು.