ಸೋಮವಾರಪೇಟೆ, ಡಿ.30: ದೇಶದ ಹಾಕಿ ಕ್ಷೇತ್ರಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ಸೋಮವಾರಪೇಟೆಯಲ್ಲಿ ಸುಸಜ್ಜಿತ ಟರ್ಫ್ ಮೈದಾನದ ಕನಸು ಇಂದಿಗೂ ನನಸಾಗಿಲ್ಲ. ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಟರ್ಫ್ ಕಾಮಗಾರಿಗೆ ಭೂಮಿಪೂಜೆ ನಡೆದು 6 ವರ್ಷಗಳೇ ಉರುಳಿದರೂ ಮೈದಾನ ಮಾತ್ರ ಮೇಲೆದ್ದಿಲ್ಲ.ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ರೂ. 3.40 ಕೋಟಿ ಅನುದಾನದಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. 2019ರ ಮಾರ್ಚ್ 14 ಕ್ಕೆ ಬರೋಬ್ಬರಿ ಆರು ವರ್ಷ ಪೂರ್ಣಗೊಂಡಿದ್ದು, ಏಳನೇ ವರ್ಷಕ್ಕೆ ದಾಪುಗಾಲಿಟ್ಟಿದೆ! ಈ ಹಿಂದೆ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖಾ ಸಚಿವರಾಗಿದ್ದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ವಿಶೇಷ ಆಸಕ್ತಿಯಡಿ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಸೋಮವಾರಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಾಣಕ್ಕೆಂದು ರೂ. 3.40 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು.
ಕಳೆದ ತಾ. 14.03.2013ರಂದು ಅಂದಿನ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಬಲದೇವಕೃಷ್ಣ ಅವರ (ಮೊದಲ ಪುಟದಿಂದ) ಉಪಸ್ಥಿತಿಯಲಿ,್ಲ ಜಿಲ್ಲಾ ಪಂಚಾಯತ್ನ ಅಂದಿನ ಅಧ್ಯಕ್ಷ ಬಿ.ಶಿವಪ್ಪ ಅವರು ಜೂನಿಯರ್ ಕಾಲೇಜು ಮೈದಾನದಲ್ಲಿ ಟರ್ಫ್ ನಿರ್ಮಾಣಕ್ಕೆ ಚಾಲನೆ ನೀಡಿದ್ದರು.
ಈ 6 ವರ್ಷದಲ್ಲಿ ಮೈದಾನದ ಒಂದು ಬದಿಯಲ್ಲಿ 80 ಲಕ್ಷ ವೆಚ್ಚದಲ್ಲಿ ತಡೆಗೋಡೆ, ಈ ಹಿಂದೆ ಇದ್ದ ಬಾಸ್ಕೆಟ್ಬಾಲ್ ಮೈದಾನ ಸ್ಥಳಾಂತರ, ಟರ್ಫ್ಗೆ ಉದ್ದೇಶಿಸಿರುವ ಮೈದಾನದ ಸುತ್ತಲೂ ಸಿಮೆಂಟ್ ಚರಂಡಿ ನಿರ್ಮಾಣವಾಗಿದ್ದು ಬಿಟ್ಟರೆ ಉಳಿದಂತೆ ಯಾವದೇ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ವಿಚಾರಿಸಿದರೆ ಗುತ್ತಿಗೆದಾರರಿಗೆ ವರ್ಕ್ ಆರ್ಡರ್ ನೀಡಿಲ್ಲ ಎಂಬ ಮಾತು ಅನೇಕ ವರ್ಷಗಳಿಂದ ಕೇಳಿಬರುತ್ತಿದ್ದು, ಇದೀಗ ಟರ್ಫ್ ಕಾಮಗಾರಿ ಮತ್ತೆ ಪ್ರಾರಂಭವಾಗಿದೆ.
ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ, ಬೆಳಗಾವಿಯ ಅಧಿವೇಶನದಲ್ಲೂ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಸರ್ಕಾರದ ಗಮನ ಸೆಳೆದಿದ್ದು, ಸೋಮವಾರಪೇಟೆಯಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದ ಪ್ರಗತಿ ಬಗ್ಗೆ ಪ್ರಶ್ನಿಸಿದ್ದರು.
ಇದಕ್ಕೆ ಅಂದಿನ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಲಿಖಿತ ಉತ್ತರ ನೀಡಿದ್ದು, ಸೋಮವಾರಪೇಟೆಯಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಅಳವಡಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಈಗಾಗಲೇ ಇರುವ ವಿಸ್ತೀರ್ಣಕ್ಕೆ ಅಗತ್ಯವಿರುವ ಹೆಚ್ಚುವರಿ ವಿಸ್ತೀರ್ಣದ ಜಾಗವನ್ನು ಸೇರ್ಪಡಿಸಿ ಸಿದ್ಧಪಡಿಸಲು ಕಾಲಾವಕಾಶ ತಗುಲಿದ್ದರಿಂದ ಕಾಮಗಾರಿ ಕೈಗೊಳ್ಳಲು ವಿಳಂಬವಾಗಿದೆ. ಪ್ರಸ್ತುತ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಯಶಸ್ವಿ ಬಿಡ್ದಾರರಿಗೆ ದರ ಒಪ್ಪಿಗೆ ಪತ್ರ ನೀಡಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ತಿಳಿಸಿದ್ದರು.
ಈ ಉತ್ತರ ಬಂದ ನಂತರ ಕಾಂಗ್ರೆಸ್ ಸರ್ಕಾರದ ಅವಧಿ ಮುಗಿದು, ಮೈತ್ರಿ ಸರ್ಕಾರದ ಆಡಳಿತವೂ ಕೊನೆಗೊಂಡು, ಇದೀಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈಗಿನ ಸರ್ಕಾರ ಅಧಿಕಾರಕ್ಕೆ ಬಂದು ಹಲವು ತಿಂಗಳುಗಳ ನಂತರ ಇದೀಗ ಸೋಮವಾರಪೇಟೆಯಲ್ಲಿ ಟರ್ಫ್ ಮೈದಾನ ನಿರ್ಮಾಣ ಕಾಮಗಾರಿ ಮತ್ತೆ ಪ್ರಾರಂಭವಾಗಿದೆ.
ಉತ್ತರಪ್ರದೇಶದಿಂದ ಆಗಮಿಸಿರುವ ಕಾರ್ಮಿಕರು ಮೈದಾನದ ಗುಂಡಿಗಳಿಗೆ ಮಣ್ಣು ಹಾಕಿ ಸಮತಟ್ಟುಗೊಳಿಸುವ ಕಾಮಗಾರಿಯಲ್ಲಿ ತೊಡಗಿದ್ದಾರೆ. ಇನ್ನಾದರೂ ಇಲ್ಲಿ ಟರ್ಫ್ ಮೈದಾನ ಆದಷ್ಟು ಶೀಘ್ರವಾಗಿ ನಿರ್ಮಾಣಗೊಂಡು, ಈ ಭಾಗದ ಹಾಕಿ ಪಟುಗಳಿಗೆ ಅನುಕೂಲ ಕಲ್ಪಿಸುವಂತಾಗಲಿ. ಈ 6 ವರ್ಷದಲ್ಲಿ ತೆವಳುತ್ತಾ ಸಾಗಿದ ಕಾಮಗಾರಿ ಈಗಲಾದರೂ ಪೂರ್ಣಗೊಳ್ಳಲಿ ಎಂಬ ಆಶಯ ಕ್ರೀಡಾಪಟುಗಳು ಹಾಗೂ ಕ್ರೀಡಾಪ್ರೇಮಿಗಳದ್ದು! -ವಿಜಯ್ ಹಾನಗಲ್