ಮಡಿಕೇರಿ, ಡಿ.9 : ಕೊಡಗಿನ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆ ವತಿಯಿಂದ ಕೊಡಗಿನ ಸುಗ್ಗಿ ಹಬ್ಬವಾದ ಹುತ್ತರಿಯನ್ನು ತಾ.11ರಂದು ಚಿಕ್ಕಬೆಟ್ಟಗೇರಿಯ ನಂದಿನೆರವಂಡ ಉತ್ತಪ್ಪ ಅವರ ಭತ್ತÀದ ಗದ್ದೆಯಲ್ಲಿ ಸಾರ್ವತ್ರಿಕವಾಗಿ ಆಚರಿಸಲಾಗುವದು ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷೆ ಹಾಗೂ ಸಂಸ್ಕøತಿ ಉಳಿಯಬೇಕಾದರೆ ಆಯಾ ಪ್ರದೇಶದ ಹಬ್ಬ ಹರಿದಿನಗಳನ್ನು ಸಾರ್ವತ್ರಿಕವಾಗಿ ಆಚರಿಸುವಂತಾಗ ಬೇಕು. ಆ ಮೂಲಕ ಜಗತ್ತಿನ ಗಮನಸೆಳೆಯುವಂತಾಗಬೇಕು ಎಂದು ಅಭಿಪ್ರಾಯಿಸಿದರಲ್ಲದೆ, ಅದರಂತೆ ಸಿಎನ್ಸಿ ಸಂಘಟನೆಯು ಕೊಡವ ಬುಡಕಟ್ಟು ಜಗತ್ತಿನ ಸಂಸ್ಕøತಿಯ ಪ್ರಧಾನ ಹಬ್ಬವಾದ ‘ಪುತ್ತರಿ’ಯನ್ನು ಕಳೆದ 26 ವರ್ಷಗಳಿಂದ ಸಾರ್ವತ್ರಿಕವಾಗಿ ಆಚರಿಸುತ್ತಾ ಬಂದಿದ್ದು, ಕೊಡವರ ಉನ್ನತ ಪರಂಪರೆ ಹಾಗೂ ಶ್ರೇಷ್ಠ ಸಂಸ್ಕøತಿಯನ್ನು ಸಾರುವ ಮೂಲಕ ಭೂತಾಯಿಗೂ ಕೊಡವರಿಗೂ ಇರುವ ಅವಿನಾಭಾವ ಸಂಬಂಧವನ್ನು ಜಗತ್ತಿಗೆ ಪರಿಚಯಿಸುತ್ತಿದೆ ಎಂದು ಹೇಳಿದರು.
11 ರಂದು ಪೂರ್ವಾಹ್ನ 10:30 ಗಂಟೆಗೆ ಕುಶಾಲನಗರ ಹೋಬಳಿ ಚಿಕ್ಕಬೆಟ್ಟಗೇರಿ ಗ್ರಾಮದ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಕದಿರು ತೆಗೆಯುವ ಕೈಂಕರ್ಯ ತನ್ನ ಮುಂದಾಳತ್ವದಲ್ಲಿ ನಡೆಯಲಿದೆ. ಇದಕ್ಕೂ ಮೊದಲು ನೆಲ್ಲಕ್ಕಿಯಡಿಯಲ್ಲಿ ಗುರುಕಾರೋಣರು ಮತ್ತು ದೇವಾನುದೇವತೆಗಳಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿ ಅರಳಿ, ಮಾವು, ಹಲಸು, ಕುಂಬಳಿ ಮತ್ತು ಗೇರು ಮರಗಳ ಎಲೆಗಳಿಂದ ನೆರೆಕಟ್ಟುವ ವಿಧಿ ಮುಗಿಸಿ, ಕುತ್ತಿ, ತೋಕ್-ಕತ್ತಿ, ದುಡಿಕೊಟ್ಟ್ಪಾಟ್, ತಳಿಯತಕ್ಕಿಯೊಂದಿಗೆ ಮೆರವಣಿಗೆ ಯಲ್ಲಿ ಭತ್ತದ ಗದ್ದೆಗೆ ತೆರಳಲಾಗುವದು. ಗದ್ದೆಯಲ್ಲಿ ಕದಿರು ತೆಗೆದು ಹಿಂದಿರುಗಿ ಬಂದು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಾದ ವಾಲಗತಾಟ್, ಪರಿಯಕಳಿ ಮತ್ತು ಬೊಳಕಾಟ್ ನಡೆಸಿ ತದನಂತರ ಗುರುಕಾರೋಣ- ದೇವಾನುದೇವತೆಗಳಿಗೆ ನೈವೇದ್ಯ ಅರ್ಪಿಸಿ ಕೊಡವ ಸಾಂಪ್ರಾದಾಯಿಕ ಭೋಜನ ಸವಿಯುವ ಮೂಲಕ ಪುತ್ತರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುವದು ಎಂದು ನುಡಿದರು.
ರಜೆ ಘೋಷಣೆಗೆ ಆಗ್ರಹ: ಕೊಡಗಿನ ಹುತ್ತರಿ ಹಬ್ಬ ಸುಮಾರು 20 ದಿನಗಳ ಕಾಲ ನಡೆಯುವ ಉತ್ಸವವಾಗಿದ್ದು, ಕದಿರು ತೆಗೆಯುವ ಮೊದಲ ಮೂರು ದಿನಗಳು ಸಂಬಂಧಿಸಿದ ಗ್ರಾಮಗಳ ಮಂದ್ಗಳಲ್ಲಿ ಸಂಜೆ ಈಡ್ ಉತ್ಸವ ಅಂದರೆ ಆಟ್-ಪಾಟ್ನ ಪೂರ್ವ ತಾಲೀಮು, ತದನಂತರ ಕದಿರು ತೆಗೆಯುವ ದಿನ ಪುತ್ತರಿ ಪೌದ್. ಮಾರನೇ ದಿನ ಊರ್ಮಂದ್ ಮತ್ತೊಂದು ದಿನ ನಾಡ್ಮಂದ್ ಮಗದೊಂದು ದಿನ ಕೇರಿಮಂದ್ ಆ ನಂತರ ಮನೆಪಾಟ್, ಕೊನೆಗೆ ಊರೊರ್ಮೆ ಕೂಟ ನಡೆಯುತ್ತದೆ. ಈ ಎಲ್ಲಾ ದಿನಗಳು ಅತ್ಯಂತ ಮಹತ್ವದ ದಿನಗಳಾಗಿದ್ದು, ಇದರಲ್ಲಿ ವಿವಿಧೆಡೆಗಳಲ್ಲಿ ನೆಲೆಸಿರುವ ಕೊಡವರು ಭಾಗವಹಿಸಲು ಅನುಕೂಲವಾಗುವಂತೆ ಸರಕಾರ ಕನಿಷ್ಟ 20 ದಿನಗಳ ಸಾರ್ವತ್ರಿಕ ರಜೆ ಘೋಷಿಸುವಂತಾಗಬೇಕು ಎಂದು ನಾಚಪ್ಪ ಆಗ್ರಹಿಸಿದರು.
ಕೊಡವ ಬುಡಕಟ್ಟು ಜಗತ್ತಿನ ಪ್ರಧಾನ ಹಬ್ಬವಾದ ಈ ಬಾರಿ ರಾಜ್ಯ ಸರ್ಕಾರ ಅಧಿಕೃತ ಸಾರ್ವತ್ರಿಕ ರಜೆ ಘೋಷಣೆ ಮಾಡಿರುವುದು ಸಿ.ಎನ್.ಸಿ ಯ ಸಾಧನೆಯಾಗಿದೆ ಎಂದು ಹೇಳಿದ ಅವರು, ಇದೇ ಸಂದರ್ಭ ನಾಡಿನ ಜನತೆಗೆ ಹುತ್ತರಿ ಹಬ್ಬದ ಶುಭಾಶಯಗಳನ್ನು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸಿಎನ್ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಕೂಪದಿರ ಸಾಬು, ಚೆಂಬಂಡ ಜನತ್ ಉಪಸ್ಥಿತರಿದ್ದರು.