ಕಣಿವೆ, ನ. 22: ಪ್ರಮುಖ ಪ್ರವಾಸಿ ತಾಣ ದುಬಾರೆಯ ಸಾಕಾನೆ ಶಿಬಿರದಲ್ಲಿ ಇದ್ದಂತಹ ಕುಶ ಎಂಬ ಆನೆ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿರುವದಾಗಿ ತಿಳಿದು ಬಂದಿದೆ. ಈ ಆನೆಯನ್ನು ಮೇಯಲು ಕಾಡಿಗೆ ಬಿಟ್ಟಂತಹ ಸಂದರ್ಭದಲ್ಲಿ ಶಿಬಿರಕ್ಕೆ ಮರಳದೇ ತಪ್ಪಿಸಿಕೊಂಡಿದೆ ಎನ್ನಲಾಗಿದೆ. ಅರಣ್ಯ ಇಲಾಖಾ ಸಿಬ್ಬಂದಿಗಳು ಮತ್ತು ಕಾವಾಡಿಗಳು ದುಬಾರೆಯ ಅರಣ್ಯದೊಳಗೆಲ್ಲಾ ಸುತ್ತಾಡಿ ಹುಡುಕಾಟ ನಡೆಸಿದರೂ ಕುಶ ಪತ್ತೆಯಾಗಿಲ್ಲ ಎನ್ನಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ವೀರಾಜಪೇಟೆಯ ಬೀಟೆಕಾಡು ಎಸ್ಟೇಟ್ನಿಂದ ಎರಡು ಆನೆಗಳನ್ನು ಸೆರೆಹಿಡಿಯಲಾಗಿತ್ತು. ದುಬಾರೆ ಶಿಬಿರದಲ್ಲಿ ಪಳಗಿಸಿದ ಬಳಿಕ ಒಂದಕ್ಕೆ ಲವ ಎಂದು ಮತ್ತೊಂದಕ್ಕೆ ಕುಶ ಎಂದು ನಾಮಕರಣ ಮಾಡಲಾಗಿತ್ತು. ಲವ ಶಿಬಿರದಲ್ಲೇ ಇದ್ದಾನೆ. ಅಂದಾಜು 28 ರ ಪ್ರಾಯದ ಕುಶ ತಲೆ ಮರೆಸಿಕೊಂಡು ಅರಣ್ಯಾಧಿಕಾರಿಗಳ ನಿದ್ದೆ ಕೆಡಿಸಿದ್ದಾನೆ. ದುಬಾರೆಯ ಸಾಕಾನೆ ಶಿಬಿರದ ಮೇಲ್ವಿಚಾರಕ ಉಪವಲಯ ಅರಣ್ಯಾಧಿಕಾರಿ ರಂಜನ್ ಅವರು ಹಗಲು, ರಾತ್ರಿ ಕುಶನ ಶೋಧದಲ್ಲಿ ತೊಡಗಿದ್ದಾರೆ.
ತಪ್ಪಿಸಿಕೊಂಡಿರುವ ಕುಶ ಆನೆಯ ಮಾವುತ ಮಣಿ ಹಾಗೂ ಕಾವಾಡಿ ರವಿ ಅವರು ತಮ್ಮ ಮುದ್ದಿನ ಆನೆ ಕುಶ ಎಲ್ಲಿದ್ದರೂ ಬೇಗ ಪತ್ತೆ ಮಾಡಿ ಶಿಬಿರಕ್ಕೆ ಮರಳಿಸು ತಾಯಿ ಎಂದು ದುಬಾರೆಯ ವನದೇವತೆ ಅಮ್ಮಾಳಮ್ಮನ ಮೊರೆ ಹೋಗಿದ್ದಾರೆ. ಶಿಬಿರದಿಂದ ಮರೆಯಾಗಿರುವ ಕುಶ ನಾಡಿನತ್ತ ಲಗ್ಗೆ ಇಟ್ಟು ಅಮಾಯಕರಿಗೆ ಕಂಟಕನಾಗದಿದ್ದರೆ ಸಾಕು. - ಕೆ.ಎಸ್. ಮೂರ್ತಿ