ಮೂರ್ನಾಡು, ಅ. 18 : ಇಲ್ಲಿಗೆ ಸಮೀಪದ ಕಾವೇರಿ ನದಿ ತಟದಲ್ಲಿರುವ ಇತಿಹಾಸ ಪ್ರಸಿದ್ಧ ಬಲಮುರಿ ಗ್ರಾಮದ ಅಗಸ್ತ್ಯೇಶ್ವರ ಹಾಗೂ ಕಾವೇರಿ ಕಣ್ವಮುನೀಶ್ವರ ದೇವಾಲಯದಲ್ಲಿ ತುಲಾ ಸಂಕ್ರಮಣದ ವಿಶೇಷ ಪೂಜಾ ಕಾರ್ಯಗಳು ಭಕ್ತಾಧಿಗಳ ಸಮ್ಮುಖದಲ್ಲಿ ಜರುಗಿತು. ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ದಿನದಂದೇ ಬಲಮುರಿಯಲ್ಲೂ ತುಲಾ ಸಂಕ್ರಮಣ ಜಾತ್ರೆ ಈ ವರ್ಷ ನಡೆದಿದೆ. ಅಗಸ್ತ್ಯೇಶ್ವರ ದೇವಾಲಯದ ಅರ್ಚಕ ಚಂದ್ರಶೇಖರ್ ಐತಾಳ್ ನೇತೃತ್ವದಲ್ಲಿ ಬೆಳಗ್ಗಿನ ಜಾವ (ಮೊದಲ ಪುಟದಿಂದ) 5 ಗಂಟೆಯಿಂದ ಧಾರ್ಮಿಕ ಕೈಂಕರ್ಯ ಗಳು ಆರಂಭಗೊಂಡು, ದೇವರಿಗೆ ಕರ್ಪೂರದಾರತಿ, ರುದ್ರಾಭಿಷೇಕ, ಕುಂಕುಮಾರ್ಚನೆ, ಮಹಾಪೂಜೆ ಜರುಗಿತು. ಬೆಳಿಗ್ಗಿನಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳು ತೀರ್ಥ ಪ್ರಸಾದ ಸ್ವೀಕರಿಸಿ, ದೇವರ ಕೃಪೆಗೆ ಪಾತ್ರರಾದರು.

ಕಾವೇರಿ ನದಿಯ ಎಡಭಾಗ ದಲ್ಲಿರುವ ಕಾವೇರಿ ಕಣ್ವ ಮುನೀಶ್ವರ ದೇವಾಲಯದಲ್ಲಿಯೂ ಪೂಜಾ ಕಾರ್ಯಕ್ರಮಗಳು ಬೆಳಿಗ್ಗಿನಿಂದ ಪ್ರಾರಂಭಗೊಂಡು ವಿವಿಧ ಊರುಗಳಿಂದÀ ಆಗಮಿಸಿದ ಭಕ್ತರು ಮೊದಲು ಕಾವೇರಿ ಕಣ್ವ ಮುನೀಶ್ವರ ದೇವಾಲಯಕ್ಕೆ ಸಾಗಿ ಹಣ್ಣುಕಾಯಿ ಪೂಜೆ ಸಲ್ಲಿಸಿ, ಅಲ್ಲಿಂದ ಅಗಸ್ತ್ಯೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.ಬಲಮುರಿ ಗ್ರಾಮದ ಭಕ್ತಾದಿ ಗಳಲ್ಲದೆ, ಮೂರ್ನಾಡು, ಪಾರಾಣೆ, ಬೇತ್ರಿ, ಹೊದ್ದೂರು, ನಾಪೋಕ್ಲು, ಕೊಂಡಂಗೇರಿ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ತೆರಳಲು ಸಾಧ್ಯವಾಗದ ಭಕ್ತರು ಬಲಮುರಿಗೆ ಬಂದು ಕಾವೇರಿ ತೀರ್ಥಸ್ನಾನ ಮಾಡಿ ಪುನೀತರಾಗಿ ತೆರಳಿದರು. ಕಾವೇರಿ ನದಿಯ ತೀರದಲ್ಲಿ ಕೇಶ ಮುಂಡನ, ಪೂರ್ವಿಕರಿಗೆ ಪಿಂಡಾರ್ಪಣೆ ಕಾರ್ಯಗಳು ನಡೆದವು.

ಪ್ರತಿವರ್ಷಕ್ಕಿಂತ ಈ ಬಾರಿ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರ ಸಂಖ್ಯೆ ಅಧಿಕಗೊಂಡಿತು. ಸುಮಾರು ಮೂರು ಸಾವಿರಕ್ಕೂ ಅಧಿಕ ಭಕ್ತಾಧಿಗಳು ದೇವಾಲಯಕ್ಕೆ ಬಂದು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಆವರಣದ ಹೊರಭಾಗಗಳಲ್ಲಿ ಆಟದ ಸಾಮಗ್ರಿ ಮಳಿಗೆಗಳು, ತಿಂಡಿ- ತಿನಿಸುಗಳ ವ್ಯಾಪಾರ ಭರದಿಂದ ಸಾಗಿತು. ಮಧ್ಯಾಹ್ನ ನೆರೆದ ಭಕ್ತಾಧಿಗಳಿಗೆ ಬಲಮುರಿ ಗ್ರಾಮದ ಪೇರಿಯಂಡ ಪೆಮ್ಮಯ್ಯ ಅವರು ಅನ್ನಸಂತರ್ಪಣೆ ಮಾಡಿದರು.

ಈ ಸಂದರ್ಭ ಅಗಸ್ತ್ಯೇಶ್ವರ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಕೊಂಗೀರಂಡ ಸಾಧು ತಮ್ಮಯ್ಯ, ಕಾರ್ಯದರ್ಶಿ ಪೊನ್ನಚ್ಚನ ಜಯ ಮತ್ತು ಸದಸ್ಯರು ಹಾಗೂ ಕಾವೇರಿ ಕಣ್ವ ಮುನೀಶ್ವರ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ನೆರವಂಡ ಎಂ. ಅಪ್ಪಚ್ಚು, ಕಾರ್ಯದರ್ಶಿ ಚೆಯ್ಯಂಡ ಗಣಪತಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದು ಬಂದ ಭಕ್ತಾಧಿಗಳಿಗೆ ಪೂಜಾ ಕಾರ್ಯದಲ್ಲಿ ಮತ್ತು ಅನ್ನಸಂತರ್ಪಣೆ ಸಂದರ್ಭ ದಲ್ಲಿ ಯಾವದೆ ಅಡಚಣೆಗಳಾಗದಂತೆ ಗಮನಹರಿಸಿದರು. -ಟಿ.ಸಿ.ಎನ್.