ಮಡಿಕೇರಿ, ಅ. 13: ಕೊಡಗು ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ವೀರಾಜಪೇಟೆ ತಾಲ್ಲೂಕು ಯುವ ಒಕ್ಕೂಟ, ಸೋಮವಾರಪೇಟೆ ತಾಲೂಕು ಒಕ್ಕೂಟ, ಮಡಿಕೇರಿ ತಾಲ್ಲೂಕು ಒಕ್ಕೂಟ ಹಾಗೂ ಪೊನ್ನಪೇಟೆಯ ನಿಸರ್ಗ ಯುವತಿ ಮಂಡಳಿಯ ಸಂಯುಕ್ತ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಯುವ ಜನ ಮೇಳದ ಪೂರ್ವ ಭಾವಿ ಸಭೆ ನಡೆಯಿತು.
ವಿರಾಜಪೇಟೆಯ ತಾಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ಶೀಲಾ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆಯ ಖಾಸಗಿ ಹೊಟೇಲ್ನ ಸಭಾಂಗಣದಲ್ಲಿ ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಪಿ.ಪಿ. ಸುಕುಮಾರ್, ವಿವಿಧ ಇಲಾಖೆ ಹಾಗೂ ಸಂಘ, ಸಂಸ್ಥೆಗಳ ಸಹಯೋಗದಲ್ಲಿ 2019-20ನೇ ಸಾಲಿನ ಜಿಲ್ಲಾಮಟ್ಟದ ಯುವಜನ ಮೇಳವನ್ನು ನವೆಂಬರ್ 20 ರಂದು ಪೊನ್ನಂಪೇಟೆಯ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಲಾಗಿದೆ ಎಂದರು.
ಯುವಜನ ಮೇಳದಲ್ಲಿ ಯುವಕ, ಯುವತಿಯರಿಗೆ ವೈಯಕ್ತಿಕ ಸ್ಪರ್ಧೆಗಳಾದ ಭಾವಗೀತೆ, ಲಾವಣೆ, ರಂಗಗೀತೆ, ಏಕಪಾತ್ರಾಭಿನಯ ಹಾಗೂ ಗುಂಪು ಸ್ಪರ್ಧೆಯಾದ ಗೀಗೀ ಪದ (5 ಜನ), ಕೋಲಾಟ (12 ಜನ), ಜಾನಪದ ನೃತ್ಯ (12 ಜನ), ಭಜನೆ (8 ಜನ), ಜನಪದ ಗೀತೆ (6 ಜನ) ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಯುವತಿಯರಿಗಾಗಿ ಜೋಳ ರಾಗಿಬೀಸುವ ಪದ (2 ಜನ), ಸೋಬಾನೆ ಪದ(4 ಜನ) ಗುಂಪು ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ನಿಸರ್ಗ ಯುವತಿ ಮಂಡಳಿಯ ಅಧ್ಯಕ್ಷೆ ರೇಖಾ ಶ್ರೀಧರ್, ಕೊಡಗು ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಸದಸ್ಯರಾದ ಇಂದು ನಾಣಯ್ಯ, ವೀರಾಜಪೇಟೆ ತಾಲೂಕು ಒಕ್ಕೂಟದ ಸದಸ್ಯ ರಾಮಕೃಷ್ಣ ಹಾಜರಿದ್ದರು.