ಕುಶಾಲನಗರ, ಅ. 12: ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಅವರು ಕುಶಾಲನಗರಕ್ಕೆ ಭೇಟಿ ನೀಡಿ ನ್ಯಾಯಾಲಯ ಸಮುಚ್ಚಯ ನಿರ್ಮಾಣ ಸ್ಥಳ ಪರಿಶೀಲನೆ ನಡೆಸಿದರು.ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಸಮುಚ್ಚಯ ಮತ್ತು ನ್ಯಾಯಮೂರ್ತಿಗಳ ವಸತಿ ಗೃಹದ ಸ್ಥಳ ಪರಿಶೀಲನೆ ನಡೆಸಿದ ನ್ಯಾಯಾಧೀಶರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ನಂತರ ಮಾತನಾಡಿದ ಅವರು, ಕುಶಾಲನಗರದಲ್ಲಿ ಈಗಾಗಲೆ ನ್ಯಾಯಾಲಯ ಕಟ್ಟಡ ನಿರ್ಮಿಸಲು ಸ್ಥಳ ಗುರುತಿಸಲಾಗಿದೆ. ಪ್ರಸಕ್ತ ಕುಶಾಲನಗರದಲ್ಲಿ ನ್ಯಾಯಾಲಯ ಕಲಾಪ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸರಕಾರ ಮತ್ತು ಉಚ್ಚ ನ್ಯಾಯಾಲಯದ ತೀರ್ಮಾನದಂತೆ ನೂತನ ಸಮುಚ್ಚಯ ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.

ನೂತನ ನ್ಯಾಯಾಲಯ ಸಮುಚ್ಚಯ ನಿರ್ಮಾಣ ಸಂಬಂಧ ಪ್ರಸ್ತಾವನೆ ಹಣಕಾಸು ಸಚಿವಾಲಯದ ಮುಂದಿದ್ದು, ಪಟ್ಟಣದ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಾಲಯದ ಅಗತ್ಯವಿದೆಯೇ ಎಂಬುದರ ಬಗ್ಗೆ ನ್ಯಾಯಮೂರ್ತಿ ಸಂದೇಶ್ ಅವರು ವಾಸ್ತವಾಂಶ ಮಾಹಿತಿ ಕಲೆಹಾಕಿದರು.

ಈ ಸಂದರ್ಭ ಸ್ಥಳದಲ್ಲಿದ್ದ ಕುಶಾಲನಗರ ಬಾರ್ ಅಸೋಸಿ ಯೇಷನ್ ಪ್ರಮುಖರು, ಕುಶಾಲನಗರ ಈಗಾಗಲೆ ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕಾರಣ ಶಾಶ್ವತ ನ್ಯಾಯಾಲಯ ಕಟ್ಟಡದ ಅವಶ್ಯಕತೆ ಇರುವ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೆ ಸೀನಿಯರ್ ಸಿವಿಲ್ ನ್ಯಾಯಮೂರ್ತಿಗಳ ಸೇವೆ ಕೂಡ ಅವಶ್ಯವಿರುವ ಬಗ್ಗೆ ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರಬಾಬು ನ್ಯಾಯಮೂರ್ತಿಗಳಿಗೆ ಬೇಡಿಕೆಯಿಟ್ಟರು.

(ಮೊದಲ ಪುಟದಿಂದ) ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಲಯದ ಬಾಡಿಗೆ ಕಟ್ಟಡಕ್ಕೆ ಭೇಟಿ ನೀಡಿದ ಸಂದೇಶ್ ಕುಮಾರ್ ಅವರು ನ್ಯಾಯಾಲಯ ಕಲಾಪ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಮಡಿಕೇರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮನು, ಜಿಲ್ಲಾ ಸತ್ರ ನ್ಯಾಯಾಧೀಶರಾದ ವಿ.ಮಲ್ಲಾಪುರ, ಉಪವಿಭಾಗಾಧಿಕಾರಿ ಜವರೇಗೌಡ, ತಹಶೀಲ್ದಾರ್ ಗೋವಿಂದರಾಜು, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಕವನ್, ಕುಶಾಲನಗರ ವಕೀಲರ ಸಂಘದ ಉಪಾಧ್ಯಕ್ಷರಾದ ವೆಂಕಟರಮಣ ರಾವ್, ಕಾರ್ಯದರ್ಶಿ ಮೋಹನ್, ಪದಾಧಿಕಾರಿಗಳಾದ ಶರತ್, ಸಂತೋಷ್‍ಕುಮಾರ್, ನಂದ, ನವೀನ್, ಲೋಕೋಪಯೋಗಿ ಸಹಾಯಕ ಅಭಿಯಂತರ ಸೈಜನ್ ಪೀಟರ್, ಕಂದಾಯ ಇಲಾಖೆಯ ಮಧುಸೂದನ್, ಗೌತಮ್ ಮತ್ತಿತರರು ಇದ್ದರು.