ಮಡಿಕೇರಿ, ಸೆ. 27: ನಗರದ ಶ್ರೀ ಚೌಡೇಶ್ವರಿ ದೇವಾಲಯ ಮಂಟಪ ಸಮಿತಿ 57ನೇ ವರ್ಷದ ದಸರಾ ಉತ್ಸವದ ಆಚರಣೆಗೆ ಸಜ್ಜಾಗುತ್ತಿದ್ದು, ಈ ಬಾರಿ ಮಹಿಷಾಸುರ ಮರ್ದಿನಿ ಕಥಾಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಚೌಡೇಶ್ವರಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಡಿ.ಪಿ. ನಾಗೇಶ್ ತಿಳಿಸಿದ್ದಾರೆ.
ಎರಡು ಟ್ರ್ಯಾಕ್ಟರ್ಗಳನ್ನು ಬಳಸಲಾಗುತ್ತಿದ್ದು, ದಿಂಡಿಗಲ್ನ ಅರುಳಣೈ ಲೈಂಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಧ್ವನಿವರ್ಧಕವನ್ನು ಬೆಂಗಳೂರಿನ ಪದ್ಮ ಸೌಂಡ್ಸ್ನವರು ಒದಗಿಸಲಿದ್ದು, ಚೆನ್ನೈನ ಡಿಜಿಟೆಕ್ ಸಂಸ್ಥೆ ಸ್ಟುಡಿಯೋ ಸೆಟ್ಟಿಂಗ್ಸ್ ಮಾಡಲಿದೆ. 27 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಕಲಾಕೃತಿಗಳನ್ನು ತಯಾರಿಸುತ್ತಿದ್ದಾರೆ.
ಪ್ಲಾಟ್ ಫಾರಂನ್ನು ಸಮಿತಿ ಸದಸ್ಯರೇ ನಿರ್ಮಿಸಲಿದ್ದು, ಟ್ರ್ಯಾಕ್ಟರ್ ಸೆಟ್ಟಿಂಗ್ ಹಾಗೂ ಕಲಾಕೃತಿಗಳಿಗೆ ಚಲನವಲನ ವ್ಯವಸ್ಥೆಯನ್ನು ಮಡಿಕೇರಿ ಪುಣ್ಯ ಕ್ರಿಯೇಷನ್ಸ್ನ ಪ್ರಮೋದ್ ಮತ್ತು ತಂಡ ಮಾಡಲಿದೆ. ಫೈರ್ ಎಫೆಕ್ಟನ್ನು ಸರಿಗಮಪ ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗಳ ಖ್ಯಾತಿಯ ಬೆಂಗಳೂರಿನ ಜಿ.ಬಿ. ಎಫೆಕ್ಟ್ನ ರಘು ನೀಡಲಿದ್ದಾರೆ. ಪುತ್ತೂರ್ದ ಮುತ್ತು ವಾದ್ಯಗೋಷ್ಠಿ ಮಂಟಪವನ್ನು ಮುನ್ನಡೆಸಲಿದೆ ಎಂದು ನಾಗೇಶ್ ವಿವರಿಸಿದರು.
ಒಟ್ಟು 14 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು, ಜನಾಕರ್ಷಣೆಗೆ ಒತ್ತು ನೀಡುವದರೊಂದಿಗೆ ಪ್ರಥಮ ಬಹುಮಾನಕ್ಕೆ ಪೈಪೋಟಿ ನೀಡಲಾಗುವದು. ಉತ್ಸವಕ್ಕಾಗಿ 150 ಮಂದಿ ಸದಸ್ಯರ ತಂಡ ಶ್ರಮಿಸುತ್ತಿದೆ ಎಂದು ನಾಗೇಶ್ ತಿಳಿಸಿದರು. - ಉಜ್ವಲ್ ರಂಜಿತ್