ಸೋಮವಾರಪೇಟೆ, ಸೆ. 27: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳಲ್ಲಿ ಕೊಳವೆ ಹುಳುವಿನ ಬಾಧೆ ಕಾಣಿಸಿಕೊಂಡಿದ್ದು, ರೈತರು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಕೀಟ ಬಾಧೆಯನ್ನು ನಿಯಂತ್ರಿಸಬೇಕೆಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಮತ್ತು ಕೃಷಿ ಅಧಿಕಾರಿ ಜಹಾನ್ ತಾಜ್ ಅವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಸಲಹೆ ನೀಡಿದ್ದಾರೆ.

ಕೊಳವೆ ಹುಳುಗಳು ಭತ್ತದ ಎಲೆಯಲ್ಲಿ ಕೊಳವೆ ಮಾಡಿಕೊಂಡು, ಎಲೆಗಳ ಹಸಿರು ಹರಿತನ್ನು ಕೆರೆದು ತಿನ್ನುತ್ತವೆ. ಬೆಳೆ ಬಿಳುಚಿಕೊಂಡು ಕಾಗದದಂತೆ ಬೆಳ್ಳಗೆ ಕಾಣುತ್ತದೆ. ನಂತರ ಈ ಕೊಳವೆ ಕತ್ತರಿಸಿ ನೀರಿನಲ್ಲಿ ಬಿದ್ದು ತೇಲುತ್ತವೆ. ಈ ಕೀಟ ಬಾಧೆ ಕೆಲವೊಮ್ಮೆ ಭಾರೀ ನಷ್ಟವನ್ನು ರೈತರಿಗೆ ತಂದೊಡ್ಡುತ್ತಿದ್ದು, ಮುಂಜಾಗ್ರತಾ ಕ್ರಮ ಮೂಲಕ ಕೀಟಬಾಧೆಯನ್ನು ಹತೋಟಿಗೆ ತರಬೇಕೆಂದು ತಿಳಿಸಿದ್ದಾರೆ.

ಇಂತಹ ಕೀಟಗಳನ್ನು ತುರ್ತು ನಿರ್ವಹಣೆ ಮಾಡಬೇಕಿದೆ. ಪೈರಿನ ಮೇಲೆ ಹಗ್ಗವನ್ನು ಎಳೆಯುವ ಮೂಲಕ ಕೊಳವೆ ಹುಳುಗಳನ್ನು ಕೆಳಗೆ ಬೀಳಿಸಬೇಕು. ಹಾಳೆಗಳಲ್ಲಿನ ನೀರನ್ನು ಸಂಪೂರ್ಣವಾಗಿ ಬಸಿಯುವಂತೆ ಮಾಡಬೇಕು. ನಂತರ ಕ್ಲೋರೋಫೈರಿಪಾಸ್ ಅಥವಾ ಕ್ವಿನಾಲ್ಫಾಸ್ ಸಿಂಪರಣೆ ಮಾಡಬೇಕು. ಈ ಹತೋಟಿ ಕ್ರಮಗಳಿಂದ ಕೀಟವನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.