ಕುಶಾಲನಗರ, ಸೆ. 15: ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ಮೂಕಾಂಬಿಕ ಪದವಿಪೂರ್ವ ಕಾಲೇಜಿನ ಮತದಾರ ಸಾಕ್ಷರತಾ ಕ್ಲಬ್ ಆಶ್ರಯದಲ್ಲಿ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ ನಡೆಯಿತು.

ಕಾಲೇಜು ಆವರಣದಿಂದ ವಿದ್ಯಾರ್ಥಿಗಳು ಕುಶಾಲನಗರ ಪಟ್ಟಣ ತನಕ ತೆರಳಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು. ಕಡ್ಡಾಯವಾಗಿ ಮತದಾನ ಮಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಪರೀಕ್ಷಿಸಿ, ಗುರುತಿನ ಚೀಟಿಯ ಲೋಪ ದೋಷಗಳನ್ನು ಪರಿಹರಿಸಿಕೊಳ್ಳಿ ಎಂಬಿತ್ಯಾದಿ ಬರಹಗಳುಳ್ಳ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಪ್ರಮುಖ ಬೀದಿಯಲ್ಲಿ ಸಾಗಿದರು.

ಕುಶಾಲನಗರ ಪ್ರವಾಸಿ ಮಂದಿರದ ಮುಂಭಾಗದ ವೃತ್ತದಲ್ಲಿ ಬೀದಿ ನಾಟಕ ಪ್ರದರ್ಶಿಸುವ ಮೂಲಕ ಮತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಕಾಲೇಜು ಪ್ರಾಂಶುಪಾಲ ಯೋಗೇಶ್, ಉಪನ್ಯಾಸಕರಾದ ಕೆ.ಪಿ. ಚಂದನ್, ಸ್ಪರ್ಶ, ಶ್ರೇಣಿ, ದೇವಮ್ಮ ಇದ್ದರು.