ಮಡಿಕೇರಿ, ಸೆ. 6 : ಕೊಡವರ ವಿಶಿಷ್ಟ ಸಂಸ್ಕøತಿ, ಆಚಾರ, ವಿಚಾರಗಳು ಅನಾವರಣಗೊಳ್ಳಲು ಕೊಡಗಿನ ಸಾಂಪ್ರದಾಯಿಕ ಹಬ್ಬಗಳು ಹೆಚ್ಚು ಸಹಕಾರಿಯಾಗಿವೆ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕೊಡವ ಸಮಾಜಗಳ ಒಕ್ಕೂಟ ಮತ್ತು ಪೊಮ್ಮಕ್ಕಡ ಕೂಟದ ವತಿಯಿಂದ ಬಾಳುಗೋಡಿನ ಕೊಡವ ಸಮಾಜದಲ್ಲಿ “ಕೈಲ್ ಪೊಳ್ದ್” ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ವರ್ಷ ಪ್ರಾಕೃತಿಕ ವಿಕೋಪ ಸಂಭವಿಸಿದ ಕಾರಣ ಒಕ್ಕೂಟದ ವತಿಯಿಂದ ಪ್ರತಿವರ್ಷ ಆಚರಿಸುತ್ತಿದ್ದ ಹಬ್ಬವನ್ನು ರದ್ದುಗೊಳಿಸಲಾಗಿತ್ತು, ಆದರೆ ಈ ಬಾರಿ ಮಳೆ ಇದ್ದರೂ ಸಾಂಪ್ರದಾಯಿಕ ವಾಗಿ ಕೊಡಗಿನ “ಕೈಲ್ ಪೊಳ್ದ್” ನ್ನು ಸರಳವಾಗಿ ಆಚರಿಸುವದು ಅನಿವಾರ್ಯವಾಯಿತು ಎಂದರು.

ಕೊಡಗಿನ ವಿಶಿಷ್ಟ ಸಂಸ್ಕøತಿಯನ್ನು ಮುಂದಿನ ಪೀಳಿಗೆಗಾಗಿ ಉಳಿಸಿ, ಬೆಳೆಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕೆಂದು ಕರೆ ನೀಡಿದರು.

ಒಕ್ಕೂಟದ ಕಾರ್ಯಕ್ರಮಗಳಲ್ಲಿ ಪೊಮ್ಮಕ್ಕಡ ಕೂಟದ ಸಹಕಾರವನ್ನು ವಿಷ್ಣು ಕಾರ್ಯಪ್ಪ ಇದೇ ಸಂದರ್ಭ ಸ್ಮರಿಸಿದರು.

ಸಮಾಜದ ವೇದಿಕೆಯಲ್ಲಿ ಕೋವಿ, ಕತ್ತಿ ಸೇರಿದಂತೆ ಕೊಡವ ಸಾಂಪ್ರದಾಯಿಕ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನೆಲ್ಲಕ್ಕಿಯಲ್ಲಿ ದೀಪವನ್ನಿಟ್ಟು, ಕುಲದೇವತೆ ಕಾವೇರಿ ಮಾತೆ, ಶ್ರೀ ಇಗ್ಗುತ್ತಪ್ಪ, ಈಶ್ವರ, ಕಾಳಿಮಾತೆಯನ್ನು ಪ್ರಾರ್ಥಿಸಿ, ಗುರು ಹಿರಿಯರನ್ನು ಸ್ಮರಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ವಿವಿಧ ಆಟೋಟದ ಸ್ಪರ್ಧೆಗಳು ನಡೆದವು. ಹೌಸಿ, ಹೌಸಿ ಸ್ಪರ್ಧೆಯಲ್ಲಿ ಗುಡ್ಡಂಡ ರೇಖಾ ಪ್ರಥಮ, ಕಾಡ್ಯಮಾಡ ಕೃಪಾ ದ್ವೀತಿಯ, ಜಮುನಾ ತೃತೀಯ ಬಹುಮಾನವನ್ನು ಪಡೆದುಕೊಂಡರು.

ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಪ್ರಥಮ, ಸಿ.ಟಿ.ಚೇತನ್ ದ್ವಿತೀಯ, ಎ.ಸಿ.ಪ್ರದೀಪ್ ತೃತೀಯ ಬಹುಮಾನವನ್ನು ಪಡೆದುಕೊಂಡರು.

ಸಂಜೆ ಬೆಕ್ಕೆಸೊಡ್ಲೂರು ಮಂದತವ್ವ ತಂಡದಿಂದ ಗೆಜ್ಜೆ ತಂಡ್ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಒಕ್ಕೂಟದ ಗೌರವ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಸ್ವಾಗತಿಸಿ, ಪೊಮ್ಮಕ್ಕಡ ಕೂಟದ ಗೌರವ ಕಾರ್ಯದರ್ಶಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ವಂದಿಸಿದರು. ಕೂಟದ ಅಧ್ಯಕ್ಷರಾದ ಇಮ್ಮಿ ಉತ್ತಪ್ಪ ಕಾರ್ಯಕ್ರಮ ನಿರ್ವಹಿಸಿದರು.