ಮಡಿಕೇರಿ, ಸೆ. 1: ಕೊಡಗು-ಕೇರಳ ಸಂಪರ್ಕ ಕಲ್ಪಿಸುವ ಮಾಕುಟ್ಟ ರಾಜ್ಯ ಹೆದ್ದಾರಿಯು ಮಳೆಯಿಂದ ಅಲ್ಲಲ್ಲಿ ಹಾನಿಗೀಡಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವೀರಾಜಪೇಟೆಯಿಂದ ಕೇರಳದ ಗಡಿ ಭಾಗ ಕೂಟುಹೊಳೆವರೆಗೆ ಸಂಚರಿಸಲು 2 ಕೆಎಸ್‍ಆರ್‍ಟಿಸಿ ಮಿನಿ ಬಸ್‍ಗಳಿಗೆ ಇಂದು ಚಾಲನೆ ನೀಡಲಾಯಿತು. ವೀರಾಜಪೇಟೆ ಬಸ್ ನಿಲ್ದಾಣದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿ ಕೇರಳ ಗಡಿ ಕೂಟುಹೊಳೆವರೆಗೆ ಬಸ್‍ನಲ್ಲಿ ಪ್ರಯಾಣಿಸಿದರು. ಈ ಬಸ್‍ಗಳು ಬೆಳಿಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆವರೆಗೆ ವೀರಾಜಪೇಟೆ ಬಸ್ ನಿಲ್ದಾಣದಿಂದ ಕೂಟುಹೊಳೆವರೆಗೆ ಪ್ರತಿ ಗಂಟೆಗೊಮ್ಮೆ ಸಂಚರಿಸಲಿವೆ.