ಕೂಡಿಗೆ, ಆ. 21: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಬ್ರಿಟೀಷರ ಕಾಲದಲ್ಲಿ ಗೋ ಸಂರಕ್ಷಣೆಗಾಗಿ ನಿರ್ಮಿಸಲಾಗಿದ್ದ ಗೋ ಸದನವನ್ನು (ಕೊಟ್ಟಿಗೆ) ಮುಚ್ಚಿದ್ದು, ಈ ಕೇಂದ್ರವನ್ನು ಮರು ಪ್ರಾರಂಭಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು. ಇದಕ್ಕೆ ಒಪ್ಪಿರುವ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಮರು ಪ್ರಾರಂಭಿಸಲು ಸೂಚನೆ ನೀಡಿದ್ದು, ಶೀಘ್ರದಲ್ಲೇ ಗೋ ಸದನ ಮರು ಪ್ರಾರಂಭವಾಗಲಿದೆ.

ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಗೋ ಸಾಕಾಣಿಕ ಕೇಂದ್ರವನ್ನು ಕಳೆದ 75 ವರ್ಷಗಳಿಂದ ಹುದುಗೂರು ಗ್ರಾಮಸ್ಥರುಗಳಿಗೆ ಅನುಕೂಲವಾಗುವಂತೆ ಅಲ್ಲಿನ ಹಿರಿಯ ತಲೆಮಾರಿನವರು ತಮ್ಮ ತಮ್ಮ ಹಸುಗಳನ್ನು ಆ ಸ್ಥಳದಲ್ಲಿ ಕಟ್ಟಿ ಸಂರಕ್ಷಣೆ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಪಕ್ಕದಲ್ಲಿದ್ದ ಸುಮಾರು 2 ಎಕರೆ ಪ್ರದೇಶದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ರೈತರಿಗೆ ವಿತರಣೆ ಮಾಡಲು ಸಸಿಗಳನ್ನು ಬೆಳೆಸಲು ಉಪಯೋಗಿಸುತ್ತಿದ್ದರು. ಆದರೆ ಇದೀಗ ಜಾಗವನ್ನು ಸಮತಟ್ಟು ಮಾಡಿ ಗಿಡಗಳನ್ನು ಬೆಳೆಸಲಾಗುತ್ತಿದೆ. ಆದರೆ, ಸಾಮಾಜಿಕ ಅರಣ್ಯ ಇಲಾಖೆಯವರಿಗೆ ಬದಲಿ ಜಾಗವು ಇರುವದರಿಂದ ಆ ಜಾಗದಲ್ಲಿಯೇ ನರ್ಸರಿ ಗಿಡಗಳನ್ನು ಬೆಳೆಸಬಹುದು.

ಸರ್ವೇ ನಂ. 2/1 ಜಾಗವು ಸರ್ಕಾರಿ ಜಾಗವು ಕಳೆದ 20 ವರ್ಷಗಳಿಂದಲು ಗೋ ಸದನಕ್ಕಾಗಿ ಮೀಸಲಿಡಲು ಗ್ರಾಮ ಪಂಚಾಯ್ತಿಯ ಮಾಸಿಕ ಸಭೆಯಲ್ಲಿ ತೀರ್ಮಾನಿಸಿ ಪ್ರಸ್ತಾವನೆಯ ಮುಖೇನ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಹುದುಗೂರು ಗ್ರಾಮಗಳ ವ್ಯಾಪ್ತಿಯಲ್ಲಿ ಮದಲಾಪುರ, ಮಾವಿನಹಳ್ಳ, ಸೀತೆಗದ್ದೆ, ಹುಣಸೇಪಾರೆ, ಬ್ಯಾಡಗೊಟ್ಟ ಈ ಗ್ರಾಮಗಳಲ್ಲಿ ಹೆಚ್ಚು ಜನರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಇದರ ಸಮೀಪದಲ್ಲಿ ಪಶುಪಾಲನಾ ಇಲಾಖೆಯ ಪಶು ವೈದ್ಯಕೀಯ ಕೇಂದ್ರವು ಇದೆ.

ಈ ಕೇಂದ್ರದ ಆಸುಪಾಸಿನಲ್ಲಿಯೇ ಹಾರಂಗಿ ನದಿಯೂ ಹರಿಯುತ್ತಿದ್ದು, ಹಸುಗಳಿಗೆ ಬೇಕಾಗುವ ಹುಲ್ಲು ಬೆಳೆಯಲು ನೀರಿನ ವ್ಯವಸ್ಥೆ, ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಚಿಕಿತ್ಸೆ ನೀಡಿಸಲು ಪಶು ವೈದ್ಯಕೀಯ ಶಾಲೆಯು ಇರುವದರಿಂದ, ಉತ್ತಮವಾದ ಬ್ರಿಟೀಷರ ಕಾಲದಲ್ಲಿ ನಿರ್ಮಿಸಿರುವ ಗೋ ಸದನವೂ ಇನ್ನೂ ಸುಸ್ಥಿತಿಯಲ್ಲೇ ಇರುವದರಿಂದ ಹಸು ಮತ್ತು ಕರುಗಳನ್ನು ಬೇರೆ ಬೇರೆ ಕಟ್ಟಲು ಬೇರೆ ಕೊಠಡಿಗಳು, ಹುಲ್ಲು ಸಂಗ್ರಹದ ಕೊಠಡಿ ಜಾನುವಾರುಗಳ ಸಂರಕ್ಷಣೆಗೆ ಈ ವ್ಯಾಪ್ತಿಯಲ್ಲಿ ಇದೊಂದೆ ಸೂಕ್ತ ಎನಿಸುವದರಿಂದ ಈ ಗೋ ಸದನವನ್ನು ಪುನರ್ ಪ್ರಾರಂಭಿಸಿ, ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಪ್ರೋತ್ಸಾಹ ನೀಡಬೇಕಾಗಿದೆ.

ಈ ಜಾಗಕ್ಕೆ ಸಂಬಂಧಪಟ್ಟಂತೆ ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಮತ್ತು ಗ್ರಾಮ ಸಭೆಗಳಲ್ಲಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಚರ್ಚೆ ನಡೆಸಿ, ಇದೀಗ ಜಿಲ್ಲಾ ಪಂಚಾಯಿತಿ ಅಧೀನದಲ್ಲಿರುವದರಿಂದ ಈ ಜಾಗವನ್ನು ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುದುಗೂರು ಸೇರಿದಂತೆ ನಾಲ್ಕು ಗ್ರಾಮಗಳ ದನ-ಕರುಗಳಿಗೆ ಅನುಕೂಲವಾಗಲು ಇರುವ ಕಟ್ಟಡವನ್ನು ದುರಸ್ತಿಗೊಳಿಸಿಕೊಂಡು ಗೋ ಸಂರಕ್ಷಣೆ ಮಾಡಲು ಅನುವು ಮಾಡಿಕೊಡಬೇಕೆಂದು ಶಾಸಕರಿಗೆ, ಜಿಲ್ಲಾಧಿಕಾರಿಯವರಿಗೂ, ಪಶು ಸಂಗೋಪನ ಸಚಿವರಿಗೂ, ಜಿಲ್ಲೆಯ ಪಶುಪಾಲನ ಇಲಾಖೆಯ ನಿರ್ದೇಶಕರಿಗೆ ಪತ್ರ ವ್ಯವಹಾರ ಮಾಡಲಾಗಿತ್ತು. ಇದೀಗ ಸ್ಪಂದಿಸಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಮರು ಪ್ರಾರಂಭಿಸಲು ಪಶುಪಾಲನಾ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆ ಎರಡು ಎಕರೆ ಪ್ರದೇಶದಲ್ಲಿ ಈಗಾಗಲೇ ಅರಣ್ಯ ಇಲಾಖೆಯವರು ಬೆಳೆಸಿದುವ ನರ್ಸರಿ ಗಿಡಗಳನ್ನು ಕೂಡಲೇ ತೆರವು ಗೊಳಿಸಿ, ಸಮತಟ್ಟುಮಾಡಿ, ಕಟ್ಟಡ ವನ್ನು ಶುಚಿತ್ವಗೊಳಿಸಿ ಸಂಬಂಧಪಟ್ಟ ಇಲಾಖೆಯವರಿಗೆ ಒದಗಿಸುವಂತೆ ಸೂಚಿಸಿರುವದು ತಿಳಿದುಬಂದಿದೆ.

- ಕೆ.ಕೆ. ನಾಗರಾಜ್‍ಶೆಟ್ಟಿ