ಗೋಣಿಕೊಪ್ಪಲು, ಆ. 13: ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ಪರಿಹಾರ ಕೇಂದ್ರವನ್ನು ಆರಂಭಿಸಿದ್ದು, ಟಿ. ಶೆಟ್ಟಿಗೇರಿ ಹಾಗೂ ಬೀರುಗದ ಸುಮಾರು 116 ಮಂದಿ ಆಶ್ರಯ ಪಡೆದಿರುವದಾಗಿ ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷೆ ಚೋಕಿರ ಕಲ್ಪನಾ ತಿಳಿಸಿದ್ದಾರೆ.
ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗೆ ಕಂದಾಯ ಇಲಾಖೆ ವತಿಯಿಂದ ಚಾಪೆ ಮತ್ತು ಕಂಬಳಿ ವಿತರಿಸಲಾಗಿದ್ದು, ಎಲ್ಲರಿಗೂ ಊಟೋಪಚಾರವನ್ನು ವ್ಯವಸ್ಥಿತವಾಗಿ ನೀಡಲಾಗಿದೆ. ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಬಿಜೆಪಿ ಪ್ರಮುಖರಾದ ಕಿಲನ್ಗಣಪತಿ, ಗಿರೀಶ್ ಗಣಪತಿ, ಗ್ರಾ.ಪಂ. ಸದಸ್ಯ ಚೋನಿರ ಕಾಳಯ್ಯ ಇದ್ದರು. ಪರಿಹಾರ ಕೇಂದ್ರದ ನೋಡೆಲ್ ಅಧಿಕಾರಿಯಾಗಿ ವೀರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಕಾರ್ಯನಿರ್ವಹಿಸುತ್ತಿದ್ದು, ಕಂದಾಯ ಇಲಾಖೆಯ ನಿರೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ಉಸ್ತುವಾರಿ ವಹಿಸಿದ್ದಾರೆ.
- ಟಿ.ಎಲ್.ಎಸ್.