ಶ್ರೀಮಂಗಲ, ಆ. 13: ಕೊಡಗಿನಲ್ಲಿ ಕಳೆದ 10 ದಿನಗಳಿಂದ ಸುರಿದು ಕಳೆದ 2 ದಿನದಿಂದ ಬಿಡುವು ನೀಡಿರುವ ಮಹಾಮಳೆಯ ಅವಾಂತರ ಪ್ರಮುಖ ಬೆಳೆ ಕಾಫಿ ಕಾಳುಮೆಣಸು, ಭತ್ತ ಮತ್ತು ಅಡಿಕೆ ಬೆಳೆಗಳಿಗೆ ದುಷ್ಪರಿಣಾಮ ಬೀರಿದ್ದು ಮಾತ್ರವಲ್ಲದೆ ಜಿಲ್ಲೆಯ ರೈತರ ಉಪ ಕಸುಬಾಗಿ ಆದಾಯ ಮೂಲವಾದ ಮೀನು ಸಾಕಾಣೆಯ ಮೇಲೆಯು ಪರಿಣಾಮ ಬೀರಿದೆ.
ಪ್ರವಾಹದಿಂದ ಕೆರೆಗಳ ಮುಳುಗಡೆ ಮತ್ತು ಅಧಿಕ ಮಳೆಯಿಂದ ಕೆರೆಗಳು ನೆಲಸಮ ವಾಗಿರುವದರಿಂದ ಕೆರೆಯಲ್ಲಿನ ಮೀನುಗಳÀು ಪ್ರವಾಹದ ಪಾಲಾಗಿವೆ. ದಕ್ಷಿಣ ಕೊಡಗಿನ ಲಕ್ಷ್ಮಣ ತೀರ್ಥ ಪ್ರವಾಹವು ನದಿ ಪಾತ್ರದಲ್ಲಿದ್ದ ಗದ್ದೆಗಳಲ್ಲಿ ನಿರ್ಮಿಸಿದ್ದ ಕೆರೆಗಳಿಗೆ ನುಗ್ಗಿ ದ್ದರಿಂದ ಮತ್ತು ಬಹಳಷ್ಟು ಕೆರೆಗಳನ್ನು ಪ್ರವಾಹ ಮುಳುಗಡೆ ಗೊಳಿಸಿದ್ದರಿಂದ ಸಾವಿರಾರು ಮೀನು ಗಳು ಪ್ರವಾಹದಲ್ಲಿ ಸೇರಿಕೊಂಡವು ಅಲ್ಲದೆ ಮೀನುಗಳು ಕೊಚ್ಚಿಕೊಂಡು ಹೋಗಿವೆ. ಬಾಳೆಲೆ ಸಮೀಪ ಜಾಗಲೆ ಗ್ರಾಮದ ಪ್ರಗತಿಪರ ರೈತ ಬಾಳೆಲೆ ಎ.ಪಿ.ಎಂ.ಸಿ. ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಅವರ ಕೆರೆ ಪ್ರವಾಹ ನೀರಿನಿಂದ ಮುಳುಗಡೆ ಯಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಲಕ್ಷ್ಮಣ ತೀರ್ಥ ನದಿಯ ಪ್ರವಾಹಕ್ಕೆ ತುತ್ತಾಗಿರುವ ಶ್ರೀಮಂಗಲ, ಟಿ. ಶೆಟ್ಟಿಗೇರಿ, ಬಲ್ಯಮಂಡೂರು, ನಾಲ್ಕೇರಿ, ಕಾನೂರು, ಬಾಳೆಲೆ, ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ಬಹಳಷ್ಟು ಗ್ರಾಮಗಳಲ್ಲಿ ಪ್ರವಾಹದಿಂದ ಕೆರೆಗಳಿಗೆ ಹಾನಿಯಾಗಿ ಮೀನು ಸಾಕಾಣಿಕೆಗೆ ದೊಡ್ಡ ನಷ್ಟವಾಗಿದೆ.
ಉದುರುತ್ತಿರುವ ಕಾಫಿ: ಧಾರಾಕಾರ ಮಳೆಯಿಂದ ಮತ್ತು ಗಾಳಿ ಯಿಂದ ಕಾಫಿ ಗಿಡಗಳು ತೀವ್ರವಾಗಿ ಅಲುಗಾಡಿ ಹೋಗಿದ್ದು, ಗಿಡದ ಬುಡದಲ್ಲಿ ನಿರಂತರ ನೀರು ನಿಂತು ಅಧಿಕ ತೇವಾಂಶದಿಂದ ಕಾಫಿ ಕಾಯಿ ಗಳು ನೆಲ ಕಚ್ಚಿವೆ. ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ಕಾಫಿ ಫಸಲಿಗೆ ಧಕ್ಕೆ ಉಂಟಾಗಿದೆ. ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಲಕ್ಷ್ಮಣ ತೀರ್ಥ ಪ್ರವಾಹ ಇಳಿಮುಖಗೊಂಡ ಬೆನ್ನಲ್ಲೇ ಪ್ರವಾಹದಿಂದ ಉಂಟಾದ ಹಾನಿ ಗೋಚರವಾಗುತ್ತಿದೆ. ಗ್ರಾಮದ ರೈತ ಮಚ್ಚಮಾಡ ಅನೀಶ್ ಮಾದಪ್ಪ ಅವರ ಸುಮಾರು 5 ಎಕರೆಯಲ್ಲಿ ನಾಟಿ ಮಾಡಿದ್ದ ಭತ್ತದ ಗದ್ದೆಗೆ ಪ್ರವಾಹದಿಂದ ಕೊಚ್ಚಿ ಹೋಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.