ಕೂಡಿಗೆ, ಜೂ. 15: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಮೈಸೂರು ವಿಭಾಗೀಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಎಂಟು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯು ಕೂಡಿಗೆಯ ಸರ್ಕಾರಿ ಕ್ರೀಡಾಪ್ರೌಢಶಾಲೆಯ ಸಭಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಜಿ.ಕಲ್ಪನಾ ಅವರ ನೇತೃತ್ವದಲ್ಲಿ ನಡೆಯಿತು.

ಮೈಸೂರು ವಿಭಾಗಕ್ಕೆ ಸಂಬಂಧಪಟ್ಟ ಎಂಟು ಜಿಲ್ಲೆಗಳಾದ ಕೊಡಗು, ಹಾಸನ, ಮೈಸೂರು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ 2019-20ನೇ ಸಾಲಿಗೆ ಕೈಗೆತ್ತಿಕೊಳ್ಳಲು ಉದ್ದೇಶಿಸ ಲಾದ ಹೊಸ ಕಾಮಗಾರಿಗಳ ಪ್ರಸ್ತುತ ಹಂತದ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಆಯಾ ಜಿಲ್ಲೆಗಳ ಸಹಾಯಕ ನಿರ್ದೇಶಕರ ಅಭಿಪ್ರಾಯ ಮತ್ತು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳ ಪ್ರಗತಿಯ ಬಗ್ಗೆ ಸಮರ್ಪಕ ಮಾಹಿತಿ ಪಡೆದರು. ನಂತರ ಎಂಟು ಜಿಲ್ಲೆಗಳ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಂದ ಇಲಾಖೆಗೆ ಸಂಬಂಧ ಪಟ್ಟಂತೆ ಕೈಗೊಂಡ ಕಾಮಗಾರಿಗಳು, ಖರ್ಚು ವೆಚ್ಚ ಮತ್ತು ವಸತಿ ನಿಲಯಗಳ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದು, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಮತ್ತು ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಯಾವ ರೀತಿ ಇಲಾಖೆಗೆ ಸದ್ಬಳಕೆ ಮಾಡಬೇಕು ಎಂಬದರ ಬಗ್ಗೆ, ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿಗೊಳಿಸ ಬೇಕು ಎಂಬದರ ಬಗ್ಗೆ ಚರ್ಚೆ ನಡೆಸಿ, ಸೂಚನೆ ನೀಡಿದರು.

ಮೈಸೂರು ವಿಭಾಗೀಯ ಮಟ್ಟದ ಸಭೆಯು ಇದುವರೆಗೆ ಮೈಸೂರು ಮತ್ತು ಮಂಡ್ಯಗಳಲ್ಲಿ ನಡೆಯುತ್ತಿತ್ತು. ಇದೀಗ ಕೊಡಗು ಜಿಲ್ಲೆಯ ಕೂಡಿಗೆ ಕ್ರೀಡಾಶಾಲೆಯ ಆವರಣದಲ್ಲಿ ರಾಜ್ಯ ಮಟ್ಟದ ಈ ಪ್ರಗತಿ ಪರಿಶೀಲನೆ ಸಭೆ ನಡೆದಿದ್ದು, ಅಸಮರ್ಪಕ ಕಾಮಗಾರಿ ಗಳು, ಅಭಿವೃದ್ಧಿಗಳು ಆಗದೇ ಇರುವ ಹಾಗೂ ಸಮರ್ಪಕ ಮಾಹಿತಿಯನ್ನು ನೀಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದೆ ಆಗಬೇಕಾಗಿರುವ ಕಾಮಗಾರಿಗಳ ಕ್ರಿಯಾಯೋಜನೆ, ಅಂದಾಜು ವೆಚ್ಚಗಳ ಬಗ್ಗೆ, ಪ್ರಸ್ತುತ ಹಂತದಲ್ಲಿರುವ ಕಾಮಗಾರಿಗಳ ಸಮರ್ಪಕ ವಿವರವನ್ನು ನೀಡಬೇಕು ಎಂದು ಆದೇಶಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ್, ಜಂಟಿ ನಿರ್ದೇಶಕ ಸುಭಾಷ್, ಉಪನಿರ್ದೇಶಕ ಡಾ.ಜಿತೇಂದ್ರಶೆಟ್ಟಿ, ಸತೀಶ್ ಸಜನ್‍ನವರ್, ರಮೇಶ್ ಮತ್ತು ಎಂಟು ಜಿಲ್ಲೆಗಳ ಸಹಾಯಕ ನಿರ್ದೇಶಕರು, ಎಂಟು ಜಿಲ್ಲೆಗಳ ಯುವ ಸ್ಪಂದನ ಸಂಸ್ಥೆಯ ಸಂಯೋಜಕರು ಹಾಗೂ ಕೂಡಿಗೆ ಕ್ರೀಡಾ ಪ್ರೌಢಶಾಲೆಯ ಮುಖ್ಯೋಪಾದ್ಯಾಯಿನಿ ಕುಂತಿಬೋಪಯ್ಯ ಇದ್ದರು.